ರಿಪ್ಪನ್ಪೇಟೆ: ‘ಶುಭ ಸಂಕಲ್ಪಗಳನ್ನು ಮಾಡುವ ಮೂಲಕ ಪ್ರತಿಯೊಬ್ಬರೂ ಪ್ರಗತಿ ಪಥದಲ್ಲಿ ಸಾಗಬೇಕು. ಆ ನಿಟ್ಟಿನಲ್ಲಿ ಹೊಸಜೀವನ ರೂಪಿಸಿಕೊಳ್ಳಬೇಕು. ಬದುಕಿನಲ್ಲಿ ಅಜ್ಞಾನದ ಕತ್ತಲೆ ಆವರಿಸಿದಾಗ ಕುಗ್ಗದೆ ಜ್ಞಾನವೆಂಬ ದೀಪದ ಬೆಳಕನ್ನು ಆಶ್ರಯಿಸಿ ಮುನ್ನಡೆಯಬೇಕು. ಆಗಮಾತ್ರ ಸುಗಮ ದಾರಿ ಸಿಗಲಿದೆ’ ಎಂದು ಹೊಂಬುಜ ಮಠದ ಪೀಠಾಧಿಕಾರಿ ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಹೇಳಿದರು.
ಇಲ್ಲಿನ ಅತಿಶಯ ಶ್ರೀಕ್ಷೇತ್ರ ಹೊಂಬುಜದಲ್ಲಿ ಯುಗಾದಿ ಹಬ್ಬದ ಅಂಗವಾಗಿ ಶನಿವಾರ ಆಯೋಜಿಸಿದ್ದ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಸಮ ಸಮಾಜದಲ್ಲಿ ಶಾಂತಿ-ಸೌಹಾರ್ದತೆಯು ಪ್ರಕಾಶಮಾನವಾಗಿ ವಿಜೃಂಭಿಸಲಿ. ದೇಶ ಸಮೃದ್ಧಿ ಕಾಣುವಂತಾಗಲಿ ಎಂದರು.
ಭಗವಾನ್ ಪಾರ್ಶ್ವನಾಥ ಸ್ವಾಮಿ ಮತ್ತು ಜಗನ್ಮಾತೆ ಪದ್ಮಾವತಿ ದೇವಿಗೆ ವಿಶೇಷ ಅಭಿಷೇಕ ಪೂಜಾ ಕೈಂಕರ್ಯಗಳು ಜರುಗಿದವು. ಶ್ರೀ ಮಠದ ಪ್ರತಿಷ್ಠಾಚಾರ್ಯ ಪದ್ಮರಾಜ ಇಂದ್ರರು ಪಂಚಾಂಗ ಶ್ರವಣ ವಾಚನ ಮಾಡಿದರು.
ರಾಜ್ಯ-ಹಾಗೂ ಹೊರರಾಜ್ಯಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ದೇವಿಯ ದರ್ಶನ ಪಡೆದರು.
ಊರಿನ ಪ್ರಮುಖ ಬೀದಿಗಳಲ್ಲಿ ದೇವಿಯ ಪಲ್ಲಕ್ಕಿ ಉತ್ಸವನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.