ಶಿವಮೊಗ್ಗ:ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ಮೇ 18ರಂದು ಗೊ.ರು.ಚನ್ನಬಸಪ್ಪ (ಗೊರುಚ) ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಸಹಯೋಗದಲ್ಲಿ ನಡೆಯುವ ಕಾರ್ಯಕ್ರಮವನ್ನು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಉದ್ಘಾಟಿಸುವರು. ಗೊ.ರು.ಚನ್ನಬಸಪ್ಪ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಅಪ್ಪರಾವ್ ಅಕ್ಕೋಣೆ, ಜಿಲ್ಲಾಧಿಕಾರಿ ಕೆ.ಎ.ದಯಾನಂದ, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಉಪಸ್ಥಿತರಿರುವರು ಎಂದು ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎನ್.ಮಹಾರುದ್ರ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಗೊರುಚ ಅವರಿಗೆ 84 ವರ್ಷ ತುಂಬಿದ್ದ ನೆನಪಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಆಗ ಅವರಿಗೆ ₨ 11, 11,111 ಗೌರವಧನ ನೀಡಲಾಗಿತ್ತು. ಈ ಹಣದ ಜತೆ ತಮ್ಮ ₨ 2 ಲಕ್ಷ ಸೇರಿಸಿ ಪರಿಷತ್ಗೆ ಕೊಡುಗೆಯಾಗಿ ನೀಡಿದ್ದರು. ಅದೇ ಹಣವನ್ನು ಗೊರುಚ ದತ್ತಿ ನಿಧಿಯಾಗಿ ಶಾಶ್ವತ ಠೇವಣಿ ಇಡಲಾಗಿದೆ ಎಂದರು.
ಪ್ರತಿ ವರ್ಷ ಗೊರುಚ ಜನ್ಮದಿನ (ಮೇ 18) ಈ ಕಾರ್ಯಕ್ರಮ ನಡೆಯುತ್ತದೆ. ಅತ್ಯಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಗುತ್ತದೆ.
ಡಾ.ಓ.ಎಲ್.ನಾಗಭೂಷಣ ಸ್ವಾಮಿ, ಡಾ.ಮ.ಗು.ಬಿರಾದಾರ ಅವರಿಗೆ ಹಾಗೂ ಡಾ.ಲಕ್ಷ್ಮಣ ಕೌಂಟೆ ಬರೆದಿರುವ ಮಹಾಜಂಗಮ, ಡಾ.ಹಾಲಪ್ಪ ಎಚ್.ಕುಂಟೆ ಅವರ ಹರಗಿನ ಕುದುರೆ ಗ್ರಂಥಕ್ಕೆ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿ ತಲಾ ₨ 25 ಸಾವಿರ ಹಾಗೂ ಉತ್ತಮ ಗ್ರಂಥಕ್ಕೆ ₨ 10 ಸಾವಿರ ಮೊತ್ತ ಇರುತ್ತದೆ. ಸ್ನಾತಕೋತ್ತರ ಪದವಿಯಲ್ಲಿ ಹೆಚ್ಚು ಅಂಕ ವಿದ್ಯಾರ್ಥಿಗಳಿಗೆ ₨ 5 ಸಾವಿರ ನಗದು ಬಹುಮಾನ ನೀಡಲಾಗುವುದು ಎಂದು ವಿವರ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಕಾಶ್ ಬಾರಂದೂರ್, ಆರ್.ಎಸ್.ಸ್ವಾಮಿ, ಗಣೇಶ್ ಅಂಗಡಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.