ADVERTISEMENT

ಶಿವಮೊಗ್ಗ: ಭಾರಿ ಸದ್ದಿನೊಂದಿಗೆ ಭೂಮಿ ಕಂಪನ

​ಪ್ರಜಾವಾಣಿ ವಾರ್ತೆ
Published 21 ಜನವರಿ 2021, 18:27 IST
Last Updated 21 ಜನವರಿ 2021, 18:27 IST

ಶಿವಮೊಗ್ಗ: ಜಿಲ್ಲೆಯ ಹಲವೆಡೆ ಗುರುವಾರ ರಾತ್ರಿ ಭಾರಿ ಸದ್ದಿನೊಂದಿಗೆ ಭೂಮಿ ಕಂಪಿಸಿದ್ದು, ಜನರು ಮನೆಗಳಿಂದ ಹೊರಬಂದು ತಂಡೋಪತಂಡವಾಗಿ ಬೀದಿಗಳಲ್ಲಿ ನಿಂತಿದ್ದರು.

ರಾತ್ರಿ 10ರ ನಂತರ ಘಟನೆ ನಡೆದಿದ್ದು, ಹಲವು ಮನೆಗಳ ಕಿಟಕಿ, ಬಾಗಿಲುಗಳು ಮುಚ್ಚಿಕೊಂಡಿವೆ. ನೂರಾರು ಮನೆಗಳ ಗಾಜುಗಳು ಒಡೆದಿವೆ. ಕೆಲವು ಕಡೆ ಸಣ್ಣದಾಗಿ ಗೋಡೆಗಳು ಬಿರುಕು ಬಿಟ್ಟಿವೆ. ಪಾತ್ರೆಗಳು ಅಲ್ಲಾಡಿವೆ. ಶಿವಮೊಗ್ಗ, ಭದ್ರಾವತಿ ನಗರಗಳಲ್ಲಿ ಹೆಚ್ಚಿನ ಶಬ್ದ ಕೇಳಿಬಂದಿದೆ. ಹಲವು ಕಟ್ಟಡಗಳು ಅಲ್ಲಾಡಿವೆ. ತೀರ್ಥಹಳ್ಳಿ, ಶಿಕಾರಿಪುರ, ಸಾಗರ, ಹೊಸನಗರದ ಹಲವು ಗ್ರಾಮಗಳಲ್ಲೂ ಜನರಿಗೆ ಭೂಕಂಪನದ ಅನುಭವವಾಗಿದೆ. ಹಳ್ಳಿಗಳಲ್ಲೂ ಜನರು ಭಯಭೀತರಾಗಿ ಹೊರಬಂದು ಶಬ್ದ ಬಂದ ದಿಕ್ಕಿನತ್ತ ಸಾಗಿದ್ದಾರೆ. ಎದುರಿಗೆ ಸಿಕ್ಕವರಿಗೆ ವಿಚಾರಿಸಿದ್ದಾರೆ.

ಶಿವಮೊಗ್ಗದ ಖಾಸಗಿ ಹೋಟೆಲ್‌ವೊಂದರ ಚಾವಣಿ ಕುಸಿದಿದೆ. ಹೊಳೆಹೊನ್ನೂರು ಸುತ್ತಮುತ್ತಲಿನ ಗ್ರಾಮದಲ್ಲಿ ಬಾರಿ ಶಬ್ದಕ್ಕೆ ಜನ ಮನೆಯಿಂದ ಹೊರಗೆ ಬಂದಿದ್ದಾರೆ. ಆನಂದಪುರ ಸುತ್ತಮುತ್ತ ಬಾಗಿಲು ಬಡಿತದ ಶಬ್ದವಾಗಿದೆ. ರಿಪ್ಪನ್ ಪೇಟೆ ಸುತ್ತ ಮುತ್ತಲಿನ ಪ್ರದೇಶದ ಭೂಮಿ ಕಂಪಿಸಿದ ಅನುಭವವಾಗಿದೆ. ಕೆಲವೆಡೆ ಮನೆಯಪಾತ್ರೆ ಸರಂಜಾಮಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಮನೆಯಲ್ಲಿ ಇದ್ದವರು ಗಾಬರಿಯಿಂದ ಹೊರಗೆ ಬಂದಿದ್ದಾರೆ. ಅರಸಾಳು, ಕೆರೆಹಳ್ಳಿ, ಸೂಡೂರುಗೇಟ್, ಜೇನಿ,ಹೆದ್ದಾರಿಪುರ, ಬೆಳ್ಳೂರು, ಆಯನೂರು, ಹಾರನಹಳ್ಳಿ ಮುಂತಾದಕಡೆ ಆದ ಅನುಭವವನ್ನು ಜನರು ಹಂಚಿಕೊಂಡಿದ್ದಾರೆ.ಚೋರಡಿ ಬಳಿ ಡಾಂಬರು ರಸ್ತೆ ಬಿರುಕು ಬಿಟ್ಟಿದೆ.

ADVERTISEMENT

ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆ:

ಭೂಮಿ ಕಂಪಿಸಿದಾಗ ರಸ್ತೆಯ ಮೇಲಿದ್ದ ಕಾರುಗಳು, ಜನರು ಒಮ್ಮೆ ಅಲ್ಲಾಡಿದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.