ADVERTISEMENT

ಅಪಘಾತ ತಡೆಗೆ ಪೊಲೀಸ್‌ ಅಧಿಕಾರಿಯ ವಿನೂತನ ಪ್ರಯೋಗ

ಬೀಡಾಡಿ ದನಗಳಿಗೆ, ವಿದ್ಯುತ್‌ ಕಂಬಕ್ಕೆ ರೇಡಿಯಂ ಸ್ಟಿಕ್ಕರ್ ಅಂಟಿಸಿ ಜಾಗೃತಿ

​ಪ್ರಜಾವಾಣಿ ವಾರ್ತೆ
Published 17 ಜನವರಿ 2022, 4:59 IST
Last Updated 17 ಜನವರಿ 2022, 4:59 IST
ಹಸುವಿನ ಕೊಂಬಿಗೆ ರೇಡಿಯಂ ಸ್ಟಿಕ್ಕರ್ ಅಂಟಿಸುತ್ತಿರುವ ಸಬ್‌ ಇನ್‌ಸ್ಪೆಕ್ಟರ್‌ ತಿರುಮಲೇಶ್‌
ಹಸುವಿನ ಕೊಂಬಿಗೆ ರೇಡಿಯಂ ಸ್ಟಿಕ್ಕರ್ ಅಂಟಿಸುತ್ತಿರುವ ಸಬ್‌ ಇನ್‌ಸ್ಪೆಕ್ಟರ್‌ ತಿರುಮಲೇಶ್‌   

ಕಾರ್ಗಲ್: ಬೀಡಾಡಿ ದನಗಳ ಹಾವಳಿಯಿಂದ ರಾತ್ರಿ ಹೊತ್ತು ಸಂಭವಿಸುವ ಅಪಘಾತ ತಡೆಗೆ ವಿನೂತನ ಪ್ರಯೋಗ ಮಾಡುವ ಮೂಲಕ ಇಲ್ಲಿನಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ ಒಬ್ಬರು ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ತಮ್ಮ ಸ್ವಂತ ಖರ್ಚಿನಲ್ಲಿ ಬೀಡಾಡಿ ದನಗಳ ಕೊಂಬಿಗೆ ರೇಡಿಯಂ ಸ್ಟಿಕ್ಕರ್‌ ಅಂಟಿಸುವುದರ ಮೂಲಕಕಾರ್ಗಲ್ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್‌ ತಿರುಮಲೇಶ್ ವಿನೂತನ ಯೋಜನೆ ಕೈಗೊಂಡಿದ್ದಾರೆ.

ವಿಶ್ವವಿಖ್ಯಾತ ಪ್ರವಾಸಿ ತಾಣವಾದ ಜೋಗ ಜಲಪಾತದ ಸುತ್ತಲಿನ ಪ್ರದೇಶಗಳಲ್ಲಿ ಸ್ಥಳೀಯ ಮತ್ತು ಪ್ರವಾಸಿ ವಾಹನಗಳು ಬೀಡಾಡಿ ದನಗಳಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸುತ್ತಿತ್ತು. ಇದನ್ನುತಡೆಯುವ ಚಿಂತನೆ ನಡೆಸಿದ ತಿರುಮಲೇಶ್‌ರೇಡಿಯಂ ಸ್ಟಿಕ್ಕರ್‌ ಉಪಾಯ ಕಂಡುಕೊಂಡರು.

ADVERTISEMENT

ತಮ್ಮ ಸ್ವಂತ ಖರ್ಚಿನಲ್ಲಿ ಬೀಡಾಡಿ ದನಗಳ ಕೊಂಬಿಗೆ ರೇಡಿಯಂ ಸ್ಟಿಕ್ಕರ್‌ ಅಂಟಿಸುವುದರಿಂದ ರಾತ್ರಿ ಹೊತ್ತು ಹಸುಗಳು ದಾರಿಯಲ್ಲಿ ಮಲಗಿರುವುದು ವಾಹನ ಚಾಲಕರಿಗೆ ಕಾಣುತ್ತದೆ. ಅಲ್ಲದೇ ರಸ್ತೆಯ ಬದಿಯಲ್ಲಿನ ವಿದ್ಯುತ್‌ ಕಂಬಗಳಿಗೆರೇಡಿಯಂ ಸ್ಟಿಕ್ಕರ್ ಅಂಟಿಸಿ ವಾಹನ ಚಾಲಕರಿಗೆ ದಾರಿಯಲ್ಲಿನ ಅಡೆತಡೆ ಕಾಣುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಹಲವು ಸಮಾಜಮುಖಿ ಕಾರ್ಯಗಳು: ಕರ್ತವ್ಯ ನಿರ್ವಹಣೆಯ ನಡುವೆ ಸಾಮಾಜಿಕ ಕಾರ್ಯಗಳಲ್ಲಿ ಎಲೆಯ
ಮರೆಯ ಕಾಯಿಯಂತೆ ತೊಡಗಿಕೊಂಡಿದ್ದಾರೆ ತಿರುಮಲೇಶ್.

