ಶಿವಮೊಗ್ಗ: ಸೇವೆ ಕಾಯಂಗೆ ಆಗ್ರಹಿಸಿಸಿಮ್ಸ್ ಎದುರು ಹೊರಗುತ್ತಿಗೆ ನೌಕರರು ನಡೆಸುತ್ತಿರುವ ಧರಣಿ ಶನಿವಾರವೂ ಮುಂದುವರಿಯಿತು.
ನೌಕರರು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಪಾಲಿಕೆಯ ವಿರೋಧ ಪಕ್ಷದ ನಾಯಕ ಎಚ್.ಸಿ. ಯೋಗೀಶ್ ನೇತೃತ್ವದಲ್ಲಿ ಕಾಂಗ್ರೆಸ್ ಸದಸ್ಯರು ಭೇಟಿ ನೀಡಿ ಪ್ರತಿಭಟನಕಾರರಿಗೆ ಬಾಳೆಹಣ್ಣು ನೀಡಿ ಸಮಸ್ಯೆಗಳನ್ನು ಆಲಿಸಿದರು.
ಸಿಮ್ಸ್ ಹೊರಗುತ್ತಿಗೆ ನೌಕರರು ಕೊರೊನಾ ವಾರಿಯರ್ಗಳಂತೆ ಕೆಲಸ ಮಾಡುತ್ತಿದ್ದಾರೆ. ಅವರ ಬೇಡಿಕೆಗಳು ನ್ಯಾಯಯುತವಾಗಿವೆ. ಸರ್ಕಾರ ಈಗಾಗಲೇ ವೈದ್ಯರಿಗೆ ವೇತನವನ್ನು ಹೆಚ್ಚಳ ಮಾಡಿದೆ. ಹಾಗೆಯೇ ವಾರಿಯರ್ಸ್ ಆಗಿ ಕೆಲಸ ನಿರ್ವಹಿಸುತ್ತಿರುವ ಹೊರಗುತ್ತಿಗೆ ಕಾರ್ಮಿಕರ ಸೇವೆ ಕಾಯಂಗೊಳಿಸಬೇಕು. ಇಲ್ಲವಾದರೆ ಕನಿಷ್ಠ ₹ 10 ಸಾವಿರ ವೇತನವಾದರೂ ನೀಡಬೇಕು ಎಂದು ಒತ್ತಾಯಿಸಿದರು.
ನಗರಪಾಲಿಕೆ ಸದಸ್ಯರಾದ ಮಂಜುಳಾ ಶಿವಣ್ಣ, ಮೆಹಕ್ ಷರೀಫ್, ಶಮೀರ್, ಆರ್.ಸಿ.ನಾಯ್ಕ, ಹೊರಗುತ್ತಿಗೆ ನೌಕರರ ಸಂಘದ ಪದಾಧಿಕಾರಿಗಳಾದ ನರಸಿಂಹ, ಸಲೀಂ, ರಾಮಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.