ADVERTISEMENT

ಪವರ್ ಚಾನಲ್‌ಗೆ ಬಿದ್ದ ಛಾಯಾಗ್ರಾಹಕನನ್ನು ಬದುಕಿಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 1 ಮೇ 2019, 14:29 IST
Last Updated 1 ಮೇ 2019, 14:29 IST

ಕಾರ್ಗಲ್: ಶರಾವತಿ ಜಲವಿದ್ಯುದಾಗರಕ್ಕೆ ನೀರು ಪೂರೈಕೆ ಮಾಡುವ ಮಳಲಿ ಪವರ್ ಚಾನಲ್‌ನಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದ ಛಾಯಾಗ್ರಾಹಕನನ್ನು ಪೊಲೀಸರು ಮತ್ತು ಯುವಕರ ತಂಡ ಸಾಹಸದಿಂದ ರಭಸವಾದ ನೀರಿನಿಂದ ಮೇಲೆತ್ತಿ ಮಂಗಳವಾರ ರಾತ್ರಿ ಬದುಕಿಸಿದ್ದಾರೆ.

ಲಿಂಗನಮಕ್ಕಿ ಜಲಾಶಯದಿಂದ ತಳಕಳಲೆ ಜಲಾಶಯಕ್ಕೆ ನೀರು ಪೂರೈಸುವ ಮಳಲಿ ಪವರ್ ಚಾನಲ್‌ನ ಪಕ್ಕದಲ್ಲಿ ರಾತ್ರಿ 8ರ ಸಮಯದಲ್ಲಿ ಸ್ನೇಹಿತನನ್ನು ಭೇಟಿಯಾಗಲು ಹೊರಟಿದ್ದ ಛಾಯಾಗ್ರಾಹಕ ಶ್ರೀನಿವಾಸ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದಾರೆ. ನೀರಿಗೆ ಬಿದ್ದ ಅವರು ‘ಕಾಪಾಡಿ, ಕಾಪಾಡಿ’ ಎಂದು ಕೂಗಿಕೊಂಡರು. ಇದನ್ನು ಕೇಳಿಸಿಕೊಂಡ ಸ್ಥಳೀಯ ಯುವಕರು ಚಾನಲ್ ಬಳಿ ಓಡಿ ಬಂದಾಗ ಮಳಲಿ ಸುರಂಗ ಮಾರ್ಗಕ್ಕೆ ತುಸು ಹಿಂಭಾಗದಲ್ಲಿ ಬಳ್ಳಿಯೊಂದನ್ನು ಹಿಡಿದುಕೊಂಡು ತೂಗುತ್ತಿದ್ದರು.

ಕೂಡಲೇ ಕಾರ್ಗಲ್ ಸಬ್‌ ಇನ್‌ಸ್ಪೆಕ್ಟರ್‌ ರೂಪಾ ತೆಂಬದ್ ಅವರಿಗೆ ದೂರವಾಣಿ ಮೂಲಕ ವಿಷಯ ತಿಳಿಸಿದರು. ತಕ್ಷಣ ಕ್ರೈಂ ಸಿಬ್ಬಂದಿ ರಾಘವೇಂದ್ರ ಮತ್ತು ಮಾಲತೇಶ ಅವರನ್ನು ಘಟನಾ ಸ್ಥಳಕ್ಕೆ ಕಳುಹಿಸಿದ್ದಾರೆ. ಪೊಲೀಸರ ಬಂದಿದ್ದರಿಂದ ಯುವಕರಲ್ಲಿ ಧೈರ್ಯ ಹೆಚ್ಚಿತು. ದಟ್ಟವಾದ ಕತ್ತಲ ನಡುವೆ ಎಲ್ಲರ ಬಳಿಯಿದ್ದ ಮೊಬೈಲ್‌ಗಳ ಟಾರ್ಚ್‌ಗಳನ್ನು ಆನ್‌ ಮಾಡಿಕೊಂಡಿದ್ದಾರೆ.

ADVERTISEMENT

ಯಾರೂ ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡುವ ಗೋಜಿಗೆ ಹೋಗದೇ ಪ್ರಾಣ ಉಳಿಸುವಲ್ಲಿ ಮಗ್ನರಾದರು. ಉದ್ದವಾದ ಹಗ್ಗವನ್ನು ತರಿಸಿ ಕುಣಿಕೆ ಮಾಡಿ ನೀರಿನಲ್ಲಿ ಬಳ್ಳಿಯ ಮೇಲೆ ತೂಗುತ್ತಿದ್ದ ಶ್ರೀನಿವಾಸ ಅವರ ಕಾಲಿಗೆ ಹಗ್ಗದ ಕುಣಿಕೆ ಎಸೆದು ಸಿಲುಕಿಸಿ ಅವರನ್ನು ಉಲ್ಟಾ ಮಾಡಿ ಮೇಲೆತ್ತಿ ಬದುಕಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಪೋಲೀಸ್ ಸಿಬ್ಬಂದಿ ರಾಘವೇಂದ್ರ, ಮಾಲತೇಶ, ಕೃಷಿಕ ರಾಜೇಂದ್ರ ಜೈನ್, ಸುಧೀರ್, ರಾಜೇಶ ಮರಳುಕೋರೆ, ಯೋಗೇಶ, ವೆಂಕಟೇಶ ವಕೀಲ ಶಂಕರಮೂರ್ತಿ, ಡಿಎಸ್ಎಸ್ ಮುಖಂಡ ಭೀಮರಾಜ್, ಪಟ್ಟಣ ಪಂಚಾಯಿತಿ ಸದಸ್ಯ ವಿ. ಸಂತೋಷ್ ಕುಮಾರ್ ಇದ್ದರು.

ಜೀವದ ಹಂಗು ತೊರೆದು ರಕ್ಷಣಾ ಕಾರ್ಯಾಚರಣೆಯಲ್ಲಿ ರಕ್ಷಿಸಿದ ಪೊಲೀಸರು ಮತ್ತು ಯುವಕರ ತಂಡವನ್ನು ಸಬ್ ಇನ್‌ಸ್ಪೆಕ್ಟರ್‌ ತಂಡವನ್ನು ಎಸ್‌ಐ ರೂಪಾ ತೆಂಬದ್ ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.