ರಿಪ್ಪನ್ಪೇಟೆ: ಸಮೀಪದ ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಮನಗದ್ದೆ ನಿವಾಸಿ ಲೋಕೇಶ್ ಎಂಬುವವರ ಮನೆಯ ಹೊರಭಾಗದ ಗೋಡೆ ಕುಸಿದ ಪರಿಣಾಮ ಮೂವರಿಗೆ ಗಂಭೀರ ಗಾಯಗಳಾಗಿವೆ.
ಗುರುವಾರ ಸಂಜೆ ಸುರಿದ ಭಾರಿ ಮಳೆಗೆ ಮನೆಯ ಹೊರಭಾಗದಲ್ಲಿ ಕೃಷಿ ಸಾಮಾಗ್ರಿಗಳನ್ನು ಇರಿಸಿದ್ದ ಮಾಡಿನ ಒಳಗೆ ಪ್ರವಾಹದ ರೀತಿಯಲ್ಲಿ ಏಕಾಏಕಿ ನೀರು ನುಗ್ಗಿತ್ತು. ಕುಟುಂಬಸ್ಥರು ಅಲ್ಲಿದ್ದ ಕೃಷಿ ಪರಿಕರಗಳನ್ನು ಒಳಗೆ ಸಾಗಿಸುತ್ತಿರುವಾಗ ನೀರಿನ ರಭಸಕ್ಕೆ ಗೋಡೆ ಸಂಪೂರ್ಣ ಕುಸಿದು ಬಿದ್ದಿತು. ಆಗ ಗೋಡೆಯಡಿಯಲ್ಲಿ ನಾಲ್ವರು ಸಿಲುಕಿಕೊಂಡರು.
ತಕ್ಷಣವೇ ಉಳಿದವರು ನಾಲ್ವರನ್ನು ಹೊರಕ್ಕೆಳೆದು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿದದರು. ಘಟನೆಯಲ್ಲಿ ಲೋಕೇಶ್ ಪತ್ನಿ ವೇದಾವತಿ ಅವರಿಗೆ ಕಾಲು ಹಾಗೂ ತಲೆಗೆ ಗಂಭೀರ ಪೆಟ್ಟು ತಗುಲಿದೆ. ಕಾಲು ಮುರಿದಿದೆ.
ಮಕ್ಕಳಾದ ಜಿ.ಎನ್.ತೇಜಸ್ ಹಾಗೂ ಜಿ.ಎನ್. ಹರ್ಷವರ್ಧನ್ ಅವರಿಗೆ ಗಂಭೀರ ಪೆಟ್ಟು ತಗುಲಿದ್ದು, ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಯಿ ಲಕ್ಷ್ಮಮ್ಮ ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಹೊರರೋಗಿಗಳಾಗಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.
ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಬೆಳ್ಳೂರು ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು ಹಾಗೂ ಪಿಡಿಒ ಭೇಟಿ ನೀಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.