ADVERTISEMENT

ಅಪ್ರಾಪ್ತ ಯುವತಿ ಮದುವೆ: ಬಂಧನ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2011, 6:45 IST
Last Updated 7 ಅಕ್ಟೋಬರ್ 2011, 6:45 IST

ತುಮಕೂರು: ಅಪ್ರಾಪ್ತ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ ಯುವಕನನ್ನು ಅಪಹರಣ ಮತ್ತು ಅತ್ಯಾಚಾರ ಆರೋಪದಡಿ ಕ್ಯಾತ್ಸಂದ್ರ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ನೆಲಮಂಗಲ ಸಮೀಪದ ಜಕ್ಕಸಂದ್ರದ ನಾಗರಾಜ (21) ಎಂದು ಗುರುತಿಸಲಾಗಿದೆ. ಎಲೆಕ್ಟ್ರೀಶಿಯನ್ ವೃತ್ತಿ ಮಾಡುವ ಈತ ಕ್ಯಾತ್ಸಂದ್ರ ಸಮೀಪದ ಸಿದ್ದಾಪುರದ ಅಪ್ರಾಪ್ತ ಯುವತಿಯನ್ನು ಪ್ರೀತಿಸುತ್ತಿದ್ದನು ಎನ್ನಲಾಗಿದೆ.

ಮೂರು ತಿಂಗಳ ಹಿಂದೆ ಯುವತಿಯನ್ನು ಕರೆದುಕೊಂಡು ತಲೆತಪ್ಪಿಸಿಕೊಂಡಿದ್ದನು. ಈ ಸಂಬಂಧ ಯುವತಿ ಪೋಷಕರು ಈತನ ವಿರುದ್ಧ ದೂರು ನೀಡಿದ್ದರು.

ಈಕೆ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ. ಮೂರು ತಿಂಗಳಿಂದ ಯಾರ ಕಣ್ಣಿಗೂ ಬಿದ್ದಿರಲಿಲ್ಲ. ಮದುವೆಯಾಗಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಾಸವಿದ್ದರು. ಖಚಿತ ಮಾಹಿತಿ ಮೇರೆಗೆ ಕ್ಯಾತ್ಸಂದ್ರ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ರವಿಕುಮಾರ್ ನೇತೃತ್ವದ ತಂಡ ಇಬ್ಬರನ್ನು ಬಂಧಿಸಿ ಕರೆತಂದಿದೆ.

ಈಗ ಯುವತಿ ಗರ್ಭವತಿಯಾಗಿದ್ದು ಇಬ್ಬರನ್ನು ನ್ಯಾಯಾಧೀಶರ ಎದುರು ಬುಧವಾರ ಹಾಜರುಪಡಿಸಲಾಗಿತ್ತು. ಯುವತಿಯನ್ನು ರಿಮ್ಯಾಂಡ್ ಹೋಂಗೆ ಕಳುಹಿಸಲಾಗಿದ್ದು, ನಾಗರಾಜನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈತನ ವಿರುದ್ಧ ಅಪಹರಣ, ಅತ್ಯಾಚಾರ ಪ್ರಕರಣ ಮೊಕದ್ದಮೆ ದಾಖಲಿಸಲಾಗಿದೆ.

ಕಳವು: 3 ವರ್ಷ ಜೈಲು

ಮನೆ ಬಾಗಿಲು ಮುರಿದು ಕಳವು ಮಾಡಿದ ಆರೋಪಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ ಪ್ರಧಾನ ಸಿವಿಲ್ ನ್ಯಾಯಾಲಯ ನೀಡಿದ ತೀರ್ಪನ್ನು 3ನೇ ತ್ವರಿತ ವಿಲೇವಾರಿ ನ್ಯಾಯಾಲಯವು ಎತ್ತಿ ಹಿಡಿದಿದೆ.

ಟುಡ ಬಡಾವಣೆಯ ಶಾಹು ಎಂಬುವರ ಮನೆ ಬಾಗಿಲು ಮುರಿದು ನಗದು ಮತ್ತು ಚಿನ್ನಾಭರಣ ಕಳವು ಮಾಡಿದ ಆರೋಪದಲ್ಲಿ ನಾರಾಯಣಗೌಡ ಎಂಬಾತನನ್ನು 2003ರಲ್ಲಿ ನಗರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಾದ-ವಿವಾದ ಆಲಿಸಿದ ಪ್ರಧಾನ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರು ಆರೋಪಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದ್ದರು.

ಈ ತೀರ್ಪನ್ನು ಆರೋಪಿಯು 3ನೇ ತ್ವರಿತ ವಿಲೇವಾರಿ ನ್ಯಾಯಾಲಯದಲ್ಲಿ ಪ್ರಶ್ನಿಸಿ ಶಿಕ್ಷೆ ವಜಾಗೊಳಿಸುವಂತೆ ಮನವಿ ಮಾಡಿದ್ದರು. ವಾದ-ವಿವಾದ ಆಲಿಸಿದ ನ್ಯಾಯಾಲಯ ಅಧೀನ ನ್ಯಾಯಾಲಯ ನೀಡಿದ ತೀರ್ಪನ್ನು ಎತ್ತಿ ಹಿಡಿದಿದೆ. ಸರ್ಕಾರದ ಪರ ಪಬ್ಲಿಕ್ ಪ್ರಾಸಿಕ್ಯೂಟರ್ ಆರ್.ರವೀಂದ್ರ ನಾಯಕ್ ವಾದಿಸಿದರು.

ರೈಲಿಗೆ ಸಿಲುಕಿ ಸಾವು
ಹಿರೇಹಳ್ಳಿ- ನಿಡುವಂದ ರೈಲು ನಿಲ್ದಾಣದ ನಡುವೆ ಅಪರಿಚಿತ ಯುವಕನ್ನೊಬ್ಬ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾನೆ.
ಮೃತನು 30 ವರ್ಷದ ಆಜುಬಾಜಿನರಾಗಿದ್ದು, ಕ್ಯಾಂಪಸ್-6803 ಹೆಸರಿರುವ ಕಾಫಿ ಬಣ್ಣದ ಅರ್ಧ ತೋಳಿನ ಅಂಗಿ ತೊಟ್ಟಿದ್ದಾರೆ. ಶವವನ್ನು ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಮಾಹಿತಿಗೆ ಮೊಬೈಲ್- 9986245845 ಸಂಪರ್ಕಿಸುವಂತೆ ರೈಲ್ವೆ ಪೊಲೀಸರ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.