ಭದ್ರಾವತಿ: ನಗರದ ವಿವಿಧೆಡೆ ರಾಘವೇಂದ್ರ ಗುರು ಸಾರ್ವಭೌಮರ 354ನೇ ಆರಾಧನಾ ಮಹೋತ್ಸವ ಮಂಗಳವಾರ ವಿಜೃಂಭಣೆಯಿಂದ ನಡೆಯಿತು. ಸಾವಿರಾರು ಭಕ್ತರು ರಾಯರ ದರ್ಶನ ಪಡೆದರು.
ಹಳೇನಗರದ ರಾಘವೇಂದ್ರ ಮಠದಲ್ಲಿ ರಾಯರ ಬೃಂದಾವನವನ್ನು ವಿವಿಧ ಫಲ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಬೆಳಿಗ್ಗೆ ಅಂದಾಜು 11.30ರ ವೇಳೆಗೆ ರಾಯರ ರಥೋತ್ಸವ ಆರಂಭಗೊಂಡು ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದವರೆಗೂ ಸಾಗಿ ಪುನಃ ಮಠಕ್ಕೆ ಬಂದು ತಲುಪಿತು.
ರಥೋತ್ಸವ ಆರಂಭಗೊಳ್ಳುತ್ತಿದ್ದಂತೆ ಭಕ್ತರು ರಾಯರಿಗೆ ಜಯಘೋಷಗಳನ್ನು ಹಾಕಿ ಸಂಭ್ರಮಿಸಿದರು. ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ ನೆರವೇರಿತು.
ಗುರುರಾಜ ಸೇವಾ ಸಮಿತಿ ಅಧ್ಯಕ್ಷ ಮುರಳೀಧರ ತಂತ್ರಿ ಹಾಗೂ ಉಪಾಧ್ಯಕ್ಷೆ ಸುಮಾ ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ರಮಾಕಾಂತ್, ನಿರಂಜನಾಚಾರ್ಯ, ಮಾಧುರಾವ್, ಗಿರಿ ಆಚಾರ್, ಪವನ್ ಕುಮಾರ್ ಉಡುಪ, ಪ್ರಮೋದ್ ಕುಮಾರ್, ಶುಭ ಗುರುರಾಜ್, ವಿದ್ಯಾನಂದನಾಯಕ, ಪ್ರಶಾಂತ್, ಶಶಿಧರ್, ಕೆ.ಎಸ್. ಸುಧೀಂದ್ರ ಸೇರಿದಂತೆ ಶ್ರೀ ಮಠದ ಸೇವಾಕರ್ತರು ಉಪಸ್ಥಿತರಿದ್ದರು.
ಹಳೇನಗರ, ಭೂತನಗುಡಿ, ಚಾಮೇಗೌಡ ಏರಿಯಾ, ಕೇಶವಪುರ ಬಡಾವಣೆ, ಮಾಧವನಗರ, ಹೊಸಮನೆ ಸೇರಿದಂತೆ ವಿವಿಧೆಡೆಗಳಿಂದ ಭಕ್ತರು ಪಾಲ್ಗೊಂಡಿದ್ದರು.
ಜನ್ನಾಪುರದಲ್ಲಿ ಆಚರಣೆ: ನಗರದ ಜನ್ನಾಪುರದ ಶ್ರೀಮದ್ ಜಯತೀರ್ಥ ಗುರುಸಾರ್ವಭೌಮರ ಮಠದಲ್ಲಿ ಪ್ರತಿ ವರ್ಷದಂತೆ ಈ ಬಾರಿ 3 ದಿನಗಳ ಕಾಲ ರಾಘವೇಂದ್ರ ಗುರು ಸಾರ್ವಭೌಮರ ಆರಾಧನಾ ಮಹೋತ್ಸವ ಏರ್ಪಡಿಸಲಾಗಿತ್ತು.
ಪ್ರತಿ ದಿನ ಸುಪ್ರಭಾತ, ನಿರ್ಮಾಲ್ಯ ವಿಸರ್ಜನೆ, ಪಂಚಾಮೃತ ಅಭಿಷೇಕ– ಅಷ್ಟೋತ್ತರ ಪಾರಾಯಣ, ವಿದ್ವಾಂಸರಿಂದ ಉಪನ್ಯಾಸ, ಮಹಾಪೂಜೆ, ನೈವೇದ್ಯ, ಅಲಂಕಾರ, ಬ್ರಾಹ್ಮಣರ ಪೂಜೆ, ಹಸ್ತೋದಕ, ಮಹಾಮಂಗಳಾರತಿ, ಭಜನೆ, ಸಾಂಸ್ಕೃತಿ ಕಾರ್ಯಕ್ರಮಗಳು, ಪಲ್ಲಕ್ಕಿ ಸೇವೆ, ಅಷ್ಠಾವಧಾನ ಮತ್ತು ತೊಟ್ಟಿಲು ಪೂಜೆ ಸೇರಿ ವಿವಿಧ ಧಾರ್ಮಿಕ ಆಚರಣೆಗಳು ನೆರವೇರಿದವು.
ಮಂಗಳವಾರ ಮಧ್ಯಾಹ್ನ ಗುರುರಾಜರ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು. ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ರಾಘವೇಂದ್ರ ಗುರುಸಾರ್ವಭೌಮ ಸೇವಾ ಟ್ರಸ್ಟ್ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸೇವಾಕರ್ತರು ಉಪಸ್ಥಿತರಿದ್ದರು.
ಜನ್ನಾಪುರ, ಗಣೇಶ್ ಕಾಲೊನಿ, ವಿದ್ಯಾಮಂದಿರ, ಹುತ್ತಾ ಕಾಲೊನಿ, ವೇಲೂರು ಶೆಡ್, ಹುಡ್ಕೋ ಕಾಲೊನಿ, ನ್ಯೂಟೌನ್, ಆಂಜನೇಯ ಅಗ್ರಹಾರ ಸೇರಿ ಸುತ್ತಮುತ್ತಲಿನ ಪ್ರದೇಶಗಳ ಭಕ್ತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.