ADVERTISEMENT

ಚೌಡೇಶ್ವರಿ ದೇಗುಲದಲ್ಲಿ ನವರಾತ್ರಿ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2021, 4:12 IST
Last Updated 4 ಅಕ್ಟೋಬರ್ 2021, 4:12 IST
ಕಾರ್ಗಲ್‌ನ ‌‌ಚೌಡೇಶ್ವರಿ ದೇಗುಲ
ಕಾರ್ಗಲ್‌ನ ‌‌ಚೌಡೇಶ್ವರಿ ದೇಗುಲ   

ಕಾರ್ಗಲ್:ಶರಾವತಿ ಕಣಿವೆಯ ಶಕ್ತಿ ದೇವತೆ ಶ್ರೀ ಚೌಡೇಶ್ವರಿ ಮಹಾಲಸಾ ನಾರಾಯಣಿ ದೇಗುಲ ಸಂಕೀರ್ಣದಲ್ಲಿ ಅ.7ರಿಂದ ಅ.13ರವರೆಗೆ 9 ದಿನಗಳ ಕಾಲ ಅದ್ದೂರಿಯ ನವರಾತ್ರಿ ಉತ್ಸವ ಆಚರಿಸಲಾಗುವುದು ಎಂದು ದೇವಾಲಯದ ಪ್ರಮುಖ ಮೋಹನ್ ಎಂ. ಪೈ ತಿಳಿಸಿದರು.

ಭಾನುವಾರ ನವರಾತ್ರಿ ಉತ್ಸವದಸಿದ್ಧತೆ ಪರಿಶೀಲಿಸಿ ಮಾತನಾಡಿದರು.

ದೇಗುಲದ ಆದಿಯಿಂದ ಪೂಜಿಸಲಾಗಿರುವ ಚೌಡೇಶ್ವರಿ ದೇವಿಯ ದರ್ಶನಕ್ಕೆ ನಾಡಿನ ಅನೇಕ ಭಾಗಗಳಿಂದ ಭಕ್ತರು ಪ್ರತಿ ವರ್ಷ ಬರುತ್ತಾರೆ. ಭಕ್ತರಿಗೆ ಅಗತ್ಯವಾದ ಊಟ ಮತ್ತು ವಸತಿ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗಿದೆ. ವಿಶೇಷ ಪೂಜೆ ಸಲ್ಲಿಸುವ ಭಕ್ತರಿಗೆ ಸಾಂಪ್ರಾದಾಯಿಕವಾಗಿ ನೀಡುವ ಪ್ರಸಾದಕ್ಕೆ ಪ್ರತ್ಯೇಕವಾದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ADVERTISEMENT

9 ದಿನಗಳ ಕಾಲ ಪ್ರತಿದಿನ ದೇವಿಯ ಸನ್ನಿಧಿಯಲ್ಲಿ ವಿಶೇಷ ಪುಷ್ಪಾಲಂಕಾರ, ಸಪ್ತಶತಿ ಪಾರಾಯಣ, ಲಲಿತಾಷ್ಟೋತ್ತರ ಹಾಗೂ ಸಾಮೂಹಿಕ ಕುಂಕುಮಾರ್ಚನೆ ನೆರವೇರಲಿದೆ. ಅ.13ರಂದು ದುರ್ಗಾಷ್ಟಮಿ ಪ್ರಯುಕ್ತ ಸಂಜೆ 6.30ಕ್ಕೆ ಸುಮಂಗಲಿಯರಿಂದ ಸಾಮೂಹಿಕವಾಗಿ ದುರ್ಗಾ ನಮಸ್ಕಾರ ಪೂಜೆ ಮತ್ತು ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ. ದೇವರ ದರುಶನ ಕಾರ್ಯಕ್ರಮವನ್ನು ದರುಶನ ಪಾತ್ರಿ ವಿನೋದ ಎಸ್. ಮಹಾಲೆ ನೆರವೇರಿಸುವರು ಎಂದರು.

ದೇವಸ್ಥಾನದ ವ್ಯವಸ್ಥಾಪಕ ಪ್ರಮುಖರಾದ ಶಿವಾನಂದ ಪ್ರಭು, ‘ಉತ್ಸವ ಕಾಲದಲ್ಲಿ ಪ್ರತಿದಿನ ಸಂಜೆ 4.30ರಿಂದ ಭಜನಾ ಸೇವೆ ಮತ್ತು ದೀಪೋತ್ಸವ ನಡೆಯಲಿದೆ. ಕೋವಿಡ್ ನಿಯಮ ಅನುಸರಿಸಿ ಸಾಮೂಹಿಕ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗುತ್ತದೆ. ಭಕ್ತರಿಗೆ ವಿವಿಧ ಸೇವೆ ಸಲ್ಲಿಸಲು ವಿಶೇಷ ಕೌಂಟರ್‌ಗಳನ್ನು ತೆರೆಯಲಾಗಿದೆ. ಜೋಗ ಜಲಪಾತದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ದೇವಾಲಯಕ್ಕೂ ಪ್ರವಾಸಿಗರು ಬರುವ ನಿರೀಕ್ಷೆಯಿದ್ದು, ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.

ದೇಗುಲದ ಧರ್ಮದರ್ಶಿ ವಿನೋದ ಮಹಾಲೆ, ‘ಈಚೆಗೆ ದೇವಾಲಯದಲ್ಲಿ ವಿಶೇಷವಾಗಿ ಪಲ್ಲಕ್ಕಿ ಉತ್ಸವ ಆಚರಿಸಲಾಗುತ್ತಿದೆ. ಪ್ರತಿ ಅಮಾವಾಸ್ಯೆಯಂದು ಪಲ್ಲಕ್ಕಿ ಉತ್ಸವ ನಡೆಯಲಿದೆ. ದೇಗುಲದ ಗರ್ಭಗುಡಿಯಲ್ಲಿ ಸ್ವಯಂ ಉದ್ಭವಗೊಂಡಿರುವ ಹುತ್ತದಿಂದ ಭಕ್ತರ ಪ್ರಾರ್ಥನೆಗೆ ಅನುಗುಣವಾಗಿ ಹೂವಿನ ಪ್ರಸಾದವಾಗುತ್ತಿರುವುದು ಇಲ್ಲಿನ ವಿಶೇಷಗಳಲ್ಲಿ ಒಂದು’ ಎಂದು ಮಾಹಿತಿ ನೀಡಿದರು.

ಆಡಳಿತ ಮಂಡಳಿಯ ಪ್ರಮುಖರಾದ ಪ್ರವೀಣ್ ಮಹಾಲೆ, ಅಜಿತ್ ಮಹಾಲೆ, ಪ್ರಹ್ಲಾದ ಎಂ. ಪೈ, ಶ್ರೀರಾಮ ಪ್ರಭು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.