ADVERTISEMENT

ಲಿಂಗತ್ವ ಅಲ್ಪಸಂಖ್ಯಾತರನ್ನು ಕೀಳಾಗಿ ಕಾಣಬೇಡಿ

ಸಂವಾದ ಕಾರ್ಯಕ್ರಮದಲ್ಲಿ ಕವಯತ್ರಿ ಚಾಂದಿನಿ ಮನವಿ

​ಪ್ರಜಾವಾಣಿ ವಾರ್ತೆ
Published 1 ಜುಲೈ 2022, 2:18 IST
Last Updated 1 ಜುಲೈ 2022, 2:18 IST
ಶಿಕಾರಿಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ‘ತೃತೀಯ ಲಿಂಗಿಗಳ ಲಿಂಗ ಸಂವೇದನೆ ಹಾಗೂ ಸೂಕ್ಷ್ಮತೆ’ ವಿಷಯ ಕುರಿತು ಆಯೋಜಿಸಿದ್ದ ಕಾರ್ಯಾಗಾರ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಕವಯಿತ್ರಿ ಚಾಂದಿನಿ ಗಗನ್ ಮಾತನಾಡಿದರು.
ಶಿಕಾರಿಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ‘ತೃತೀಯ ಲಿಂಗಿಗಳ ಲಿಂಗ ಸಂವೇದನೆ ಹಾಗೂ ಸೂಕ್ಷ್ಮತೆ’ ವಿಷಯ ಕುರಿತು ಆಯೋಜಿಸಿದ್ದ ಕಾರ್ಯಾಗಾರ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಕವಯಿತ್ರಿ ಚಾಂದಿನಿ ಗಗನ್ ಮಾತನಾಡಿದರು.   

ಶಿಕಾರಿಪುರ: ಲಿಂಗತ್ವ ಅಲ್ಪಸಂಖ್ಯಾತರನ್ನು ಸಮಾಜ ಕೀಳಾಗಿ ನೋಡದೆ, ಗೌರವ ಭಾವನೆಯಿಂದ ನೋಡಬೇಕು ಎಂದು ಕವಯತ್ರಿ ಚಾಂದಿನಿ ಮನವಿ ಮಾಡಿದರು.

ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಗುರುವಾರ ಸಮಾಜ ವಿಜ್ಞಾನ ವಿಭಾಗ, ಐಕ್ಯೂಎಸಿ, ಸ್ಪಂದನ ವೇದಿಕೆ, ಯುವ ರೆಡ್‌ಕ್ರಾಸ್, ಬೆಂಗಳೂರಿನ ಪಯಣ ಸಂಸ್ಥೆ ಹಾಗೂ ಶಿವಮೊಗ್ಗದ ರಕ್ಷಾ ಸಮುದಾಯ ಸಂಘದ ಆಶ್ರಯದಲ್ಲಿ ‘ತೃತೀಯ ಲಿಂಗಿಗಳ ಲಿಂಗ ಸಂವೇದನೆ ಹಾಗೂ ಲಿಂಗ ಸೂಕ್ಷ್ಮತೆ’ ವಿಷಯ ಕುರಿತು ಆಯೋಜಿಸಿದ್ದ ಕಾರ್ಯಾಗಾರ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರಾಮಾಯಾಣ, ಮಹಾಭಾರತದ ಕಾಲದಿಂದಲೂ ನಮ್ಮ ಸಮುದಾಯ ಇದೆ. ನಾವು ಹುಟ್ಟುವಾಗ ತೃತೀಯ ಲಿಂಗಿಯರಾಗಬೇಕು ಎಂದು ಅರ್ಜಿ ಹಾಕಿಕೊಂಡು ಹುಟ್ಟಿರುವುದಿಲ್ಲ. ಆದರೆ, ಈ ಸಮಾಜ ನಮ್ಮ ಬಗ್ಗೆ ಅಪಹಾಸ್ಯ ಮಾಡುವುದನ್ನು ನಿಲ್ಲಿಸಬೇಕು. ನಾವು ಗೌರವದಿಂದ ಜೀವನ ನಡೆಸಲು ಅಗತ್ಯವಾದ ಹಕ್ಕುಗಳನ್ನು ನೀಡಬೇಕು. ನಮ್ಮ ಸಮುದಾಯ ಮುಖ್ಯವಾಹಿನಿಗೆ ಬರಲು ಸಮಾಜದ ಜನರು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.
‘ಪ್ರತಿಯೊಬ್ಬರು ಶಿಕ್ಷಣ ಪಡೆಯಲು ಆದ್ಯತೆ ನೀಡಬೇಕು. ಲಿಂಗತ್ವ ಅಲ್ಪಸಂಖ್ಯಾತರ ಬಗ್ಗೆ ಅಪಹಾಸ್ಯ ಮಾಡುವವರ ಮಧ್ಯೆ ಚಾಂದಿನಿ ಅವರು ಹಲವು ಕಷ್ಟಗಳನ್ನು ಅನುಭವಿಸಿ ಉನ್ನತ ಮಟ್ಟಕ್ಕೆ ಬೆಳೆದಿದ್ದಾರೆ. ಲಿಂಗತ್ವ ಅಲ್ಪಸಂಖ್ಯಾತರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಹೋರಾಟ ನಡೆಸುತ್ತಿದ್ದಾರೆ’ ಎಂದು ಕುವೆಂಪು ವಿಶ್ವವಿದ್ಯಾಲಯ ಸಮಾಜ ವಿಜ್ಞಾನ ವಿಭಾಗ ಪ್ರಾಧ್ಯಾಪಕ ಪ್ರೊ.ಅಂಜನಪ್ಪ ಹೇಳಿದರು.

ADVERTISEMENT

ಸರ್ಕಾರಿ ಪ್ರಥಮ ಕಾಲೇಜು ಪ್ರಾಂಶುಪಾಲ ಡಾ.ಶೇಖರ್ ಅಧ್ಯಕ್ಷತೆ ವಹಿಸಿದ್ದರು. ರಕ್ಷಾ ಸಮುದಾಯ ಸಂಘ ಅಧ್ಯಕ್ಷ ಮೊಹಮದ್ ಷಫಿವುಲ್ಲಾ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಆರ್.ಕೆ.ವಿನಯ್, ಐಕ್ಯೂಎಸಿ ಸಂಯೋಜಕಿ ಡಾ.ಅಶ್ವಿನಿ ಎಚ್. ಬಿದ್ರಳ್ಳಿ, ಸಮಾಜ ವಿಜ್ಞಾನ ವಿಭಾಗ ಮುಖ್ಯಸ್ಥೆ ಡಾ.ಟಿ.ಮಂಜುಳಾ, ಮಹಿಳಾ ದೌರ್ಜನ್ಯ ತಡೆ ಸಮಿತಿ ಸಂಯೋಜಕಿ ಸೌಮ್ಯಾ, ಯುವ ರೆಡ್‌ಕ್ರಾಸ್ ಘಟಕ ಸಂಯೋಜಕ ಪಾಂಡುರಂಗ, ಮಹಿಳಾ ಸಬಲೀಕರಣ ಘಟಕ ಸಂಯೋಜಕಿ ಎಸ್. ಸುಮಾ, ಬಾನಮ್ಮ, ತ್ರಿಮೂರ್ತಿ, ಶರ್ವಣ, ಶಾಂತಮ್ಮ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.