ಶಿವಮೊಗ್ಗ: ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಹೇಳಿಕೆ ತಿರುಚಿ, ಜನರಲ್ಲಿ ಧಾರ್ಮಿಕ ಭಾವನೆ ಕೆರಳಿಸಿ ಸಮಾಜದಲ್ಲಿ ಅಶಾಂತಿ ಮೂಡಿಸಲು ಹೊರಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಈಡಿಗರ ಸಂಘದ ಜಿಲ್ಲಾ ಘಟಕದಿಂದ ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.
ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಮಧು ಬಂಗಾರಪ್ಪ ಈಚೆಗೆ ಭೇಟಿ ನೀಡಿದ್ದರು. ಈ ವೇಳೆ ಮಾಧ್ಯಮ ಪ್ರತಿನಿಧಿಗಳು ಸಿಗಂದೂರು ಸೇತುವೆ ವಿಷಯವಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಸಿದ್ದು, ‘ಸಿಗಂದೂರು ದೇವಸ್ಥಾನವನ್ನು ಯಾರು ಹಾಳು ಮಾಡಲು ಪ್ರಯತ್ನಿಸಿದರು ಎಂಬುದನ್ನು ಒಂದು ತಿಂಗಳಲ್ಲಿ ಹೇಳುತ್ತೇನೆ’ ಎಂದು ಹೇಳಿದ್ದರು.
‘ಈ ಹೇಳಿಕೆಯ ವಿಡಿಯೊ ತುಣುಕನ್ನು ಕೆಲವು ಸಂಘಟನೆಗಳ ಸಾಮಾಜಿಕ ಜಾಲತಾಣದ ಕಾರ್ಯಕರ್ತರು ಉದ್ದೇಶಪೂರ್ವಕವಾಗಿ ಅರ್ಧಕ್ಕೆ ಕತ್ತರಿಸಿ 19 ಸೆಕೆಂಡ್ನ ವಿಡಿಯೊ ಹಂಚಿಕೊಂಡಿದ್ದಾರೆ. ಈ ರೀತಿ ಹೇಳಿಕೆಯನ್ನು ತಿರುಚಿರುವ ಜೊತೆಗೆ ಜನರಲ್ಲಿ ಧಾರ್ಮಿಕ ಭಾವನೆ ಕೆರಳಿಸಿ, ಸಚಿವರ ಬಗ್ಗೆ ದ್ವೇಷ ಭಾವನೆ ಮೂಡುವಂತೆ ಪ್ರಚೋದಿಸಿದ್ದಾರೆ’ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಹಿಂದಿನ ಸರ್ಕಾರವು ಸಿಗಂದೂರು ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ಸೇರಿಸಲು ಹುನ್ನಾರ ನಡೆಸಿದ್ದನ್ನು ಮಧು ಬಂಗಾರಪ್ಪ ಖಂಡಿಸಿದ್ದರು. ಮುಜರಾಯಿ ಇಲಾಖೆಗೆ ಸೇರಿಸುವ ಹುನ್ನಾರ ಕೈಬಿಡದಿದ್ದರೆ ಜೇನು ಗೂಡಿಗೆ ಕೈ ಹಾಕಿದಂತೆ ಎಂದು ಎಚ್ಚರಿಸಿ ನೀಡಿ ಹೋರಾಟ ನಡೆಸಿದ್ದರು. ಅಂದಿನಿಂದ ಪ್ರತಿಹಂತದಲ್ಲೂ ಕ್ಷೇತ್ರದ ವಿಷಯವಾಗಿ ಸುಳ್ಳು ಸುದ್ದಿ ಹರಡುವ ಕುತಂತ್ರ ರಾಜಕಾರಣ ನಡೆಯುತ್ತಿದೆ. ಈ ನಕಲಿ ವಿಡಿಯೊ ಸೃಷ್ಟಿ ಅದರ ಭಾಗವಾಗಿದೆ ಎಂದು ಸಂಘ ಹೇಳಿದೆ.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ, ಪ್ರಮುಖರಾದ ಜಿ.ಡಿ. ಮಂಜುನಾಥ್, ಕೆ. ವಿನೋದ್, ಮಂಜು ಪುರಲೆ, ಕೆ.ಸಿ. ನಾಗರಾಜ್, ಲೋಕೇಶ್, ಉಮೇಶ್, ಎನ್.ಪಿ. ಧರ್ಮರಾಜ್, ರಾಮಪ್ಪ, ರಾಜಶೇಖರ್, ಕೆ.ಸಿ. ಉಮೇಶ್, ಎಚ್. ಪ್ರೊ. ಕಲ್ಲನ, ಕೆ.ವೈ. ರಾಮಚಂದ್ರಪ್ಪ, ಎಂ.ಬಿ.ರಾಜಪ್ಪ ಮಸ್ಕರ್, ಪರಮೇಶ್ವರಪ್ಪ, ಎ.ಎಂ. ರಮೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.