ಅಂಜನಾಪುರ (ಶಿಕಾರಿಪುರ): ತಾಲ್ಲೂಕಿನ ನೀರಾವರಿ ಯೋಜನೆಗಳ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಶೀಘ್ರ ಉದ್ಘಾಟನೆಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ತಾಲ್ಲೂಕಿನ ಅಂಜನಾಪುರ ಜಲಾಶಯಕ್ಕೆ ಭಾನುವಾರ ಭೇಟಿ ನೀಡಿ ಬಾಗಿನ ಅರ್ಪಿಸಿದ ನಂತರ ಅವರು ಮಾತನಾಡಿದರು.
‘ತಾಲ್ಲೂಕಿನಲ್ಲಿ 1,250 ಕೋಟಿ ವೆಚ್ಚದಲ್ಲಿ ಪುರದಕೆರೆ ಏತ ನೀರಾವರಿ ಯೋಜನೆ, ಹೊಸಹಳ್ಳಿ ಏತನೀರಾವರಿ ಯೋಜನೆ ಕಾಮಗಾರಿ ನಡೆದಿದೆ. ಪುರದಕೆರೆ ನೀರಾವರಿ ಯೋಜನೆ ಕಾಮಗಾರಿ ನಡೆಸಲು ರಟ್ಟೀಹಳ್ಳಿ ತಾಲ್ಲೂಕಿನ ರೈತರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದರು. ನಂತರ ರೈತರ ಮನ ಓಲೈಸಿ ಆ ತಾಲ್ಲೂಕಿನ ರೈತರ ಕೃಷಿ ಭೂಮಿಯಲ್ಲಿ ಪೈಪ್ಲೈನ್ ಮೂಲಕ ತಾಳಗುಂದ, ಉಡುಗಣಿ ಹಾಗೂ ಹೊಸೂರು ಹೋಬಳಿಗಳ ಜನರಿಗಾಗಿ ನೀರು ತರಲಾಗುತ್ತಿದೆ’ ಎಂದರು.
ಕಲ್ಲೋಡು ಯೋಜನೆಯಿಂದ ಸಾಗರ ತಾಲ್ಲೂಕಿನ ಗ್ರಾಮಗಳ ಮುಳುಗಡೆ ತಪ್ಪಿಸಲು ಕಲ್ಲೋಡು ನೀರಾವರಿ ಯೋಜನೆ ಬಿಟ್ಟು, ಕಾಳೇನಹಳ್ಳಿ ಸಮೀಪ ಕಸಬಾ ಹೋಬಳಿ ಜನರಿಗಾಗಿ ಕಸಬಾ ನೀರಾವರಿ ಯೋಜನೆ ಕಾಮಗಾರಿ ನಡೆಸಲಾಗುತ್ತಿದೆ. ಸುಮಾರು 6.5 ಸಾವಿರ ಹೆಕ್ಟೇರ್ ಕೃಷಿ ಭೂಮಿಗೆ ನೀರು ಒದಗಿಸುವ ಅಂಜನಾಪುರ ಜಲಾಶಯ ಭರ್ತಿಯಾಗಿರುವುದು ಸಂತಸದ ಸಂಗತಿಯಾಗಿದೆ. ಅಂಜನಾಪುರ ಜಲಾಶಯವನ್ನು ಪ್ರವಾಸಿ ಕೇಂದ್ರವನ್ನಾಗಿಸುವ ನಿಟ್ಟಿನಲ್ಲಿ ಆದ್ಯತೆ ನೀಡಲಾಗಿದೆ ಎಂದರು.
‘ಅಂಜನಾಪುರ ಸಮೀಪದ ಗ್ರಾಮಗಳಾದ ಹಾರೋಗೊಪ್ಪ, ಎಳನೀರುಕೊಪ್ಪ, ತರಲಘಟ್ಟ ಸೇರಿ ವಿವಿಧ ಗ್ರಾಮಗಳ ಜನರಿಗಾಗಿ ಮಿನಿ ಏತನೀರಾವರಿ ಯೋಜನೆ ಅನುಷ್ಠಾನಕ್ಕೆ ಆದ್ಯತೆ ನೀಡುತ್ತೇನೆ. ಮುಖ್ಯಮಂತ್ರಿ ಯಡಿಯೂರಪ್ಪ ಶಾಸಕರಾಗಿದ್ದ ಸಂದರ್ಭದಲ್ಲಿ ಅಂಜನಾಪುರ ಜಲಾಶಯ ಒಡೆದಾಗ ಜಲಾಶಯ ಪುನಃ ನಿರ್ಮಿಸಲು ಶ್ರಮಿಸಿದ್ದರು. ರಾಜಕೀಯ ಜನ್ಮ ನೀಡಿದ ತಾಲ್ಲೂಕಿನ ಜನರ ಋಣ ತೀರಿಸಲು ನೀರಾವರಿ ಯೋಜನೆ ಅನುಷ್ಠಾನ ಮಾಡುವ ಮೂಲಕ ಯಡಿಯೂರಪ್ಪ ಆಧುನಿಕ ಕಾಲದ ಭಗೀರಥರಾಗಿದ್ದಾರೆ’ ಎಂದು ಬಣ್ಣಿಸಿದರು.
ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ‘ಅಂಜನಾಪುರ ಅಚ್ಚುಕಟ್ಟು ಪ್ರದೇಶದಲ್ಲಿ ರೈತರ ಅನುಕೂಲಕ್ಕಾಗಿ ರಸ್ತೆಗಳು ನಿರ್ಮಾಣವಾಗಿವೆ. ರಾಜ್ಯದ ಅಭಿವೃದ್ಧಿ ಜತೆ ಶಿಕಾರಿಪುರ ತಾಲ್ಲೂಕಿನ ಸಂಪೂರ್ಣ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಶ್ರಮಿಸಿದ್ದಾರೆ. ಯಡಿಯೂರಪ್ಪ ವಿರುದ್ಧ ವಿರೋಧ ಪಕ್ಷದವರು ಟೀಕೆ ಮಾಡಿದಾಗ ತಾಲ್ಲೂಕಿನ ಜನ ಯಡಿಯೂರಪ್ಪ ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ತಿಳಿಸುವ ಮೂಲಕ ಸಮರ್ಥನೆ ಮಾಡಿಕೊಳ್ಳಬೇಕು’ ಎಂದರು.
ಅರಣ್ಯ ಅಭಿವೃದ್ಧಿ ನಿಗಮ ಉಪಾಧ್ಯಕ್ಷ ಕೊಳಗಿ ರೇವಣಪ್ಪ, ಸಂಸದ ರಾಘವೇಂದ್ರ ಪತ್ನಿ ತೇಜಸ್ವಿನಿ, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ ಪತ್ನಿ ಅಪರ್ಣ, ವಿವಿಧ ನಿಗಮ ಮಂಡಳಿ ನಿರ್ದೇಶಕರಾದ ಭದ್ರಾಪುರ ಹಾಲಪ್ಪ, ಜೆ.ಸುಕೇಂದ್ರಪ್ಪ, ಕಲ್ಮನೆ ಲೋಕೇಶ್, ನಿವೇದಿತಾ ರಾಜು, ಗಾಯತ್ರಿ ದೇವಿ, ಪುರಸಭೆ ಅಧ್ಯಕ್ಷೆ ಲಕ್ಷ್ಮಿ ಮಹಾಲಿಂಗಪ್ಪ, ಬಿಜೆಪಿ ಮುಖಂಡರಾದ ಸುರೇಶ್ ನಾಯ್ಕ, ಟಿ.ಎಸ್.ಮೋಹನ್, ಚುರ್ಚಿಗುಂಡಿ ಶಶಿಧರ್, ಜ್ಯೋತಿ ರಮೇಶ್, ನೀರಾವರಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
***
ಆಕಾಂಕ್ಷಿಗಳು ಕಾರ್ಯಕರ್ತರ ಮೇಲೆ ಒತ್ತಡ ಹಾಕಬೇಡಿ
‘ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಮೀಸಲಾತಿ ಬಗ್ಗೆ ಚರ್ಚೆಯಾಗುತ್ತಿದೆ. ಈ ಮೀಸಲಾತಿ ಬಗ್ಗೆ ಕೆಲವರು ನ್ಯಾಯಾಲಯ ಮಟ್ಟಿಲೇರುವ ಸಾಧ್ಯತೆ ಇದೆ. ಈ ಮೀಸಲಾತಿ ಇರುತ್ತೋ ಬದಲಾಗುತ್ತೊ ಗೊತ್ತಿಲ್ಲ. ಆದರೆ, ನಾವು 6 ಜಿಲ್ಲಾ ಪಂಚಾಯಿತಿ ಕ್ಷೇತ್ರ ಹಾಗೂ 15 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಲ್ಲಿ ಗೆಲ್ಲಬೇಕಾಗಿದೆ. ಚುನಾವಣೆ ಸ್ಪರ್ಧಿಸಲು ಮುಂದಾಗಿರುವ ನಮ್ಮ ಪಕ್ಷದ ಆಕಾಂಕ್ಷಿಗಳು ಕೆಲವು ಗ್ರಾಮಗಳಿಗೆ ತೆರಳಿ ಕಾರ್ಯಕರ್ತರ ಬಳಿ ನನಗೆ ಸ್ಪರ್ಧಿಸಲು ಅವಕಾಶ ನೀಡುವಂತೆ ನಮ್ಮ ಬಳಿ ಬಂದು ಹೆಸರು ಹೇಳುವಂತೆ ಒತ್ತಡ ಹಾಕುತ್ತಿದ್ದಾರೆ. ಆದರೆ, ಈ ರೀತಿ ಕಾರ್ಯಕರ್ತರ ಮೇಲೆ ಆಕಾಂಕ್ಷಿಗಳು ಒತ್ತಡ ಹಾಕಬಾರದು. ನಾವು ಹಾಗೂ ಪಕ್ಷದ ಅಧ್ಯಕ್ಷ, ಮುಖಂಡರು ಕುಳಿತು ಚರ್ಚೆ ಮಾಡಿ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತೇವೆ’ ಎಂದು ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ ಕಿವಿಮಾತು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.