ಶಂಕರಘಟ್ಟ: ಕಳೆದ ವರ್ಷ ಭಾರತದಲ್ಲಿ ಹೆಚ್ಚು ವಯಸ್ಕ ತಾಯಂದಿರ ಆತ್ಮಹತ್ಯೆ, ಉದ್ಯೋಗಸ್ಥ ಮಹಿಳೆಯರ ಮೇಲೆ ಕಿರುಕುಳ, ಅತ್ಯಾಚಾರ ಹಾಗೂ ಸ್ವಾತಂತ್ರೋತ್ತರ ಅತಿ ಕನಿಷ್ಠ ಲಿಂಗಾನುಪಾತ ದಾಖಲಾದ ಘಟನಾವಳಿಗಳು ಬೆಳಕಿಗೆ ಬಂದಿದ್ದು, ಭಾರತದಲ್ಲಿ ಸ್ತ್ರೀ ವಿರೋಧಿ ಅಭಿವೃದ್ಧಿ ಮಾದರಿ ಅಸ್ಥಿತ್ವದಲ್ಲಿದೆ ಎನ್ನಲು ಪುರಾವೆಗಳನ್ನು ಒದಗಿಸಿದೆ ಎಂದು ತಿರುಪತಿಯ ಪದ್ಮಾವತಿ ಮಹಿಳಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ. ಕಿರಣ್ ಪ್ರಸಾದ್ ಆಭಿಪ್ರಾಯಪಟ್ಟರು.
ಕುವೆಂಪು ವಿಶ್ವವಿದ್ಯಾಲಯದ ಪ್ರೊ. ಎಸ್.ಪಿ. ಹಿರೇಮಠ್ ಸಭಾಂಗಣದಲ್ಲಿ ಮಹಿಳಾ ಅಧ್ಯಯನ ಕೇಂದ್ರದ ವತಿಯಿಂದ ಎರಡು ದಿನಗಳ ಕಾಲ ಏರ್ಪಡಿಸಿರುವ ‘ಆಧುನಿಕೋತ್ತರ ಸ್ತ್ರಿವಾದ ಮಾದರಿಗಳು: ಅಭಿವೃದ್ಧಿಗಾಗಿ ಭಾರತೀಯ ಅನುಭವ ಮತ್ತು ತಂತ್ರಗಳು’ ಎಂಬ ವಿಷಯದ ಕುರಿತುಗುರುವಾರ ರಾಷ್ಟ್ರೀಯ ಸಮಾವೇಶವದಲ್ಲಿ ಮಾತನಾಡಿದರು.
ಭಾರತದ ಶೇ 48ರಷ್ಟು ಮಹಿಳೆಯರು ಅನಿಮೀಯಾಗೆ ತುತ್ತಾಗಿದ್ದು, ತಾಯಿ ಮರಣ ಪ್ರಮಾಣ 212ರಷ್ಟಿದೆ. 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕೂಸಿನ ಮರಣ 66 ಇದೆ. ಗರ್ಭಿಣಿ ಮತ್ತು ಬಾಣಂತನ ಸಂದರ್ಭದ ಆರೋಗ್ಯ, ಸ್ತನಪಾನ ಸೇರಿದಂತೆ ವಿವಿಧ ರೀತಿಯ ಒತ್ತಡಗಳಿಂದ 2019ರಲ್ಲಿ 20 ಸಾವಿರ ತಾಯಂದಿರು ಮರಣ ಹೊಂದಿದ್ದಾರೆ ಎಂದು ವರದಿ ಹೇಳಿದೆ ಎಂದರು.
ಸಿಂಡಿಕೇಟ್ ಸದಸ್ಯೆ ಡಾ.ಕಿರಣ್ ದೇಸಾಯಿ ಮಾತನಾಡಿ, ಸ್ತ್ರಿವಾದವೆಂದರೆ ಅದು ಪುರುಷ ವಿರೋಧಿಯಲ್ಲ, ಪಾಶ್ಚಾತ್ಯ ಚಿಂತನೆಯೂ ಅಲ್ಲ. ಮಹಿಳೆಯನ್ನು ಸಮಾನವಾಗಿ ಕಾಣಲು, ಸರ್ವರೀತಿಯಲ್ಲೂ ಸರ್ವತ್ರ ಮಾದರಿಯಲ್ಲೂ ಸಮಾಜದ ಮುಖ್ಯವಾಹಿನಿಗೆ ತರಲು ಉದ್ದೇಶಪೂರ್ವಕವಾಗಿ ಕೈಗೊಂಡಿರುವ ಚಿಂತನ ಕ್ರಮ ಎಂದರು.
ವಿಶ್ವವಿದ್ಯಾಲಯ ಪರೀಕ್ಷಾಂಗ ಕುಲಸಚಿವ ಪ್ರೊ. ವೆಂಕಟೇಶ್ವರುಲು, ಪ್ರೊ. ಎಚ್.ಎನ್. ರಮೇಶ್, ಪ್ರೊ. ಪದ್ಮಮ್ಮ, ಡಾ. ರಾಜೇಶ್ವರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.