ತೀರ್ಥಹಳ್ಳಿ: ಹಣದುಬ್ಬರ, ನಿರುದ್ಯೋಗದಂತಹ ಗಂಭೀರ ಸಮಸ್ಯೆಯಿಂದ ದೇಶ ನಲುಗಿದೆ. ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಜನಸಾಮಾನ್ಯರಿಗೆ ಕಂಟಕವಾಗಿದೆ. ಈಶ್ವರಪ್ಪ ಹಣ ಎಣಿಸುವ ಯಂತ್ರದಂತೆ ಅಧಿಕಾರಿ, ಗುತ್ತಿಗೆದಾರನನ್ನು ಪೀಡಿಸುತ್ತಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರುಳೀಧರ್ ಹಾಲಪ್ಪ ಆರೋಪಿಸಿದರು.
ಸಂತೋಷ್ ಪಾಟೀಲ ಆತ್ಮಹತ್ಯೆ ಸಂಬಂಧ ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ಏಪ್ರಿಲ್ 25ರಂದು ಶಿವಮೊಗ್ಗದಲ್ಲಿ ನಡೆಯುವ ಪ್ರತಿಭಟನೆ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
‘ಶಾಂತವೇರಿ ಗೋಪಾಲಗೌಡ, ಕಡಿದಾಳು ಮಂಜಪ್ಪ ಅವರಂತಹ ಧೀಮಂತ ರಾಜಕಾರಣಿಗಳ ತವರು ಕ್ಷೇತ್ರದಿಂದ ಆಯ್ಕೆಯಾಗಿರುವ ಗೃಹ ಸಚಿವ ಆರಗ ಜ್ಞಾನೇಂದ್ರರ ಆಡಳಿತ ವಿಫಲವಾಗಿದೆ. ಗೃಹ ಇಲಾಖೆಯ ಅಕ್ರಮ ಬಡ ವಿದ್ಯಾರ್ಥಿಗಳ ಬಾಳಿಗೆ ಕಪ್ಪುಚುಕ್ಕೆಯಾಗಲಿದೆ. ನೇಮಕಾತಿ ಅವ್ಯವಹಾರ ಸಂಬಂಧ ಗೃಹ ಸಚಿವರ ಗುಡ್ಡೇಕೊಪ್ಪದ ನಿವಾಸದಿಂದ ಪಾದಯಾತ್ರೆ ನಡೆಸಲಿದ್ದೇವೆ’ ಎಂದರು.
ಕೆಪಿಸಿಸಿ ಉಪಾಧ್ಯಕ್ಷ ಪಿ.ವಿ. ಮೋಹನ್, ‘ಮಲೆನಾಡು, ಕರಾವಳಿ ಭಾಗದ ನಾಗರಿಕರು ಕೋಮು ಸಾಮರಸ್ಯ ಹಾಳು ಮಾಡುವ ಬಿಜೆಪಿ ಸರ್ಕಾರದ ಪಿತೂರಿಗೆ ತಕ್ಕ ಉತ್ತರ ನೀಡಲು ಸಿದ್ಧರಾಗಬೇಕು. ಕಾಂಗ್ರೆಸ್ಗೆ ಇನ್ನಷ್ಟು ಶಕ್ತಿ ಕೊಡಬೇಕು’ ಎಂದು ಹೇಳಿದರು.
ಜಿಲ್ಲೆಯ ಲಂಚಬಾಕತನ ಕಡಿಮೆಯಾದರೆ ರಾಜ್ಯ ಉಳಿಯಲಿದೆ. ಶಿವಮೊಗ್ಗದ ಜನರು ಪ್ರಶ್ನಿಸುವ ಮೂಲಕ ಭ್ರಷ್ಟಾಚಾರ ನಿರ್ಮೂಲನೆಗೆ ಪಣ ತೊಡಬೇಕು ಎಂದು ಅವರು ಮನವಿ ಮಾಡಿದರು.
ಸಭೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶಬನಮ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಸ್ತೂರು ಮಂಜುನಾಥ, ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಮುಡುಬರಾಘವೇಂದ್ರ, ಯುವ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಆದರ್ಶ ಹುಂಚದಕಟ್ಟೆ, ಯುವ ಕಾಂಗ್ರೆಸ್ ಅಧ್ಯಕ್ಷ ಅಮರನಾಥ ಶೆಟ್ಟಿ, ಮುಖಂಡರಾದ ಹಾರೋಗೊಳಿಗೆ ಪದ್ಮನಾಭ, ಕಡ್ತೂರು ದಿನೇಶ್, ಡಿ. ಲಕ್ಷ್ಮಣ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.