ತೀರ್ಥಹಳ್ಳಿ: ‘ಕೇಂದ್ರ ಸರ್ಕಾರ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಬಡ ಜನರನ್ನು ಸುಲಿಗೆ ಮಾಡುತ್ತಿದೆ. ರಸಗೊಬ್ಬರದ ಬೆಲೆಯನ್ನು ಹೆಚ್ಚಿಸಿ ರೈತಾಪಿ ವರ್ಗಕ್ಕೆ ಮೋಸ ಮಾಡುತ್ತಿದೆ. ಬೆಲೆ ಇಳಿಕೆ ಮಾಡಬೇಕು, ಇಲ್ಲವೇ ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ ನೀಡಬೇಕು’ ಎಂದು ಬ್ಲಾಕ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಕೆಸ್ತೂರು ಮಂಜುನಾಥ ಆಗ್ರಹಿಸಿದರು.
ತಾಲ್ಲೂಕು ಕಚೇರಿ ಮುಂಭಾಗ ಸೋಮವಾರ ಯುವ ಕಾಂಗ್ರೆಸ್ ಘಟಕದಿಂದ ಹಮ್ಮಿಕೊಂಡಿದ್ದ ಪ್ರತಿಭಟನೆ ಉದ್ದೇಶಿಸಿ ಅವರು ಮಾತನಾಡಿ, ‘ದೇಶದಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ಒಳ್ಳೆಯ ದಿನಗಳು ಬರುತ್ತವೆ ಎನ್ನಲಾಗುತ್ತಿತ್ತು. ಇವರ ಅವಧಿಯಲ್ಲಿ ಬಡವರೆಲ್ಲಾ ಶ್ರೀಮಂತರಾಗಿದ್ದಾರಾ’ ಎಂದು ಪ್ರಶ್ನಿಸಿದರು.
‘2014ರ ನಂತರ ರೈತರಿಂದ ಭೂಮಿ ಕಸಿದುಕೊಳ್ಳುವ ಕಾಯ್ದೆಗಳು ಪರೋಕ್ಷವಾಗಿ ಜಾರಿಯಾಗುತ್ತಿವೆ. ಅಗತ್ಯ ಗೊಬ್ಬರದ ಬೆಲೆ ಗಗನಕ್ಕೇರಿದೆ. ಇಂತಹ ಸರ್ವಾಧಿಕಾರಿ ಸರ್ಕಾರಗಳಿಂದಲೇ ವಿಶ್ವ ಮೂರನೇ ಮಹಾಯುದ್ಧದ ಆತಂಕ ಎದುರಿಸುತ್ತಿದೆ’ ಎಂದು ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಪೂರ್ಣೇಶ್ ಕೆಳಕೆರೆ ದೂರಿದರು.
ಗ್ರೇಡ್-2 ತಹಶೀಲ್ದಾರ್ ಸತ್ಯಮೂರ್ತಿ ಮನವಿ ಸ್ವೀಕರಿಸಿದರು.
ಮುಖಂಡರಾದ ನವೀನ್ ಕುಮಾರ್, ಪಡುವಳ್ಳಿ ಕಿಟ್ಟಪ್ಪ, ರವಿ ಹೊಸ್ಕೆರೆ, ಶ್ರೇಯಸ್ ರಾವ್, ಅಶ್ವಲ್ ಗೌಡ, ಶ್ರೀನಂದ ದಬ್ಬಣಗದ್ದೆ, ಪಣಿರಾಜ್ ಕಟ್ಟೇಹಕ್ಕಲು, ಆಸೀಫ್ ಸೀಬಿನಕೆರೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.