ADVERTISEMENT

ಅನಧಿಕೃತ ನೀರಿನ ಸಂಪರ್ಕ: ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 20 ಜನವರಿ 2012, 5:45 IST
Last Updated 20 ಜನವರಿ 2012, 5:45 IST

ಚಿಕ್ಕನಾಯಕನಹಳ್ಳಿ: ಕುಡಿಯುವ ನೀರಿನ ತೆರಿಗೆಯನ್ನು ತಿಂಗಳಿಗೆ ರೂ. 45ರಿಂದ 80ಕ್ಕೆ ಹೆಚ್ಚಿಸಲಾಗಿದೆ. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಅನಧಿಕೃತ ನೀರಿನ ಸಂಪರ್ಕಗಳಿರುವ ಬಗ್ಗೆ ಕ್ರಮಕೈಗೊಳ್ಳದಿರುವ ಬಗ್ಗೆ ಸದಸ್ಯರು ಅಸಮದಾನ ವ್ಯಕ್ತಪಡಿಸಿದರು.

ಗುರುವಾರ ಇಲ್ಲಿನ ಪುರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ರೂ. 18 ಲಕ್ಷದಲ್ಲಿ ಖಾಸಗಿ ಬಸ್ ನಿಲ್ದಾಣ ನವೀಕರಿಸಿದ್ದರೂ ನಿಲ್ದಾಣದಲ್ಲಿ  ಬಸ್ ತೊಳೆಯುವುದು ಮುಂದುವರೆದಿದೆ.  ದೇವಸ್ಥಾನಗಳಿಗೆ ಪುರಸಭೆಯಿಂದ ನೀಡುವ ವಂತಕೆಯಲ್ಲೂ ತಾರತಮ್ಯ ನೀತಿ ಅನುಸರಿಸ ಲಾಗುತ್ತಿದೆ ಎಂದು ಸದಸ್ಯ ಸಿ.ಪಿ. ಮಹೇಶ್ ಆರೋಪಿಸಿದರು.

ಪುರಸಭೆ ಪರವಾಗಿ ವಕೀಲರನ್ನು ನೇಮಿಸಿದ್ದರೂ ವಿವಾದಗಳಲ್ಲಿ ನ್ಯಾಯಾಲಯದಲ್ಲಿ ಸೋಲುಂಟಾ ಗುತ್ತಿದೆ ಎಂದು ಸದಸ್ಯ ಸಿ.ಡಿ. ಚಂದ್ರಶೇಖರ್ ಕಳವಳ ವ್ಯಕ್ತಪಡಿಸಿದರು.

ವೆಂಕಣ್ಣನಕಟ್ಟೆ ಪ್ರದೇಶದಲ್ಲಿ ರೂ. 13 ಲಕ್ಷ ವೆಚ್ಚದಲ್ಲಿ ನಿರ್ಮಿತಿ ಕೇಂದ್ರದಿಂದ ನಿರ್ಮಿಸುತ್ತಿರುವ ಕಾಂಪೌಂಡ್ ಕಳಪೆ ಗುಣಮಟ್ಟದಲ್ಲಿದೆ ಎಂದು ಸದಸ್ಯರು ದೂರಿದರು.

ಬಿಸಿಯೂಟ ನಿಲುಗಡೆ: ಕ್ರಮ
ಪಾವಗಡ: ಅಕ್ಷರ ದಾಸೋಹ ಯೋಜನೆಯಡಿ ಅಸಮರ್ಪಕ ಗ್ಯಾಸ್ ಸರಬರಾಜಿನಿಂದ ಶಾಲೆಗಳಲ್ಲಿ ವಾರದಿಂದ ಬಿಸಿಯೂಟ ನಿಲ್ಲಿಸಿರುವುದು ತಿರುಮಣಿ ಶಾಲೆಗೆ ಭೇಟಿ ನೀಡಿದಾಗ ತಿಳಿದಿದ್ದು, ಸೂಕ್ತ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚಿಲಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ವಿನೋದಮ್ಮ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಈಗಾಗಲೇ ಘೋಷಿಸಿದ್ದರೂ ಗೋಶಾಲೆ  ತೆರೆಯಲು ಜಿಲ್ಲಾಡಳಿತ ಕ್ರಮ ಕೈಗೊಂಡಿಲ್ಲ. ಶೌಚಾಲಯ ನಿರ್ಮಾಣದಲ್ಲಿ ಕೆಲವು ಗ್ರಾ.ಪಂ.ಗಳು ಅವ್ಯವಹಾರ ಎಸೆಗಿದ್ದು, ಮಾಹಿತಿ ಪಡೆದು ಕ್ರಮಕೈಗೊಳ್ಳಲು ಆಧಿಕಾರಿಗಳಿಗೆ ಸೂಚಿಸಸಲಾಗಿದೆ ಎಂದರು. ಪ್ರತಿಕಾಗೋಷ್ಠಿಯಲ್ಲಿ ಮುಖಂಡರಾದ ರಾಮಾಂಜಿನಪ್ಪ, ಚಂದ್ರಶೇಖರ್, ರಾಜಗೋಪಾಲ್, ಜಿ.ಎಸ್.ರಾಮಾಂಜಿನ ರೆಡ್ಡಿ, ಮನುಈರಣ್ಣ ಮುಂತಾದವರು ಉಪಸ್ಥಿತರಿದ್ದರು.