ತಿರುಮಲೇಶ್ ಅವರು ಈಚೆಗೆ ಅಪಘಾತವೊಂದರಲ್ಲಿ ಯುವಕ–ಯುವತಿಯರನ್ನು ಗಾಯಗೊಂಡುರಸ್ತೆ ಬದಿ ಬಿದ್ದಿದ್ದಾಗ ಸಾರ್ವಜನಿಕರು ನೆರವಿಗೆ ಬಾರದೇ ಇರುವುದನ್ನು ಗಮನಿಸಿ ತಮ್ಮ ಸ್ವಂತ ಕಾರಿನಲ್ಲಿ ಸಾಗರ ಆಸ್ಪತ್ರೆಗೆ ಸೇರಿಸಿದ್ದರು. ಅವರ ಈ ಕಾಳಜಿಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ, ಮೆಚ್ಚುಗೆ ವ್ಯಕ್ತವಾಗಿತ್ತು.

ಜನಪ್ರಿಯ ಐಪಿಎಸ್ ಅಧಿಕಾರಿ ಮಧುಕರ್ ಅವರ ಬದುಕನ್ನು ಆದರ್ಶವಾಗಿಟ್ಟುಕೊಂಡಿರುವ ಅವರು, ಐಪಿಎಸ್ ಮಧುಕರ್ ಹಾಗೂ ನಟ ಪುನೀತ್‌ ರಾಜ್‌ಕುಮಾರ್‌ ಅವರ ಭಾವಚಿತ್ರವನ್ನು ನೋಟ್‌ ಬುಕ್‌ನಲ್ಲಿ ಮುದ್ರಿಸಿ, ಕುಗ್ರಾಮದ ಸರ್ಕಾರಿ ಶಾಲೆಗಳ 1000 ವಿದ್ಯಾರ್ಥಿಗಳಿಗೆ ವಿತರಿಸಿದ್ದಾರೆ.

ಆಟದ ಸಾಮಗ್ರಿಗಳನ್ನು ಕಳವು ಮಾಡಿ ಪೊಲೀಸ್ ಠಾಣೆಗೆ ಬರುವ ಮಕ್ಕಳ ಕ್ರೀಡಾಸಕ್ತಿಯನ್ನು ಗಮನಿಸಿ, ಸ್ವಂತ ಖರ್ಚಿನಲ್ಲಿ ಕ್ರೀಡಾ ಸಾಮಗ್ರಿಗಳನ್ನು ಆ ಮಕ್ಕಳಿಗೆ ಕೊಡಿಸಿ ಮನಃ ಪರಿವರ್ತನೆ ಮಾಡುವ ಕೆಲಸವನ್ನೂ
ಮಾಡುತ್ತಿದ್ದಾರೆ.

‘ಕಳ್ಳರು, ಸಮಾಜಘಾತುಕರನ್ನು ಎದುರಿಸಿ ಮೆಚ್ಚುಗೆ ಪಡೆದಿರುವ ತಿರುಮಲೇಶ್‌ ವಾರಾಂತ್ಯ ಕರ್ಫ್ಯೂ ಸಂದರ್ಭದಲ್ಲಿ ಮಧ್ಯಮ ವರ್ಗಕ್ಕೆ ಮತ್ತು ಕೆಳವರ್ಗದವರಿಗೆ ತೊಂದರೆ, ಗೊಂದಲ ಆಗದಂತೆ ತರಕಾರಿ, ದಿನಸಿ ಸಾಮಗ್ರಿಗಳು ದೊರಕುವಂತೆ ಮಾಡುತ್ತಿದ್ದಾರೆ’ ಎಂದು ವ್ಯಾಪಾರಿಗಳ ಸಂಘದ ಅಧ್ಯಕ್ಷ ಮೋಹನ್ ಪೈ ಶ್ಲಾಘಿಸಿದರು.

‘ಸಣ್ಣ ಕಳವು ಮಾಡಿ ಸಿಕ್ಕ ಬಿದ್ದ ಬಾಲಕರು ಮುಂದೆ ‌ನಾವೂ ಪೊಲೀಸ್‌ ಆಗುತ್ತೇವೆ ಎನ್ನುವ ಮಟ್ಟಿಗೆ ತಿಳಿವಳಿಕೆ ಮೂಡಿಸುತ್ತಿದ್ದಾರೆ ತಿರುಮಲೇಶ್‌’ ಎಂದು ಪೋಷಕರಾದ ರುಕ್ಮಿಣಿ ಹೇಳಿದರು.

ಅಪಘಾತದಿಂದ ಅಮೂಲ್ಯವಾದ ಜೀವಗಳನ್ನು ಉಳಿಸಲು, ಬೀಡಾಡಿ ದನಗಳ ಜೀವಕ್ಕೆ ಕುತ್ತು ಉಂಟಾಗುವುದನ್ನು ತಪ್ಪಿಸಲು ರೇಡಿಯಂ ಸ್ಟಿಕ್ಕರ್‌ ಪ್ರಯೋಗ ಮಾಡಿದ್ದೇನೆ. ‌

ತಿರುಮಲೇಶ್, ಸಬ್ ಇನ್‌ಸ್ಪೆಕ್ಟರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.