ADVERTISEMENT

ಶಿಕಾರಿಪುರ | ರೈತರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 23 ಜೂನ್ 2025, 14:01 IST
Last Updated 23 ಜೂನ್ 2025, 14:01 IST
ಶಿಕಾರಿಪುರದಲ್ಲಿ ಸೋಮವಾರ ಕೃಷಿಕ ಸಮಾಜದ ಮುಖಂಡರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು
ಶಿಕಾರಿಪುರದಲ್ಲಿ ಸೋಮವಾರ ಕೃಷಿಕ ಸಮಾಜದ ಮುಖಂಡರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು   

ಶಿಕಾರಿಪುರ: ಮುಂಗಾರುಪೂರ್ವ ಮಳೆಗೆ ತಾಲ್ಲೂಕಿನ ಸಾಕಷ್ಟು ರೈತರ ಮೆಕ್ಕೆಜೋಳ, ಭತ್ತ ಬೆಳೆ ಹಾಳಾಗಿದ್ದು ಅದಕ್ಕೆ ಸರ್ಕಾರ ಪರಿಹಾರ ನೀಡಬೇಕು. ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಕೃಷಿಕ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಮಹೇಶ್ ಹುಲ್ಮಾರ್ ಒತ್ತಾಯಿಸಿದರು. 

ಪಟ್ಟಣದಲ್ಲಿ ಸೋಮವಾರ ಕೃಷಿಕ ಸಮಾಜದಿಂದ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು. 

‘ಮುಂಚಿತವಾಗಿ ಮುಂಗಾರು ಆರಂಭಗೊಂಡ ಕಾರಣಕ್ಕೆ ಬೇಸಿಗೆ ಬೆಳೆ ಕಟಾವು ಮಾಡುವುದಕ್ಕೆ ರೈತರಿಗೆ ಸಾಧ್ಯವಾಗಿಲ್ಲ. ಕಟಾವು ಮಾಡಿದ ರೈತರು ಬೆಳೆ ಒಣಗಿಸಲು ಹಾಕಿದಾಗ ಸಾಕಷ್ಟು ಪ್ರಮಾಣದ ಮೆಕ್ಕೆಜೋಳ, ಭತ್ತದ ಬೆಳೆಯು ನೆಂದು ಹಾಳಾಗಿದೆ. ಎನ್‌ಡಿಆರ್‌ಎಫ್ ನಿಯಮದ ಪ್ರಕಾರ ಕಟಾವು ಮಾಡಿದ ಬೆಳೆಗೆ ಹಾನಿಯಾದರೆ ಪರಿಹಾರ ನೀಡುವುದಿಲ್ಲ. ಈ ಅವೈಜ್ಞಾನಿಕ ನಿಯಮ ಕೈಬಿಟ್ಟು ಮಳೆಗೆ ನೆಂದು ಹಾನಿಯಾದ ಬೆಳೆಗೂ ಪರಿಹಾರ ಕಲ್ಪಿಸಬೇಕು’ ಎಂದರು. 

ADVERTISEMENT

‘ಭತ್ತ, ಮೆಕ್ಕೆಜೋಳ ಖರೀದಿ ಕೇಂದ್ರವನ್ನು ತಾಲ್ಲೂಕಿನಲ್ಲಿ ಕೂಡಲೇ ಆರಂಭಿಸಬೇಕು. ಭತ್ತ ಖರೀದಿಗೆ ವಿಧಿಸಿರುವ ನಿಯಮವನ್ನು ಸರಳೀಕರಣಗೊಳಿಸಬೇಕು’ ಎಂದು ಒತ್ತಾಯಿಸಿದರು. 

ಭದ್ರಾ ಕಾಡಾ ಮಾಜಿ ಅಧ್ಯಕ್ಷ ನಗರದ ಮಹಾದೇವಪ್ಪ, ಕೃಷಿಕ ಸಮಾಜದ ನಿರ್ದೇಶಕರಾದ ರುದ್ರಪ್ಪ, ಡಿ.ಎಸ್.ಈಶ್ವರಪ್ಪ, ಪಾಟೀಲ, ಕೆ.ಬಿ.ರಾಮಗೌಡ, ಕೆ.ಪಿ.ರುದ್ರಪ್ಪ, ಎಚ್.ಎಸ್.ಬೂದೆಪ್ಪ, ಗಂಗಾಧರ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.