ಸಾಗರ: ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘ, ಮಲೆನಾಡು ಅಡಿಕೆ ಮಾರಾಟ ಸಹಕಾರ ಸಂಘ, ತೋಟಗಾರ್ಸ್ ಸೇರಿದಂತೆ ವಿವಿಧ ಸಹಕಾರಿ ಸಂಸ್ಥೆಗಳ ಆಶ್ರಯದಲ್ಲಿ ಜನವರಿ 31ರಂದು ಮಧ್ಯಾಹ್ನ 3ಕ್ಕೆ ಗಾಂಧಿ ಮೈದಾನದಲ್ಲಿ ಮಾಜಿ ಶಾಸಕ ಹಾಗೂ ಹಿರಿಯ ಸಹಕಾರಿ ಧುರೀಣ ಎಲ್.ಟಿ. ತಿಮ್ಮಪ್ಪ ಹೆಗಡೆ ಅವರ ನುಡಿನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ವ.ಶಂ. ರಾಮಚಂದ್ರ ಭಟ್ ತಿಳಿಸಿದರು.
ಎಲ್.ಟಿ.ತಿಮ್ಮಪ್ಪ ಹೆಗಡೆ ಅವರು, ಆಪ್ಸ್ಕೋಸ್, ಕ್ಯಾಂಪ್ಕೊ, ಅಡಿಕೆ ಬೆಳೆಗಾರರ ಸಂಘ, ತೋಟಗಾರ್ಸ್ ಸೇರಿದಂತೆ ಅನೇಕ ಬೆಳೆಗಾರರ ಸಂಘವನ್ನು ಸ್ಥಾಪಿಸಿ, ಸ್ಥಾಪಕ ಅಧ್ಯಕ್ಷರಾಗಿ ಬೆಳೆಗಾರರ ಸಮಸ್ಯೆಗೆ ಸ್ಪಂದಿಸಿದ್ದಾರೆ. ಎರಡು ಬಾರಿ ಶಾಸಕರಾಗಿ ಕ್ಷೇತ್ರದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಶ್ರದ್ಧಾಂಜಲಿ ಸಭೆಯಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಗೃಹ ಸಚಿವ ಅರಗ ಜ್ಞಾನೇಂದ್ರ, ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಹಾಲಪ್ಪ ಹರತಾಳು, ಕುಮಾರ್ ಬಂಗಾರಪ್ಪ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ಕುಮಾರ್ ಸೇರಿದಂತೆ ಪ್ರಮುಖ ಸಹಕಾರ ಧುರೀಣರು ಪಾಲ್ಗೊಳ್ಳಲಿದ್ದಾರೆ. ಸಾರ್ವಜನಿಕರು, ಹೆಗಡೆ ಅವರ ಅಭಿಮಾನಿಗಳು, ಅಡಿಕೆ ಬೆಳೆಗಾರರು, ರೈತರು ನುಡಿನಮನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
‘ತಿಮ್ಮಪ್ಪ ಹೆಗಡೆ ಅವರು ಎರಡು ಬಾರಿ ಶಾಸಕರಾಗಿದ್ದರೂ ತಮ್ಮ ಸಚ್ಚಾರಿತ್ರ್ಯದ ನಡೆನುಡಿಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರವಾದವರು. ಅಡಿಕೆ ಬೆಳೆ ಮತ್ತು ಬೆಳೆಗಾರರಿಗೆ ಸಂಕಷ್ಟ ಬಂದಾಗಲೆಲ್ಲಾ ಬೆಳೆಗಾರರ ಪರವಾಗಿ ನಿಂತು ಹೋರಾಟಕ್ಕೆ ಸ್ಫೂರ್ತಿ ನೀಡಿದವರು. ಅವರ ನಿಧನ ಬೆಳೆಗಾರರ ಲೋಕಕ್ಕೆ ತುಂಬಲಾರದ ನಷ್ಟ ಉಂಟು ಮಾಡಿದೆ’ ಎಂದು ಮ್ಯಾಮ್ಕೋಸ್ ನಿರ್ದೇಶಕ ದಿನೇಶ್ ಬರದವಳ್ಳಿ ಹೇಳಿದರು.
ಹು.ಭಾ.ಅಶೋಕ್, ಎ.ಆರ್.ಮಹಾಬಲೇಶ್ವರ ಅರೆಹದ, ರಾಜೇಂದ್ರ ಖಂಡಿಕಾ, ನಾಗಾನಂದ್, ಚೇತನರಾಜ್ ಕಣ್ಣೂರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.