ಶಿಕಾರಿಪುರ: ಪಟ್ಟಣದ ಹುಚ್ಚರಾಯಸ್ವಾಮಿ ಕೆರೆಗೆ ವಿದೇಶಿ ಹಕ್ಕಿಗಳು ವಲಸೆ ಬಂದಿದ್ದು, ವಾಯುವಿಹಾರಿಗಳು ಹಾಗೂ ಪಕ್ಷಿಪ್ರಿಯರನ್ನು ಆಕರ್ಷಿಸುತ್ತಿವೆ.
ಮಂಗೋಲಿಯಾದಿಂದ ನೂರಾರು ಪಟ್ಟೆ ತಲೆಯ ಹೆಬ್ಬಾತುಗಳು (ಬಾರ್ ಹೆಡೆಡ್ ಗೂಸ್) ಬಂದಿದ್ದು, ಪಕ್ಷಿ ವೀಕ್ಷಕರ ಪ್ರಕಾರ ಈ ಹಕ್ಕಿಗಳು 5ಸಾವಿರ ಕಿ.ಮಿ. ದೂರದಿಂದ ಬಂದಿವೆ ಎಂದು ಅಂದಾಜಿಸಲಾಗಿದೆ.
ನವೆಂಬರ್, ಡಿಸೆಂಬರ್ ಹಾಗೂ ಜನವರಿ ತಿಂಗಳಲ್ಲಿ ಕೆರೆ ಸ್ವಚ್ಛವಾಗಿರುವ, ಬೇಟೆಗಾರ ತೊಂದರೆ ಇಲ್ಲದ ಹಾಗೂ ಹೇರಳವಾಗಿ ಆಹಾರ ದೊರೆಯುವ ಸ್ಥಳಗಳಿಗೆ ಮಾತ್ರ ಈ ಹಕ್ಕಿಗಳು ವಲಸೆ ಬರುತ್ತವೆ. ಬಿಸಿಲು ಸಂದರ್ಭದಲ್ಲಿ ಕೆರೆಯಲ್ಲಿ ವಿಶ್ರಾಂತಿ ಪಡೆಯುವ ಹಕ್ಕಿಗಳು ಸಂಜೆ ಆಹಾರ ಹುಡುಕಿಕೊಂಡು ತೆರಳುತ್ತವೆ. ಈ ಹಕ್ಕಿಗಳು ಸುತ್ತ ಮುತ್ತಲಿನ ಕೃಷಿ ಭೂಮಿಯಲ್ಲಿ ಭತ್ತದ ಕೊಯ್ಲು ನಂತರ ಉಳಿಯುವ ಪೈರಿನ ತುದಿಯನ್ನು ಆಹಾರವಾಗಿ ತಿನ್ನುತ್ತವೆ.
ಕೆರೆಯ ಸೌಂದರ್ಯ ಮತ್ತಷ್ಟು ಹೆಚ್ಚಿದ್ದು, ದಡದಲ್ಲಿರುವ ಭ್ರಾಂತೇಶ್ ಉದ್ಯಾನಕ್ಕೆ ಬರುವ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಆದರೆ ಕೆರೆಯಲ್ಲಿ ಮೀನು ಹಿಡಿಯಲು ಮೀನುಗಾರರು ಬಲೆ ಹಾಕುವ ಹಿನ್ನೆಲೆ ಕೆಲವೊಮ್ಮೆ ಭಯದಿಂದ ಪಕ್ಷಿಗಳು ಹಾರಿ ಹೋಗುವ ದೃಶ್ಯ ಕೂಡ ಕಂಡು ಬರುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.