ADVERTISEMENT

ದಾನದಿಂದ ಸಮರ್ಪಣಾ ಭಾವ ಜಾಗೃತಿ

ಶಬರಿಮಲೆಗೆ ಮುಷ್ಟಿ ಅಕ್ಕಿ, ಇತರ ಸಾಮಗ್ರಿಗಳ ಸಂಗ್ರಹ ಅಭಿಯಾನದಲ್ಲಿ ಭೀಮೇಶ್ವರ ಜೋಶಿ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2022, 4:13 IST
Last Updated 1 ಡಿಸೆಂಬರ್ 2022, 4:13 IST
ಶಿವಮೊಗ್ಗದಲ್ಲಿ ಶಬರಿಮಲೆ ಅಯ್ಯಪ್ಪ ಸ್ವಾಮಿ ಸೇವಾ ಸಮಾಜಂ (ಎಸ್‌ಎಎಸ್‌ಎಸ್) ವತಿಯಿಂದ ಹಮ್ಮಿಕೊಂಡಿದ್ದ ಒಂದು ಮುಷ್ಟಿ ಅಕ್ಕಿ ಹಾಗೂ ಇತರ ಸಾಮಗ್ರಿಗಳ ಸಂಗ್ರಹ ಅಭಿಯಾನದ ಸಮಾರೋಪದಲ್ಲಿ ಕೆ.ಇ.ಕಾಂತೇಶ್ ಅವರನ್ನು ಭೀಮೇಶ್ವರ ಜೋಶಿ ಹಾಗೂ ವಿನಯ್ ಗುರೂಜಿ ಸನ್ಮಾನಿಸಿದರು
ಶಿವಮೊಗ್ಗದಲ್ಲಿ ಶಬರಿಮಲೆ ಅಯ್ಯಪ್ಪ ಸ್ವಾಮಿ ಸೇವಾ ಸಮಾಜಂ (ಎಸ್‌ಎಎಸ್‌ಎಸ್) ವತಿಯಿಂದ ಹಮ್ಮಿಕೊಂಡಿದ್ದ ಒಂದು ಮುಷ್ಟಿ ಅಕ್ಕಿ ಹಾಗೂ ಇತರ ಸಾಮಗ್ರಿಗಳ ಸಂಗ್ರಹ ಅಭಿಯಾನದ ಸಮಾರೋಪದಲ್ಲಿ ಕೆ.ಇ.ಕಾಂತೇಶ್ ಅವರನ್ನು ಭೀಮೇಶ್ವರ ಜೋಶಿ ಹಾಗೂ ವಿನಯ್ ಗುರೂಜಿ ಸನ್ಮಾನಿಸಿದರು   

ಶಿವಮೊಗ್ಗ: ‘ಹಸಿದವರಿಗೆ ಅನ್ನ ನೀಡುವ ಭಾರತೀಯ ಸಂಸ್ಕೃತಿಗೆ ಬೆಲೆಕಟ್ಟಲಾಗದು. ಮುಷ್ಟಿ ಅಕ್ಕಿ ಅಭಿಯಾನ ವಿಶಿಷ್ಟ ಕಾರ್ಯಕ್ರಮವಾಗಿದ್ದು, ಸಮರ್ಪಣಾ ಮನೋಭಾವವನ್ನು ಜಾಗೃತಗೊಳಿಸಿದೆ’ ಎಂದು ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮದರ್ಶಿ ಭೀಮೇಶ್ವರ ಜೋಶಿ ಅಭಿಪ್ರಾಯ ಪಟ್ಟರು.

ಇಲ್ಲಿನ ಶಬರಿಮಲೆ ಅಯ್ಯಪ್ಪ ಸ್ವಾಮಿ ಸೇವಾ ಸಮಾಜಂ (ಎಸ್‌ಎಎಸ್‌ಎಸ್) ವತಿಯಿಂದ ಹಮ್ಮಿಕೊಂಡಿದ್ದ ಶಬರಿ ಮಲೆ ಸನ್ನಿಧಾನಕ್ಕೆ ಬರುವವರಿಗೆ ಅನ್ನದಾನಕ್ಕಾಗಿ ಪ್ರತಿ ಮನೆಯಿಂದ ಒಂದು ಮುಷ್ಟಿ ಅಕ್ಕಿ ಹಾಗೂ ಇತರ ಸಾಮಗ್ರಿಗಳ ಸಂಗ್ರಹ ಅಭಿಯಾನದ ಸಮಾರೋಪದಲ್ಲಿ ಅವರು ಮಾತನಾಡಿದರು.

