ADVERTISEMENT

ಗ್ರಾಮೀಣ ಪ್ರದೇಶದಲ್ಲೂ ಪ್ಲಾಸ್ಟಿಕ್‌ ನಿರ್ಬಂಧ

ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ನ್ಯಾಯಮೂರ್ತಿ ಸುಭಾಷ್ ಬಿ.ಅಡಿ ಸೂಚನೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2019, 14:18 IST
Last Updated 5 ಡಿಸೆಂಬರ್ 2019, 14:18 IST
ಶಿವಮೊಗ್ಗದಲ್ಲಿ ಗುರುವಾರ ನಡೆದ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಮಾರ್ಗಸೂಚಿ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯಲ್ಲಿ ನ್ಯಾಯಮೂರ್ತಿ ಸುಭಾಷ್ ಬಿ.ಅಡಿ ಮಾತನಾಡಿದರು.
ಶಿವಮೊಗ್ಗದಲ್ಲಿ ಗುರುವಾರ ನಡೆದ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಮಾರ್ಗಸೂಚಿ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯಲ್ಲಿ ನ್ಯಾಯಮೂರ್ತಿ ಸುಭಾಷ್ ಬಿ.ಅಡಿ ಮಾತನಾಡಿದರು.   

ಶಿವಮೊಗ್ಗ: ಗ್ರಾಮೀಣ ಪ್ರದೇಶಗಳಲ್ಲೂಪ್ಲಾಸ್ಟಿಕ್ ಮೇಲೆ ಬಿಗಿ ನಿರ್ಬಂಧ ವಿಧಿಸಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ನ್ಯಾಯಮೂರ್ತಿ ಸುಭಾಷ್ ಬಿ.ಅಡಿ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಗುರುವಾರ ನ್ಯಾಯಾಧೀಕರಣದ ಮಾರ್ಗಸೂಚಿ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಪ್ಲಾಸ್ಟಿಕ್ ಬಳಕೆ ಮಾಡಲು ಅವಕಾಶ ನೀಡಲೇ ಬಾರದು.ಪ್ಲಾಸ್ಟಿಕ್ ಬಳಕೆ ವಿರುದ್ಧ ನಿರಂತರ ದಾಳಿ ನಡೆಸಬೇಕು.ಸಂಪೂರ್ಣ ಪ್ಲಾಸ್ಟಿಕ್ ಮುಕ್ತಗೊಳಿಸಬೇಕು. ಹೊಟೇಲ್‍ಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಯಂತ್ರಿಸಬೇಕು. ಉತ್ಪನ್ನಗಳ ಪ್ಯಾಕಿಂಗ್‍ನಲ್ಲಿ ಪ್ಲಾಸ್ಟಿಕ್ ಬಳಸುವ ಎಲ್ಲಾ ಉತ್ಪಾದಕರಸಭೆ ನಡೆಸಬೇಕು. ಪ್ಲಾಸ್ಟಿಕ್ ವಿಲೇವಾರಿಗೆ ತಗಲುವ ವೆಚ್ಚ ಅವರೇ ಭರಿಸಬೇಕು. ಆನ್‍ಲೈನ್ ಮಾರ್ಕೆಟಿಂಗ್ ಕಂಪನಿಗಳು ಪ್ಯಾಕಿಂಗ್‍ನಲ್ಲಿ ಬಳಸುವ ಪ್ಲಾಸ್ಟಿಕ್ ವಿಲೇವಾರಿಗೆ ಅವರೇ ಘಟಕ ತೆರೆಯಬೇಕು. ಅದಕ್ಕಾಗಿ ಶುಲ್ಕ ನಿಗದಿಪಡಿಸಬೇಕು. ಸ್ಯಾನಿಟರಿ ನ್ಯಾಪ್‍ಕಿನ್ ಮಾರ್ಕೆಟಿಂಗ್ ಮಾಡುವವರು ವಿಲೇವಾರಿಗೆ ಅಗತ್ಯವಿರುವ ಕಾಗದದ ಕವರ್ ಒದಗಿಸುವುದು ಕಡ್ಡಾಯ ಎಂದರು.

