ಶಿವಮೊಗ್ಗ: ಮುಸ್ಲಿಂ ಪರ, ಹಿಂದೂ ವಿರೋಧಿ ನೀತಿ ಶಾಸಕ ಜಮೀರ್ ಅಹಮದ್ ರಕ್ತದಲ್ಲೇ ಇದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಟೀಕಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಅವರು ಮಾತನಾಡಿದರು.
ತಾವು ಮುಸ್ಲಿಂ ನಾಯಕ ಎಂದು ಜಮೀರ್ ಪದೇಪದೆ ಸಾಬೀತು ಮಾಡಲು ಹೊರಟಿದ್ದಾರೆ. ಬೆಂಗಳೂರಿನ ಡಿ.ಜಿ.ಹಳ್ಳಿಯಲ್ಲಿ ಕೋಮು ಗಲಭೆ ಹಬ್ಬಿಸಿದ್ದು ಯಾರು ಎನ್ನುವುದು ಅವರ ಪಕ್ಷದ ಶಾಸಕರೇ ಹೇಳುತ್ತಾರೆ. ಕಾಂಗ್ರೆಸ್ಗೆ ಬರಿ ಮುಸ್ಲಿಮರೇ ಮತ ಹಾಕಿಲ್ಲ. ಹಿಂದೂ ಸಮಾಜದ ಜನರೂ ಹಾಕಿದ್ದಾರೆ ಎನ್ನುವುದನ್ನು ಮರೆಯಬಾರದು ಎಂದು ಕುಟುಕಿದರು.
ಜಮೀರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಸಂಸದ ತೇಜಸ್ವಿ ಸೂರ್ಯ ವಿರುದ್ಧ ಅತಿಕೆಟ್ಟದ್ದಾಗಿ ಮಾತನಾಡಿದ್ದಾರೆ. ಅವರಂತೆ ನಮಗೂ ಮಾತನಾಡಲು ಬರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಮ್ಲಜನಕ ಪೂರೈಕೆ ವಿಷಯದಲ್ಲಿ ಹೈಕೋರ್ಟ್ ತೀರ್ಪಿನ ವಿರುದ್ಧ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದನ್ನು ಸಮರ್ಥಿಸಿಕೊಂಡ ಸಚಿವರು, ಆಮ್ಲಜನಕ ಮನೆಯಲ್ಲಿ ಅಡುಗೆ ಮಾಡಿ ತಯಾರಿಸುವ ವಸ್ತುವಲ್ಲ. ಮೋದಿ ಎಲ್ಲಾ ರಾಜ್ಯಗಳಿಗೂ ಹಂಚಿಕೆ ಮಾಡಬೇಕಾಗುತ್ತದೆ. ಹಾಗಾಗಿ, ಇಂತಹ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದರು.
ʼಹೊರಗಿನ ರೋಗಿಗಳ ತಡೆಗೆ ಫಲಕʼ
ಹೊರ ಜಿಲ್ಲೆಗಳಿಂದ ಭಾರಿ ಸಂಖ್ಯೆಯ ರೋಗಿಗಳು ಮೆಗ್ಗಾನ್ಗೆ ಬರುತ್ತಿರುವುದನ್ನು ತಡೆಯಲು ‘ಹಾಸಿಗೆ ಖಾಲಿ ಇಲ್ಲ’ ಎಂಬ ಫಲಕ ಹಾಕಲಾಗಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಜಿಲ್ಲೆಯ ರೋಗಿಗಳಿಗೆ ಮೊದಲ ಆದ್ಯತೆ ನೀಡಬೇಕಿದೆ. ಪ್ರತಿ ದಿನ 700ಕ್ಕೂ ಹೆಚ್ಚು ಕೋವಿಡ್ ರೋಗಿಗಳು ಪತ್ತೆಯಾಗುತ್ತಿದ್ದಾರೆ. ಇಲ್ಲಿಯ ಜನರಿಗೆ ಹಾಸಿಗೆಗಳ ಆವಶ್ಯಕತೆ ಇದೆ. ಹಾಸಿಗೆಗಳು ಖಾಲಿ ಇವೆ ಎಂಬ ಕಾರಣಕ್ಕೆ ಹೊರಗಿನಿಂದ ರೋಗಿಗಳು ಬರುವುದು ಹೆಚ್ಚಾಗಿದೆ. ಅವರಿಂದ ಸೋಂಕಿನ ಪ್ರಮಾಣವೂ ಹೆಚ್ಚಾಗುತ್ತಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.