‘12 ವರ್ಷಗಳ ಹಿಂದೆ ರಾಘವೇಶ್ವರ ಶ್ರೀಗಳು 20 ದಿನಗಳ ಕಾಲ ರಾಮಾಯಣ ಮಹಾ ಛತ್ರ ಹಮ್ಮಿಕೊಂಡಿದ್ದರು. ಆ ಸಂದರ್ಭದಲ್ಲಿ ಅಕ್ಕಿ ತೊಳೆದು ಬಿಸಿನೀರಿಗೆ ಹಾಕುವ ಮುನ್ನ ಒಂದು ಮುಷ್ಟಿಯನ್ನು ತೆಗೆದಿರಿಸಿ ದಾನಕ್ಕೆ ಉಪಯೋಗಿಸುವಂತೆ ಕರೆ ನೀಡಿದ್ದರು. ಅದರಿಂದ ಉತ್ತಮ ಫಲ ಪ್ರಾಪ್ತಿಯಾಗುವುದು ಮತ್ತು ದಾನಕ್ಕೆ ಮಹತ್ವ ಸಿಗುತ್ತದೆ ಎಂದು ಹೇಳಿದ್ದರು. ಅದನ್ನು ಇಂದಿಗೂ ಅನೇಕ ಮನೆಗಳಲ್ಲಿ ಪಾಲನೆ ಮಾಡಿದ್ದಾರೆ’ ಎಂದು ಹೇಳಿದರು.

ADVERTISEMENT

‘ಸಮರ್ಪಣಾ ಮನೋಭಾವದಿಂದ ದಾನ ಮಾಡಬೇಕು. ಈ ಅಭಿಯಾನ ನಿರಂತರವಾಗಿರಲಿ. ಶಬರಿಮಲೆ ಭಕ್ತರಿಗಷ್ಟೇ ಅಲ್ಲ. ಹಸಿದವರಿಗೆ ಅನ್ನ ನೀಡುವ ವ್ಯವಸ್ಥೆಯಾಗಲಿ. ಆಹಾರದ ಕೊರತೆಯಿಂದ ಜೀವನ ನೀಗಿಸುವವರಿಗೆ ಹಸಿವು ನೀಗಿಸುವಷ್ಟು ಆಹಾರ ದೊರೆಯಲಿ. ನಮ್ಮ ಸಂಸ್ಕಾರ, ಸಂಸ್ಕೃತಿಯ ಹಸಿವು ಅನ್ನಪೂರ್ಣೇಶ್ವರಿ ನೀಗಿಸಲಿ’ ಎಂದರು.

‘ಸಮರ್ಪಣೆ ಎನ್ನುವುದು ಭಾರತೀಯ ಸಂಸ್ಕೃತಿಯ ಜೀವಾಳ. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎನ್ನುವಂತೆ ಭಗವಂತ ನೀಡಿದ್ದನ್ನು ದಾನ ಮಾಡುವುದು ನಮ್ಮ ದೇಶದ ವ್ಯವಸ್ಥೆ ಕೂಡ ಹೌದು. ಇದನ್ನು ಆರ್‌ಎಸ್‌ಎಸ್ ಕಾರ್ಯಕರ್ತರು ಕೂಡ ಅನೇಕ ಸಂದರ್ಭಗಳಲ್ಲಿ ರುಜುವಾತು ಪಡಿಸಿದ್ದಾರೆ. ನಮ್ಮ ರಕ್ತದಲ್ಲಿ ಕೊಡುವ ಗುಣ ಇದೆ. ಅದೇ ಭಾರತೀಯತೆ’ ಎಂದುಆರ್‌ಎಸ್‌ಎಸ್ ಸಹಕಾರ್ಯವಾಹ ಪಟ್ಟಾಭಿರಾಮ್ ಹೇಳಿದರು.

ಕೆ.ಈ.ಕಾಂತೇಶ್ ಪ್ರಸ್ತಾವಿಕವಾಗಿ ಮಾತನಾಡಿದರು. ಶಾಸಕ ಕೆ.ಎಸ್.ಈಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು. ಎಸ್‌ಎಎಸ್‌ಎಸ್ ರಾಷ್ಟ್ರೀಯ
ಅಧ್ಯಕ್ಷ ಶೇಖರ್‌ಸ್ವಾಮಿ, ಕಾರ್ಯದರ್ಶಿ ಕೃಷ್ಣಪ್ಪ ಸ್ವಾಮಿ, ರಾಜ್ಯಾಧ್ಯಕ್ಷ
ಜಯರಾಂ ಸ್ವಾಮಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಮಾಜಿ ಶಾಸಕ ಭಾನುಪ್ರಕಾಶ್, ಮೇಯರ್ ಶಿವಕುಮಾರ್, ಮಂಜುನಾಥನ್ ಸ್ವಾಮಿ, ಎನ್.ಡಿ.ಸತೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.