ಶಿವಮೊಗ್ಗ: ಪರೀಕ್ಷೆಯಲ್ಲಿ ನಕಲು ಮಾಡಿಸಲು ಅವಕಾಶ ನೀಡಲಿಲ್ಲ ಎಂಬ ಕಾರಣಕ್ಕೆ ಇಲ್ಲಿನ ಸುಬ್ಬಯ್ಯ ನರ್ಸಿಂಗ್ ಕಾಲೇಜಿಗೆ ಬಂದಿದ್ದ ಪಶ್ಚಿಮ ಬಂಗಾಳದ ವಿದ್ಯಾರ್ಥಿಗಳು ಮಂಗಳವಾರ ಪರೀಕ್ಷೆ ಬಹಿಷ್ಕರಿಸಿದರು.
ಕೋಲ್ಕತ್ತಾದ ಕೇಂದ್ರದಲ್ಲಿ ಪ್ರವೇಶ ಪಡೆಯುವಾಗ ವಿದ್ಯಾರ್ಥಿಗಳಿಂದ ತಲಾ ₹ 1.80 ಲಕ್ಷ ಪಡೆದಿದ್ದರು. ಈಗ ನುಡಿದಂತೆ ನಡೆದಿಲ್ಲ ಎಂದು ಪಶ್ಚಿಮ ಬಂಗಾಳ ಮೂಲದ 38 ವಿದ್ಯಾರ್ಥಿಗಳು ದೂರಿದರು.
ಸೋಮವಾರವೂ ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದ ವಿದ್ಯಾರ್ಥಿಗಳು ಅರ್ಧ ಗಂಟೆ ವಿಳಂಬವಾಗಿ ಪರೀಕ್ಷೆಗೆ ಹಾಜರಾಗಿದ್ದರು.
’ಅವರು ನಮ್ಮ ಕಾಲೇಜಿನ ವಿದ್ಯಾರ್ಥಿಗಳಲ್ಲ. ಅವರು ಪ್ರವೇಶ ಪಡೆದಿದ್ದ ಕಾಲೇಜಿನ ಸಮಸ್ಯೆಯ ಕಾರಣ ಪರೀಕ್ಷೆ ಬರೆಯಲು ಇಲ್ಲಿಗೆ ಹಾಕಿದ್ದಾರೆ. ಅವರ ಪರೀಕ್ಷಾ ಪ್ರವೇಶ ಪತ್ರ ವಿಳಂಬವಾದ ಕಾರಣ ಸೋಮವಾರ ಅರ್ಧ ಗಂಟೆ ತಡವಾಯಿತು. ನಮ್ಮಲ್ಲಿ ನಕಲಿಗೆ ಅವಕಾಶ ಇಲ್ಲ. ಅದು ಆಕ್ರೋಶಕ್ಕೆ ಕಾರಣವಾಗಿರಬಹುದು. ನಾವು ಪರೀಕ್ಷಾ ಶುಲ್ಕ ಹೊರತುಪಡಿಸಿ ಹೆಚ್ಚುವರಿ ಹಣವನ್ನೂ ಪಡೆದಿಲ್ಲ’ ಎಂದು ಕಾಲೇಜಿನ ಪ್ರಾಂಶುಪಾಲರಾದ ವನಮಾಲ ಸತೀಶ್ ಪ್ರತಿಕ್ರಿಯಿಸಿದರು.
ಕೊರೊನಾ ಕಾರಣ ಸಕಾಲಕ್ಕೆ ದಾಖಲೆ ಒದಗಿಸದ ಕಾರಣ ತೊಂದರೆಯಾಗಿತ್ತು. ಎಲ್ಲ ಸಮಸ್ಯೆ ಮುಗಿದು ಇಂಡಿಯನ್ ಸರ್ಸಿಂಗ್ ಕೌನ್ಸಿಲ್ ಮಾನ್ಯತೆ ಪಡೆದ ಕಾಲೇಜಿನಲ್ಲಿ ಪರೀಕ್ಷೆ ಬರೆಯಲು ಅವಕಾಶ ದೊರೆತಿದೆ. ಇಲ್ಲಿ ನಕಲು ಮಾಡಲು ಅವಕಾಶ ನೀಡಲಿಲ್ಲ ಎಂದು ಪರೀಕ್ಷೆಯನ್ನೇ ಬಹಿಷ್ಕರಿಸಿದ್ದಾರೆ’ ಎಂದು ಅವರನ್ನು ಕರೆತಂದ ಕೋಲ್ಕತ್ತಾದ ಮಾರ್ಡನ್ ನರ್ಸಿಂಗ್ ಕೋಚಿಂಗ್ ಸೆಂಟರ್ನ ಆಚಾರ್ಯ ದೂರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.