ಶಿವಮೊಗ್ಗ: ನಗರ ಪಾಲಿಕೆ ವ್ಯಾಪ್ತಿಯ ಆಲ್ಕೊಳ ಮಂಗಳ ಮಂದಿರದ ಹತ್ತಿರದ ಹೊಸ ಬಡಾವಣೆಗೆ ಅಲ್ಲಿನ ನಾಗರಿಕರು ನಟ ಪುನೀತ್ ರಾಜಕುಮಾರ್ ಹೆಸರು ಇಟ್ಟಿದ್ದಾರೆ.
ಹಲವು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಈ ಬಡಾವಣೆಯಲ್ಲಿ ಇತ್ತೀಚೆಗೆ ಅಧಿಕ ಸಂಖ್ಯೆಯಲ್ಲಿ ಮನೆಗಳು ನಿರ್ಮಾಣವಾಗುತ್ತಿವೆ. ಬಡಾವಣೆಗೆ ಇದುವರೆಗೂ ಯಾವ ಹೆಸರೂ ಇಟ್ಟಿರಲಿಲ್ಲ. ಪತ್ರ ವ್ಯವಹಾರಕ್ಕೆ ವಿಳಾಸಕ್ಕೆ ಅಡಚಣೆಯಾಗಿತ್ತು. ಬಡಾವಣೆಯ ಹಿರಿಯರು, ಮಕ್ಕಳ ಒತ್ತಾಸೆಯ ಮೇರೆಗೆ ಪುನೀತ್ ರಾಜಕುಮಾರ್ ಅವರ ಹೆಸರನ್ನು ಲ್ಲಿನ ನಿವಾಸಿಗಳು ನಾಮಕರಣ ಮಾಡಿದ್ದಾರೆ.
ಮಕ್ಕಳೆಂದರೆ ಪುನೀತ್ ಅವರಿಗೆ ಇಷ್ಟ. ಮಕ್ಕಳಿಗೂ ಸಹ ಪುನೀತ್ ತುಂಬಾ ಇಷ್ಟ. ಹಾಗಾಗಿ, ಪುನೀತ್ ರಾಜಕುಮಾರ್ ಬಡಾವಣೆಯ ನಾಮಫಲಕವನ್ನು ಬಡಾವಣೆಯ ಮಕ್ಕಳಿಂದಲೇ ಭಾನುವಾರ ಉದ್ಘಾಟನೆ ಮಾಡಿಸಲಾಯಿತು. ಮಕ್ಕಳು ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು.
ಇದೇ ಸಮಯದಲ್ಲಿ ಬಡಾವಣೆಯ ನಿವಾಸಿಗಳು ನೇತ್ರದಾನ ಮಾಡಲು ತಮ್ಮ ಹೆಸರುಗಳನ್ನು ನೊಂದಾಯಿಸಿದರು. ಪುನೀತ್ ಅವರಂತೆ ಸಾಮಾಜಿಕ ಕಳಕಳಿ ಮೆರೆದರು.
ನಗರ ಪಾಲಿಕೆಗೆ ಮನವಿ: ಹೆಸರಿಡದ ನೂತನ ಬಡಾವಣೆಗೆ ನಾಗರಿಕರೆಲ್ಲರೂ ಸೇರಿ ಹೆಸರು ಇಟ್ಟು, ನಾಮಫಲಕ ಅನಾವರಣ ಮಾಡಿದ್ದೇವೆ. ಅದೇ ಹೆಸರನ್ನೇ ಎಲ್ಲರೂ ಬಳಸಲು ಆರಂಭಿಸಿದ್ದೇವೆ. ಈ ಹೆಸರನ್ನೇ ಪಾಲಿಕೆ ಸಭೆಯಲ್ಲಿ ಮಂಡಿಸಿ, ಅಧಿಕೃತ ಅನುಮೋದನೆ ದೊರಕಿಸಬೇಕು’ ಎಂದು ಪಾಲಿಕೆ ಮೇಯರ್, ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.