ಗ್ರಾ.ಪಂ. ರಸೀದಿ ನಕಲು: ಆರೋಪ
ಕುಣಿಗಲ್:  ತಾಲ್ಲೂಕಿನ ಇಪ್ಪಾಡಿ ಗ್ರಾಮ ಪಂಚಾಯಿತಿ ಬಿಲ್‌ಕಲೆಕ್ಟರ್ ಮನೆ ಕಂದಾಯ ರಸೀದಿ ನಕಲು ಮಾಡಿ ಸಾವಿರಾರು ರೂಪಾಯಿ ವಸೂಲಿ ಮಾಡಿ ವಂಚಿಸಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಬಿಲ್ ಕಲೆಕ್ಟರ್ ಐ.ಪಿ.ರುದ್ರೇಶ್ ನಕಲಿ ರಸೀದಿ ನೀಡಿ ಗ್ರಾಮದ ಮೊಹಮ್ಮದ್ ಗೈಬಾನ್ ಅವರಿಂದ ರೂ. 1200 ಕಟ್ಟಿಸಿಕೊಂಡಿದ್ದರು. ರಸೀದಿಯಲ್ಲಿ ಪಂಚಾಯಿತಿ ಮೊಹರು ಇಲ್ಲದ್ದರಿಂದ ಅನುಮಾನಗೊಂಡ ಮೊಹಮ್ಮದ್ ಗೈಬಾನ್ ತಾವು ಕಟ್ಟಿರುವ ಹಣದ ಬಗ್ಗೆ ದಾಖಲಾತಿ ನೀಡುವಂತೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಇದೇ ರೀತಿ ಬಹಳಷ್ಟು ಮಂದಿಗೆ ವಂಚಿಸಲಾಗಿದೆ ಎಂದು ಗ್ರಾಮಸ್ಥರಾದ ಐ.ಜಿ.ರಮೇಶ್, ಶಿವರಾಮಯ್ಯ, ಕಾಳಯ್ಯ ಇತರರು ಆರೋಪಿಸಿದ್ದಾರೆ.

ಕೊಳವೆ ಬಾವಿಗಾಗಿ ಅರ್ಜಿ
ತುಮಕೂರು: ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವು ಗಂಗಾ ಕಲ್ಯಾಣ ಯೋಜನೆಯಡಿ ವೈಯಕ್ತಿಕ ಕೊಳವೆ ಬಾವಿ ಅನುಷ್ಠಾನಗೊಳಿಸುತ್ತಿದೆ. ಈ ಸೌಲಭ್ಯ ಪಡೆಯಲು ಅಲೆಮಾರಿ, ಅರೆ ಅಲೆಮಾರಿ ಜನಾಂಗದವರಿಂದ ಅರ್ಜಿ ಆಹ್ವಾನಿಸಿದೆ. ಕನಿಷ್ಠ ಒಂದು ಎಕರೆಯಿಂದ ಗರಿಷ್ಠ 5 ಎಕರೆವರೆಗೆ ಒಣಭೂಮಿ ಇರುವಂತಹ ಸಣ್ಣ ಮತ್ತು ಅತಿಸಣ್ಣ ರೈತರು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ನಿಗಮದ ಜಿಲ್ಲಾ ವ್ಯವಸ್ಥಾಪಕರ 9986646015 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.