ಶಿಕಾರಿಪುರ: ಬೀರಲಿಂಗೇಶ್ವರ ದೇವರು ಕುರುಬ ಸಮುದಾಯದ ಜನರ ಆರಾಧನೆಗೆ ಮಾತ್ರ ಸೀಮಿತವಲ್ಲ. ಶಿವಸ್ವರೂಪಿ ಬೀರಪ್ಪ ಎಲ್ಲ ಜಾತಿ ಜನರ ಆರಾಧಕನಾಗಿದ್ದಾನೆ ಎಂದು ಕನಕಗುರುಪೀಠ ಹೊಸದುರ್ಗ ಶಾಖಾಮಠದ ಪೀಠಾಧ್ಯಕ್ಷ ಈಶ್ವರಾನಂದಪುರಿ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ಭಾನುವಾರ ಬೀರಲಿಂಗೇಶ್ವರ ಜೀರ್ಣೋದ್ಧಾರ ಸೇವಾ ಟ್ರಸ್ಟ್ ಆಶ್ರಯದಲ್ಲಿ ನಡೆದ ಬೀರಲಿಂಗೇಶ್ವರ ದೇವಸ್ಥಾನ ಉದ್ಘಾಟನಾ ಸಮಾರಂಭದ ನೇತೃತ್ವ ವಹಿಸಿ ಅವರು ಮಾತನಾಡಿದರು.
‘ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಮೂಲಕ ದೇವರ ಕೃಪೆಗೆ ಒಳಗಾಗಬೇಕು. ನಾವು ಸಂಪಾದಿಸಿದ ಹಣ ಕಲ್ಯಾಣ ಕಾರ್ಯಕ್ರಮಕ್ಕೆ ನೀಡಿದಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ. ಮನುಷ್ಯ ಸಿರಿ ಬಂದ ಕಾಲದಲ್ಲಿ ಕರೆದು ದಾನ ಮಾಡಬೇಕು. ದೇವಸ್ಥಾನ ನಿರ್ಮಿಸಲು ದಾನ ನೀಡಿದ ದಾನಿಗಳಿಗೆ ಧನ್ಯವಾದ ಅರ್ಪಿಸುತ್ತೇನೆ. ನೂರುದಿನ ಸಾವಿರ ಹಳ್ಳಿ ಪ್ರಯುಕ್ತ ಕಾರ್ತಿಕ ಮಾಸದಲ್ಲಿ ಪಟ್ಟಣಕ್ಕೆ ಬರುತ್ತೇನೆ’ ಎಂದರು.
‘ದೇವಸ್ಥಾನಗಳು ದಾರಿದ್ರ್ಯ ಕಳೆಯುವ ಶಕ್ತಿ ಕೇಂದ್ರಗಳಾಗಿವೆ. ದಾನ ಹಾಗೂ ದಾಸೋಹ ಕಾರ್ಯಕ್ಕೆ ದಾರಿದ್ರ್ಯವನ್ನು ಕಳೆಯುವ ಶಕ್ತಿ ಇದೆ. ಕಾಗಿನೆಲೆ ನಿರಂಜನಾನಂದಪುರಿ ಸ್ವಾಮೀಜಿ ಹಾಗೂ ಹೊಸದುರ್ಗ ಈಶ್ವರಾನಂದಪುರಿ ಸ್ವಾಮೀಜಿ ಹಲವು ಮಠಗಳಿಗೆ ₹ 120 ಕೋಟಿಯನ್ನು ಕೊಡಿಸಿದ್ದರು’ ಎಂದು ವಿರಕ್ತಮಠದ ಪೀಠಾಧ್ಯಕ್ಷ ಚನ್ನಬಸವ ಸ್ವಾಮೀಜಿ ಶ್ಲಾಘಿಸಿದರು.
‘ದೇವಸ್ಥಾನ ಸೇರಿ ಧಾರ್ಮಿಕ ಕಾರ್ಯಗಳಿಗೆ ದಾನ ಮಾಡಲು ಸಮಾಜದ ಮುಖಂಡರು ಮುಂದಾಗಬೇಕು. ದಾನ ಮಾಡುವ ಶಕ್ತಿ ದೇವರು ಎಲ್ಲರಿಗೂ ನೀಡಲಿ’ ಎಂದು ದಾನಿ ಕುರುಬ ಸಮಾಜ ಮುಖಂಡ ಕೊಪ್ಪಲು ಮಂಜುನಾಥ್ ಹೇಳಿದರು.
ಬೀರಲಿಂಗೇಶ್ವರ ಜೀರ್ಣೋದ್ಧಾರ ಸೇವಾ ಟ್ರಸ್ಟ್ ಅಧ್ಯಕ್ಷ ಗುಡ್ಡಳ್ಳಿ ಲೋಕೇಶಪ್ಪ ಅಧ್ಯಕ್ಷತೆ ವಹಿಸಿದ್ದರು.
ಪುರಸಭೆ ಅಧ್ಯಕ್ಷೆ ರೇಖಾಬಾಯಿ ಮಂಜುನಾಥ್ ಸಿಂಗ್, ಜಿಲ್ಲಾ ಕುರುಬ ಸಮಾಜ ಉಪಾಧ್ಯಕ್ಷ ಭದ್ರಾಪುರ ಹಾಲಪ್ಪ, ತಾಲ್ಲೂಕು ಅಧ್ಯಕ್ಷ ಕಬಾಡಿ ರಾಜಪ್ಪ, ಉಪಾಧ್ಯಕ್ಷ ಗೋಣಿ ಮಾಲತೇಶ್, ರೂಪಕಲಾ ಶ್ರೀಧರ್ ಹೆಗಡೆ, ಉಮಾವತಿ, ಶೈಲಾ ಯೋಗೀಶ್, ಶಕುಂತಲಮ್ಮ ಗೋಣಿ ಶಿವಪ್ಪ, ಕಮಲಮ್ಮ ಹುಲ್ಮಾರ್, ರೂಪ ಮಂಜುನಾಥ್, ಪಚ್ಚಿಗಿಡ್ಡಪ್ಪ, ಮಲ್ಲಪ್ಪ ಹೊಲಗಾವಲು, ಡಾ.ಪ್ರಶಾಂತ್, ಭಂಡಾರಿ ಮಾಲತೇಶ್, ಬಿ.ಎಲ್. ರಾಜು, ಟ್ರಸ್ಟ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.