ಶಿವಮೊಗ್ಗ: ಮನುಷ್ಯ ತನ್ನಲ್ಲಿರುವ ಅಹಂಕಾರ ತೊರೆದು, ದಾಸನಂತೆ ಬದುಕಿದರೆ ಭಗವಂತ ಒಲಿಯುತ್ತಾನೆ ಎಂಬುದು ಕನಕದಾಸರ ನಂಬಿಕೆಯಾಗಿತ್ತು ಎಂದುಪ್ರವಚನಕಾರ ಜಿ.ಎಸ್.ನಟೇಶ್ ಹೇಳಿದರು.
ಕುವೆಂಪು ರಂಗಮಂದಿರದಲ್ಲಿ ಶುಕ್ರವಾರ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾನವನು ಜ್ಞಾನ ಎಂಬ ತೀರ್ಥದಲ್ಲಿ ಅನ್ನದಾನಮಾಡುವ ಹಾಗೂ ಉತ್ತಮಕೆಲಸ ಮಾಡುವಂತಹಸ್ನಾನ ಮಾಡಬೇಕು ಎಂಬ ಒಳ ಅರ್ಥಗಳುಳ್ಳ ಕೀರ್ತನೆಗಳನ್ನು ಕನಕದಾಸರು ಹಾಡಿದ್ದಾರೆ. ಅವರು ಆಡಂಬರದ ಭಕ್ತಿಯನ್ನು ಖಂಡಿಸಿದ್ದರು. ಭಗವಂತನಿಗೆ ನಿಜವಾದ ಭಕ್ತಿ ಮುಖ್ಯ ಎಂದು ಹೇಳಿದರು.
ಕನಕದಾಸರು ಎಲ್ಲರ ಮನಸ್ಸಿನಲ್ಲಿದ್ದಾರೆ. ಅವರ ಜಯಂತಿಯನ್ನು ಅವರ ಕೀರ್ತನೆಗಳನ್ನು ಹಾಡುವ ಮೂಲಕ ದಿನವೂ ಮನೆಗಳಲ್ಲಿ ಆಚರಿಸುತ್ತಾರೆ. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಶಾಸಕ ಕೆ.ಎಸ್.ಈಶ್ವರಪ್ಪ ಕಾರ್ಯಕ್ರಮ ಉದ್ಘಾಟಿಸಿ , ‘ಇಡೀ ಸಮುದಾಯವನ್ನು ಚಿಂತನೆಗೆ ತೊಡಗಿಸುವ, ವಿಸ್ಮಯಕಾರಿ ಒಳನೋಟಗಳನ್ನು ತಮ್ಮ ಕೃತಿಗಳಲ್ಲಿ ಚಿತ್ರಿಸಿರುವವರು ಕನಕದಾಸರು. ಅಂತಹ ಮಹನೀಯರಿಂದ ಸಮಾಜದಲ್ಲಿದ್ದ ಮೇಲು-ಕೀಳು ಭಾವನೆಗಳು ನೇಪಥ್ಯಕ್ಕೆ ಸರಿದವು’ ಎಂದರು.
ಕನಕದಾಸರು ದಾರ್ಶ ನಿಕರು,ವಾಗ್ಗೇಯಕಾರರೂ, ಸಂಸ್ಕೃತಿ ಚಿಂತಕರೂ, ಸಮಾಜ ಸುಧಾರಕರೂ, ಜಾನಪದ ತಜ್ಞರೂ, ವೈಚಾರಿಕ ಹಾಗೂ ಬಂಡಾಯ ಮನೋಧರ್ಮದ ಅಂತಃಕರಣಿ ಆಗಿದ್ದರು ಎಂದು ಬಣ್ಣಿಸಿದರು.
ಜಿಲ್ಲಾಧಿಕಾರಿ ಕೆ.ಎ. ದಯಾನಂದ ಮಾತನಾಡಿ, ‘ಕನಕದಾಸರು ತನ್ನೆಲ್ಲ ಸಿರಿತನವನ್ನು ತ್ಯಜಿಸಿ ಬರಿಗಾಲಲ್ಲಿ ನಾಡನ್ನು ಸುತ್ತಿ ನೀಡಿದ ಸಂದೇಶ ಅಸಾಧಾರಣ. ಕರ್ನಾಟಕಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಸಾಮಾನ್ಯ.ಸಾಮಾಜಿಕ ತಾರತಮ್ಯಗಳನ್ನು ಧಾನ್ಯಗಳ ಮೂಲಕ ವಿಡಂಬನಾತ್ಮಕವಾಗಿ ಪರಿಚಯಿಸಿದ್ದಾರೆ’ ಎಂದು ಶ್ಲಾಘಿಸಿದರು.
ರಾಷ್ಟ್ರೀಯ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಆಯೋಜಿಸಿದ್ದ ‘ಕನಕ ಸಾಹಿತ್ಯ ಲೋಕ’ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್,ಹೆಚ್ಚುವರಿ ಜಿಲ್ಲಾಧಿಕಾರಿ ಜಿ.ಅನುರಾಧಾ,ಜಿಲ್ಲಾ ಪಂಚಾಯಿತಿ ಸಿಇಒ ಕೆ.ಶಿವರಾಮೇಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್,ಕುರುಬರ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಪಿ.ಮೈಲಾರಪ್ಪ, ಪಾಲಿಕೆ ಸದಸ್ಯರಾದ ರೇಖಾ ರಂಗನಾಥ್, ರಾಹುಲ್, ಪ್ರಭಾಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಳಾ ವೆಂ.ನಾಯಕ್ ಅವರೂ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.