ರಿಪ್ಪನ್ಪೇಟೆ:ಶಿವಮೊಗ್ಗದ ಜೆಎನ್ಇ ಕಾಲೇಜಿನಲ್ಲಿ ದ್ವಿತೀಯ ಪಿಯು ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಸಮೀಪದ ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳವಂಕ ಗ್ರಾಮದ ವಿದ್ಯಾರ್ಥಿಅರುಣ್ ಕುಮಾರ್ (18) ಶವ ನೇಣು ಬಿಗಿದ ಸ್ಥಿತಿಯಲ್ಲಿ ಶುಕ್ರವಾರ ಪತ್ತೆಯಾಗಿದೆ.
ಶೆಟ್ಟಿಕೆರೆ ಬಸವಾಪುರ ನಡುವಿನ ಮೀಸಲು ಅರಣ್ಯ ಪ್ರದೇಶದಲ್ಲಿ ಶವ ಪತ್ತೆಯಾಗಿದ್ದು, ಪೋಷಕರು ಕೊಲೆ ಶಂಕೆ ವ್ಯಕ್ತಪಡಿಸಿ ದೂರು ನೀಡಿದ್ದಾರೆ.
ಶಿವಮೊಗ್ಗದಲ್ಲಿ ಹಾಸ್ಟೆಲ್ನಲ್ಲಿ ಇದ್ದು ವ್ಯಾಸಂಗ ಮಾಡುತ್ತಿದ್ದ ಅರುಣ್ಕುಮಾರ್.
‘ಎರಡು ದಿನಗಳಿಂದ ಮನೆಯವರ ದೂರವಾಣಿ ಕರೆಗೆ ಉತ್ತರಿಸಿರಲಿಲ್ಲ.ಹಾಸ್ಟೆಲ್ನಲ್ಲಿ ವಿಚಾರಿಸಿದಾಗ ಎರಡು ದಿನಗಳ ಹಿಂದೆಯೇ ಹಾಸ್ಟೆಲ್ ತೊರೆದಿರುವುದಾಗಿ ತಿಳಿಸಿದ್ದರು. ಈ ಕಾರಣ ಶಿವಮೊಗ್ಗ ಠಾಣೆಯಲ್ಲಿ ಮಗ ಕಾಣೆಯಾದ ಬಗ್ಗೆ ದೂರು ನೀಡಿದ್ದೆವು’ ಎಂದು ಅರುಣ್ ತಂದೆಯೋಗೇಂದ್ರ ದೂರಿನಲ್ಲಿ ತಿಳಿಸಿದ್ದಾರೆ.
ಪೊಲೀಸರು ಮೊಬೈಲ್ ಕರೆಯ ಜಾಡು ಹಿಡಿದು ಹೊರಟಾಗ ಶೆಟ್ಟಿಕೆರೆ ಬಸವಾಪುರ ನಡುವಿನ ಅರಣ್ಯ ಪ್ರದೇಶದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಈ ಕುರಿತು ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಶಿವಮೊಗ್ಗದ ಎಎಸ್ಪಿ ಶೇಖರ್, ಡಿವೈಎಸ್ಪಿ ಉಮೇಶ್ ನಾಯಕ್, ಸಿಪಿಐ ಸಂಜೀವ್ ಕುಮಾರ್, ಪಿಎಸ್ಐ ನವೀನ್ ಕುಮಾರ್ ಹಾಗೂ ರಿಪ್ಪನ್ಪೇಟೆ ಪಿಎಸ್ಐ ಪಾರ್ವತಿಬಾಯಿ ಭೇಟಿ ನೀಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.