ADVERTISEMENT

ಮನೆ ಹಂತದಲ್ಲಿ ವಿಂಗಡಿಸದ ತ್ಯಾಜ್ಯ ಪಡೆಯಬಾರದು. ಪೈಪ್ ಕಂಪೋಸ್ಟಿಂಗ್ ಪದ್ಧತಿ ಎಲ್ಲಾ ವಾರ್ಡ್‍ಗಳಲ್ಲಿ ಜನಪ್ರಿಯಗೊಳಿಸಬೇಕು. ಪ್ರತಿ ವಾರ್ಡ್‍ನಲ್ಲಿ ಪ್ರಾತ್ಯಕ್ಷಿತೆಏರ್ಪಡಿಸಬೇಕು.ಪೈಪ್ ಕಂಪೋಸ್ಟಿಂಗ್ ಸೇರಿದಂತೆ ಸ್ಥಳೀಯವಾಗಿ ವಾರ್ಡ್‍ವಾರು ಹಸಿ ಕಸ ವಿಲೇವಾರಿ ಮಾಡಲು ಯೋಜನೆ ರೂಪಿಸಬೇಕು.ಇದರಿಂದ ತ್ಯಾಜ್ಯ ಸಾಗಣೆ ಕೆಲಸ ಕಡಿಮೆಯಾಗುತ್ತದೆ. ಇಂದೋರ್‌ನಲ್ಲಿಈ ಪ್ರಯೋಗ ಯಶಸ್ವಿಯಾಗಿದೆ ಎಂದು ಮಾಹಿತಿ ನೀಡಿದರು.

ಹಸಿ ತ್ಯಾಜ್ಯ ಗೊಬ್ಬರವನ್ನಾಗಿ ಪರಿವರ್ತಿಸಿ ರೈತರಿಗೆ ಸಬ್ಸಿಡಿ ದರದಲ್ಲಿ ಮಾರಾಟ ಮಾಡಬಹುದು.ಭದ್ರಾವತಿ ನಗರಸಭೆಯಲ್ಲಿ ಪ್ರಸ್ತುತ 27 ಟ್ರಾಕ್ಟರ್‌ ತ್ಯಾಜ್ಯ ಗೊಬ್ಬರವನ್ನು ರೈತರಿಗೆ ಮಾರಾಟ ಮಾಡಲಾಗಿದೆ. ಈರೀತಿ ಇತರ ಸ್ಥಳೀಯ ಸಂಸ್ಥೆಗಳು ತಮ್ಮಲ್ಲಿ ಸಿದ್ಧವಾಗುವ ತ್ಯಾಜ್ಯಗಳಿಗೆಬ್ರ್ಯಾಂಡ್‌ರೂಪಿಸಿಕೊಳ್ಳುವಂತೆ ಸಲಹೆ ನೀಡಿದರು.

ಬೈಲಾ ಸಿದ್ಧ: ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಮಾತನಾಡಿ, ನಗರ ಪಾಲಿಕೆ ತ್ಯಾಜ್ಯ ವಿಲೇವಾರಿಗಾಗಿ ಬೈಲಾ ಅಂತಿಮಪಡಿಸಲಾಗಿದೆ.ಮುಂದಿನ ಸಾಮಾನ್ಯ ಸಭೆಯಲ್ಲಿ ಅದಕ್ಕೆ ಅನುಮೋದನೆ ದೊರೆಯಲಿದೆ. ಪ್ರಸ್ತುತ 190 ವಾರ್ಡ್‍ಗಳ ಪೈಕಿ 165 ವಾರ್ಡ್‍ಗಳಲ್ಲಿ ಮನೆ ಹಂತದಲ್ಲಿ ವಿಂಗಡನೆ ಮಾಡಿದ ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ. ಒಂದು ತಿಂಗಳ ಅವಧಿಯಲ್ಲಿ ಶಿವಮೊಗ್ಗ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಂದು ಟನ್ ಪ್ಲಾಸ್ಟಿಕ್ ವಶಪಡಿಸಿಕೊಳ್ಳಲಾಗಿದೆ ಎಂದುವಿವರ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು, ಜಿಲ್ಲಾ ಪಂಚಾಯಿತಿಸಿಇಒಎಂ.ಎಲ್.ವೈಶಾಲಿ, ಪಾಲಿಕೆ ಆಯುಕ್ತ ಚಿದಾನಂದ ವಟಾರೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.