ಬೆಳ್ಳಾವಿ: ಹೋಬಳಿ ವ್ಯಾಪ್ತಿಯ ಸೋರೆಕುಂಟೆ ಗ್ರಾಮ ಪಂಚಾಯಿತಿಯ ಮಲ್ಲೇನಹಳ್ಳಿ ಬಳಿಯ ಹಳ್ಳಕ್ಕೆ ನಿರ್ಮಿಸಿರುವ ಚೆಕ್ ಡ್ಯಾಂ ಮಳೆ ನೀರಿನಿಂದ ತುಂಬಿದ್ದು, ಶಾಸಕ ಬಿ.ಸುರೇಶ್ಗೌಡ ಗಂಗಾ ಪೂಜೆ ನೆರವೇರಿಸಿದರು. ಈ ಹಳ್ಳಕ್ಕೆ ಒಟ್ಟು ₹2 ಕೋಟಿ ವೆಚ್ಚದಲ್ಲಿ ಮೂರು ಚೆಕ್ ಡ್ಯಾಂ ನಿರ್ಮಾಣ ಮಾಡಲಾಗಿದೆ. ಚೆಕ್ ಡ್ಯಾಂಗಳಲ್ಲಿ ನೀರು ನಿಲ್ಲಿಸುವುದರಿಂದ ಈ ಭಾಗದ ಅಂತರ್ಜಲ ವೃದ್ಧಿಯಾಗಲಿದೆ ಎಂದು ಸುರೇಶ್ ಗೌಡ ಹೇಳಿದರು.
ಬೆಳ್ಳಾವಿ ಹೋಬಳಿಯ ಕೂಗಳತೆಯಲ್ಲೇ ಹೇಮಾವತಿ ನೀರು ಹರಿದರೂ ಕೂಡ ಬೆಳ್ಳಾವಿ ಹೋಬಳಿ ಹೇಮಾವತಿ ನೀರಿನಿಂದ ವಂಚಿತಗೊಂಡಿದೆ. ಇಲ್ಲಿ ಬೀಳುವ ಮಳೆ ನೀರು ಕೃಷ್ಣ ಕೊಳ್ಳಕ್ಕೆ ಹರಿಯುತ್ತದೆ. ಬಹುತೇಕ ನೀರು ಆಂಧ್ರಪ್ರದೇಶದ ಪಾಲಾಗುತ್ತಿದೆ. ಇದನ್ನು ಅರಿತು ದೊಡ್ಡದೊಡ್ಡ ಹಳ್ಳಗಳಲ್ಲಿ ಚೆಕ್ ಡ್ಯಾಂ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.
ಮಲ್ಲೇನಹಳ್ಳಿಯ ಹಳ್ಳಕ್ಕೆ ನಿರ್ಮಿಸಿರುವ ಮೂರು ಚೆಕ್ ಡ್ಯಾಂಗಳಲ್ಲಿ ಒಂದು ಕಿಲೋ ಮೀಟರ್ ದೂರದಷ್ಟು ನೀರು ನಿಲ್ಲುತ್ತದೆ. ಪ್ರತಿಯೊಂದರಲ್ಲೂ 8 ಎಂಸಿಎಫ್ಟಿ ನೀರು ನಿಲ್ಲುವ ಸಾಮರ್ಥ್ಯ ಹೊಂದಿವೆ. ಇದರಿಂದ ಈ ಭಾಗದಲ್ಲಿ ಅಂತರ್ಜಲ ವೃದ್ಧಿಯಾಗುವ ವಿಶ್ವಾಸವಿದೆ ಎಂದು ತಿಳಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿ, ಸದಸ್ಯ ಪರಮೇಶ, ಮುಖಂಡರಾದ ಚಂದ್ರಣ್ಣ ಪ್ರಸಾದ್, ವಕೀಲ ವೀರಣ್ಣ, ರಂಗಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.