ಭದ್ರಾವತಿ: ನಗರದ ಲಯನ್ಸ್ ಸಂಸ್ಥೆಯು 57 ವರ್ಷಗಳಿಂದ ನಿಸ್ವಾರ್ಥವಾಗಿ ಉತ್ತಮ ಕಾರ್ಯಗಳನ್ನು ಮಾಡುವ ಮೂಲಕ ಜಿಲ್ಲೆಯಲ್ಲಿ ಮಾದರಿ ಕ್ಲಬ್ ಆಗಿದೆ ಎಂದು ಸಂಸ್ಥೆಯ ಮಾಜಿ ಜಿಲ್ಲಾ ರಾಜ್ಯಪಾಲ ಎನ್.ಎಂ. ಹೆಗಡೆ ತಿಳಿಸಿದರು.
ನಗರದ ಲಯನ್ಸ್ ಕ್ಲಬ್ ಏರ್ಪಡಿಸಿದ್ದ 2023-24ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ, ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ ಅವರು ಮಾತನಾಡಿದರು.
ಸಮಾಜದಲ್ಲಿನ ಪ್ರತಿಯೊಬ್ಬರೂ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಲು ಲಯನ್ಸ್ ಕ್ಲಬ್ ವೇದಿಕೆಯಾಗಿದೆ. ಆರೋಗ್ಯ ಉಚಿತ ತಪಾಸಣೆ, ದಂತ ಚಿಕಿತ್ಸೆ ತಪಾಸಣಾ ಶಿಬಿರ, ನೇತ್ರ ಉಚಿತ ಶಸ್ತ್ರ ಚಿಕಿತ್ಸೆ, ಶಾಲಾ-ಕಾಲೇಜುಗಳಿಗೆ ಅಗತ್ಯ ಪರಿಕರಗಳನ್ನು ನೀಡುವುದು, ಅಂಗವಿಕಲರ ಶಾಲೆಗಳ ಅಭಿವೃದ್ಧಿಗೆ ಸಹಾಯ, ಬಡ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರಗಳನ್ನು ನೀಡುವ ಮೂಲಕ ಅವರ ಸ್ವಾವಲಂಬಿ ಬದುಕಿಗೆ ಸಂಸ್ಥೆಯು ಬೆಳಕಾಗುತ್ತಿದೆ ಎಂದರು.
ರವಿರಾಜ್ ನಾಯಕ್, ದೇವರಾಜ್, ಚಂದ್ರಶೇಖರ್, ರಮೇಶ್, ಜಿ.ಪಿ. ದರ್ಶನ್ ಸೇರಿ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಗರದ ರೈಲು ನಿಲ್ದಾಣದ ಎದುರು ₹ 3.5 ಲಕ್ಷ ವೆಚ್ಚದಲ್ಲಿ ಕಂಬದ ಗಡಿಯಾರ (ಟವರ್ ಕ್ಲಾಕ್) ನಿರ್ಮಾಣಕ್ಕೆ ಹಾಗೂ ಲಯನ್ಸ್ ಕ್ಲಬ್ ವಿವಿಧ ಸೇವಾ ಚಟುವಟಿಕೆಗೆ ಧನಸಹಾಯ ಮಾಡಿದ ದಾನಿಗಳನ್ನು ಸನ್ಮಾನಿಸಲಾಯಿತು.
ದಿವಂಗತ ಕೆ.ಸಿ. ವೀರಭದ್ರ ಸ್ಮರಣಾರ್ಥ ಏರ್ಪಡಿಸಿದ್ದ ಜಿಲ್ಲಾ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ನಿಖಿತಾ ಪ್ರಾರ್ಥನೆ ಮಾಡಿದರು. ಎ.ಎನ್. ಕಾರ್ತಿಕ್ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ನಾಗರಾಜ ಅತಿಥಿಗಳ ಪರಿಚಯ ಮಾಡಿದರು ಎಸ್.ಜಿ. ಶಂಕರಮೂರ್ತಿ ಕಾರ್ಯಕ್ರಮ ನಿರೂಪಿಸಿದರು. ದಿವಾಕರ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.