ಶಿವಮೊಗ್ಗ: ಸಪ್ತಪದಿ ಯೋಜನೆಯನ್ನು ಮುಂದೂಡಬೇಕು ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ನ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ ಒತ್ತಾಯಿಸಿದರು.
ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದೆ. ಉತ್ತರ ಕರ್ನಾಟಕ ಭಾಗದಲ್ಲಿ ನೆರೆ ಹಾನಿಯಿಂದ ಜನ ಸಂಕಷ್ಟದಲ್ಲಿರುವ ಕಾರಣ ಸಪ್ತಪದಿ ಯೋಜನೆ ಮುಂದೂಡಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ರಾಜ್ಯ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯ ‘ಎ’ ದರ್ಜೆಯ 40 ದೇವಾಲಯಗಳಲ್ಲಿ 252 ಜೋಡಿ ಸಾಮೂಹಿಕ ವಿವಾಹ ನಡೆಸಿ ಸಪ್ತಪದಿ ಯೋಜನೆ ಜಾರಿಗೆ ಮುಂದಾಗಿದ್ದು, ಸದ್ಯಕ್ಕೆ ಇದನ್ನು ಕೈಬಿಡಬೇಕು. ರಾಜ್ಯದ ಜನರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ 252 ಜೋಡಿ ಸಾಮೂಹಿಕ ವಿವಾಹ ನಡೆಸುವುದು ಸರಿಯಲ್ಲ. ಇಂತಹ ಯೋಜನೆಗಳನ್ನು ಬಿಟ್ಟು ಪ್ರವಾಹ ಸಂತ್ರಸ್ತರಿಗೆ ಮನೆ ಕಟ್ಟಿಸಿಕೊಡಲು ಮತ್ತು ಪರಿಹಾರ ನೀಡಲು ಸರ್ಕಾರ ಗಮನಹರಿಸಬೇಕು ಎಂದು ಒತ್ತಾಯಿಸಿದರು.
ಸರ್ಕಾರ ಸಪ್ತಪದಿ ಯೋಜನೆಯಡಿ ₹ 1.38 ಕೋಟಿ ಖರ್ಚು ಮಾಡಲು ಹೊರಟಿದೆ. ಅದರ, ಬದಲಿಗೆ ಪ್ರವಾಹ ಪೀಡಿತ ಜನರಿಗೆ ಕಾಳಜಿ ಕೇಂದ್ರ ಸ್ಥಾಪಿಸಲು ಅವರ ಆರೋಗ್ಯ ಕಾಪಾಡಲು ಆದ್ಯತೆ ನೀಡಲಿ, ನೆರೆ ಸಂತ್ರಸ್ತರಿಗಾಗಿ ಮಾಸ್ಕ್ ಸ್ಯಾನಿಟೈಸರ್ ನೀಡಲಿ. ಗರ್ಭಿಣಿಯರು, ಬಾಣಂತಿಯರಿಗೆ ಕನಿಷ್ಠ ಸೌಲಭ್ಯ ಕಲ್ಪಿಸಲಿ ಎಂದು ಸಲಹೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟಿಗಳಾದ ಶಂಕ್ರನಾಯಕ್, ಎಲ್. ಆದಿಶೇಷ, ಎಚ್.ಎಂ. ಸಂಗಯ್ಯ, ಹೊಳೆಮಡಿಲು ವೆಂಕಟೇಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.