ಹೊಳೆಹೊನ್ನೂರು: ಪಟ್ಟಣದಲ್ಲಿರುವ ಕೃಷಿ ಉತ್ಪನ್ನ ಉಪ ಮಾರುಕಟ್ಟೆ ನಿರ್ಮಾಣಗೊಂಡು ಮೂರು ವರ್ಷ ಕಳೆದರೂ ರೈತರಿಗೆ ಯಾವುದೇ ಪ್ರಯೋಜವಿಲ್ಲದೇ ಪಾಳುಬಿದ್ದಿದೆ.
ರೈತರು, ತಾವು ಬೆಳೆದ ಬೆಳೆಗಳನ್ನು ತಾಲ್ಲೂಕು ಕೇಂದ್ರವಾದ ಭದ್ರಾವತಿಗೆ ತೆಗೆದುಕೊಂಡು ಹೋಗಬೇಕಾಗಿತ್ತು. ಅದನ್ನು ತಪ್ಪಿಸಲು ಪಟ್ಟಣದಲ್ಲಿ ಭದ್ರಾವತಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಡಿಯಲ್ಲಿ ಉಪ ಮಾರುಕಟ್ಟೆ ನಿರ್ಮಾಣ ಮಾಡಿದ್ದರೂ ಇದುವರೆಗೂ ರೈತರಿಗೆ ಯಾವುದೇ ಪ್ರಯೋಜನವಾಗಿಲ್ಲ.
ಈ ಮಾರುಕಟ್ಟೆ ಪ್ರಾಂಗಣವೂ ನಿತ್ಯ ದನಕರಗಳ ತಾಣವಾಗಿದೆ. ಈ ಪ್ರಾಗಂಣದ ಪಕ್ಕ ನಾಲ್ಕೈದು ಬಾರ್ಗಳಿಗಿದ್ದು, ಸಂಜೆ ಬಳಿಕ ಕುಡುಕರ ಅಡ್ಡೆಯಾಗಿ ಮಾರ್ಪಡುತ್ತದೆ. ಹೆಸರಿಗಷ್ಟೇ ಮಾರುಕಟ್ಟೆ ಇದ್ದು, ಇದುವರೆಗೂ ಸಾರ್ವಜನಿಕರಿಗೆ ಯಾವುದೇ ಉಪಯೋಗವಾಗಿಲ್ಲ. ಇದಕ್ಕೆಲ್ಲ ಆಡಳಿತ ಮಂಡಳಿಯೇ ನೇರ ಹೊಣೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.
ಇಷ್ಟೊಂದು ವಿಶಾಲವಾದ ಮೈದಾನ ಪಟ್ಟಣದ ಸುತ್ತಮುತ್ತ ಎಲ್ಲಿಯೂ ಇಲ್ಲದೇ ಇರುವುದರಿಂದ ಈ ಸ್ಥಳದ ಅನಿವಾರ್ಯ ಪಟ್ಟಣಕ್ಕೆ ಅವಶ್ಯಕವಾಗಿದೆ.
ಸಂತೆ ಸ್ಥಗಿತ: ಸುತ್ತಮುತ್ತಲಿನ ಸುಮಾರು 25ರಿಂದ 30 ಗ್ರಾಮಗಳ ಜನರು ಇದೇ ಸಂತೆಗೆ ಬಂದು ತಮಗೆ ಬೇಕಾದ ವಸ್ತುಗಳನ್ನು ತೆಗೆದುಕೊಳ್ಳತ್ತಿದ್ದರು. ಇಲ್ಲಿ ನಡೆಯುವ ಸಂತೆಯಲ್ಲಿ ಹೆಚ್ಚಾಗಿ ರೈತರೇ ನೇರವಾಗಿ ತಂದು ತರಕಾರಿ ಮಾರುತ್ತಿದ್ದುದರಿಂದ ತಾಜಾತನದ ತರಕಾರಿ ಹಾಗೂ ಸೊಪ್ಪು ದೊರೆಯುತ್ತಿತ್ತು. ಆದ್ದರಿಂದ ಗ್ರಾಮೀಣ ಪ್ರದೇಶದ ಜನರಿಗೆ ಈ ಸಂತೆ ಅಚ್ಚುಮೆಚ್ಚಿನದಾಗಿತ್ತು.
ಕಳೆದೆರಡು ವರ್ಷಗಳಿಂದ ಸಂತೆ ಮೈದಾನವನ್ನು ಇದೇ ಉಪ ಮಾರುಕಟ್ಟೆ ಸಮಿತಿ ಸ್ಥಳದಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಆಡಳಿತ ಮಂಡಳಿಯ ಧೋರಣೆಯಿಂದಾಗಿ ಇದುವರೆಗೂ ಸಾಧ್ಯವಾಗಿಲ್ಲ. ಸಂತೆಯನ್ನು ಕಳೆದ ವರ್ಷ ಲಾಕ್ಡೌನ್ ಸಮಯದಲ್ಲಿ ನಿಲ್ಲಿಸಲಾಯಿತು.
ಅಂದಿನಿಂದ ಇಂದಿನವರೆಗೂ ಸಂತೆ ರಸ್ತೆಯ ಇಕ್ಕೆಲಗಳಲ್ಲಿ ನಡೆಯುತ್ತಿದೆ. ಅದು ಕೆಲವೇ ಅಂಗಡಿಗಳಿಗೆ ಅವಕಾಶ ನೀಡಲಾಗಿದೆ. ಇದರಿಂದ ಸುತ್ತಮುತ್ತಲಿನ ಗ್ರಾಮಸ್ಥರಿಗೆ ತೊಂದರೆಯಾಗಿದ್ದು, ಉಪ ಮಾರುಕಟ್ಟೆಯಲ್ಲಿ ಸಂತೆ ನಡೆಸಲು ಅವಕಾಶ ಮಾಡಿಕೊಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.