ಶಿವಮೊಗ್ಗ: ‘ಜಾತಿ ಜನಗಣತಿಗೆ ಸಂಬಂಧಿಸಿದಂತೆ ಕೆ.ಕಾಂತರಾಜ ಆಯೋಗದ ವರದಿ ಅವೈಜ್ಞಾನಿಕವಾಗಿದೆ. ಯಾವುದೇ ಕಾರಣಕ್ಕೂ ಅದನ್ನು ಜಾರಿಗೊಳಿಸಬಾರದು’ ಎಂದು ಬಸವೇಶ್ವರ ವೀರಶೈವ ಲಿಂಗಾಯತ ಸಮಾಜ ಸೇವಾ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್ ಒತ್ತಾಯಿಸಿದರು.
‘ಕಾಂತರಾಜ ಆಯೋಗದ ವರದಿ ಅನುಷ್ಠಾನಕ್ಕೆ ಸರ್ಕಾರ ಸಿದ್ಧವಾಗಿದೆ. ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ಧಿಯಂತೆ ನಮ್ಮ ಸಮುದಾಯದ ಸಂಖ್ಯೆಯನ್ನು ವೀರಶೈವ ಮತ್ತು ಲಿಂಗಾಯತ ಬೇರೆ– ಬೇರೆ ಎಂದು ತೋರಿಸಲಾಗುತ್ತಿದೆ. ಆದರೆ, ಇವೆರೆಡೂ ಒಂದೇ ಆಗಿದ್ದು, ಈ ವರದಿ 10 ವರ್ಷಗಳಷ್ಟು ಹಳೆಯದು. ಈಗ ಇದನ್ನು ಬಿಡುಗಡೆ ಮಾಡುವ ಅವಶ್ಯಕತೆ ಇರಲಿಲ್ಲ: ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರಾಜ್ಯದಲ್ಲಿ ಸಮುದಾಯದ ಅಂದಾಜು 2 ಕೋಟಿ ಜನರಿದ್ದೇವೆ. ಆದರೆ ಈ ವರದಿಯ ಸಂಖ್ಯೆ ತಪ್ಪಾಗಿದ್ದು, ಕೇವಲ 75 ಲಕ್ಷ ಎಂದು ಹೇಳಲಾಗುತ್ತಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಸರ್ಕಾರ ಈ ವರದಿಯನ್ನು ಜಾರಿ ಮಾಡಬಾರದು ಎಂದು ಆಗ್ರಹಿಸಿದರು.
ಅವೈಜ್ಞಾನಿಕವಾಗಿರುವ ಈ ವರದಿಯನ್ನು ಸಚಿವ ಸಂಪುಟದಲ್ಲಿ ಚರ್ಚೆ ಕೂಡ ಮಾಡಬಾರದು. ವರದಿಯೇ ಅಪೂರ್ಣವಾಗಿರುವಾಗ ಹೇಗೆ ಇದನ್ನು ಜಾರಿ ಮಾಡಲು ಸಾಧ್ಯ. ಒಂದುವೇಳೆ ಜಾರಿ ಮಾಡಲು ಹೊರಟಿದ್ದೇ ಆದರೆ ಸರ್ಕಾರದ ವಿರುದ್ಧ ಪಕ್ಷಾತೀತವಾಗಿ ಮಾಡುತ್ತೇವೆ ಎಂದು ಮುಖಂಡ ಮಹಾರುದ್ರ ಹೇಳಿದರು.
ಪ್ರಮುಖರಾದ ಎಚ್.ಶಾಂತ ಆನಂದ್, ಬಳ್ಳಕೆರೆ ಸಂತೋಷ್, ಅನಿತಾ ರವಿಶಂಕರ್, ರೇಣುಕಾರಾಧ್ಯ, ಪಿ.ರುದ್ರೇಶ್, ಬೆನಕಪ್ಪ, ಸಿ.ಮಹೇಶ್ ಮೂರ್ತಿ, ಚನ್ನಬಸಪ್ಪ, ಗಂಗಾಧರ್, ಚಟ್ನಳ್ಳಿ ರುದ್ರೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.