ADVERTISEMENT

ಆರೋಗ್ಯ ಶಿಬಿರಕ್ಕೆ ಆದ್ಯತೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2011, 7:05 IST
Last Updated 19 ಜನವರಿ 2011, 7:05 IST

ಗುಬ್ಬಿ: ನಿಟ್ಟೂರು ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಕೆ. ಮುಕುಂದರಾವ್ ಅವರೊಂದಿಗೆ ‘ಪ್ರಜಾವಾಣಿ’ ನಡೆಸಿದ ಸಂದರ್ಶನ.
* ಪೈಪೋಟಿ ನಡುವೆ ಗೆಲುವು?
ಕ್ಷೇತ್ರದ ಜನತೆಗೆ ರಾಜಕಾರಣಿಯಾಗಿ ಹೊಸಬ. ಹಲವು ಸಮಾಜ ಕಾರ್ಯಗಳಲ್ಲಿ ಮತದಾರರಿಗೆ ಚಿರಪರಿಚಿತ. ಇದರಿಂದ ಮತದಾರರ ಪ್ರೀತಿಗೆ ಪಾತ್ರನಾಗಿದ್ದೇನೆ. ಗೆಲುವು ಜೆಡಿಎಸ್ ಹಾಗೂ ಶಾಸಕ ಎಸ್.ಆರ್.ಶ್ರೀನಿವಾಸ್, ಪತ್ನಿ ಭಾರತಿ ಅವರ ಕಾರ್ಯ ವೈಖರಿಗೆ ಸಲ್ಲುತ್ತದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಡಳಿತದ ಅವಧಿ ಯಲ್ಲಿ ಈ ಭಾಗದ ಜನತೆಯ ನಿರೀಕ್ಷೆಯಂತೆ ನಡೆದ ಅಭಿವೃದ್ಧಿ ಕಾರ್ಯ ಸಹ ಮತದಾರರ ಮನಸ್ಸಿನಲ್ಲಿದೆ. ಜಾತಿ ವ್ಯವಸ್ಥೆಯನ್ನು ಧಿಕ್ಕರಿಸಿ ಮತ ನೀಡಿದ್ದಾರೆ.

* ಸಮಾಜ ಸೇವಕರಾಗಿ ರಾಜಕೀಯ ಪ್ರವೇಶ?
ವ್ಯಾಸಂಗದ ಅವಧಿಯಲ್ಲಿ ಕಂಡ ಬಡತನದ ಅನುಭವದಿಂದ ನೊಂದವ ರಿಗೆ ಸಹಾಯ ಮಾಡುವ ಚಿಂತನೆ ಮೂಡಿತು. ಕಳೆದ 15 ವರ್ಷದಿಂದ ಬಡ ವಿದ್ಯಾರ್ಥಿಗಳಿಗೆ ವ್ಯಾಸಂಗಕ್ಕೆ ಅನುಕೂಲ, ಆರೋಗ್ಯ ಶಿಬಿರ, ಧಾರ್ಮಿಕ ಕಾರ್ಯಗಳಿಗೆ ಸಹಾಯ, ಇತರೆ ಸಮಾಜ ಸೇವೆಯಲ್ಲಿ ನಿರತ ನಾಗಿದ್ದೆ. ಗ್ರಾಮೀಣಾಭಿವೃದ್ಧಿ ಚಿಂತನೆ ಯಿಂದ ರಾಜಕೀಯ ಪ್ರವೇಶಿಸಿದೆ.

* ಕೃಷಿಕರು, ಕೂಲಿ ಕಾರ್ಮಿಕರಿಗೆ ಕೂಡುಗೆ?
ಕೃಷಿಗೆ ಅವಶ್ಯಕವಾದ ಸಲಕರಣೆ, ಗೊಬ್ಬರ, ಕೀಟನಾಶಕಗಳನ್ನು ಕೃಷಿ ಇಲಾಖೆ ಮೂಲಕ ಸಮರ್ಪಕ ವಿತರಣೆ ಮಾಡಿಸುವುದು, ನೀರಾವರಿ ವ್ಯವಸ್ಥೆಗೆ ಚೆಕ್ ಡ್ಯಾಂ, ಪಿಕ್‌ಅಪ್ ಡ್ಯಾಂ ನಿರ್ಮಾಣ, ಮಳೆ ನೀರು ಮರು ಬಳಕೆಯತ್ತ ಗಮನಹರಿಸಲಾಗುವುದು. ಸಾಮಾನ್ಯರ ಗಮನಕ್ಕೆ ಬಾರದೆ ಸರ್ಕಾರದ ಸವಲತ್ತು ಮಧ್ಯವರ್ತಿಗಳ ಪಾಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಿ ಅರ್ಹರಿಗೆ ಸೌಲಭ್ಯ ಒದಗಿಸಲಾಗುವುದು.

* ಶಾಶ್ವತ ಕಾಮಗಾರಿ?
ಶಿಕ್ಷಣ ವಂಚಿತ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಿ ಗ್ರಾಮೀಣ ಭಾಗದಲ್ಲಿನ ಶಾಲೆಗಳಿಗೆ ವಿಶೇಷ ಸೌಲಭ್ಯ ಒದಗಿಸುವುದರೊಂದಿಗೆ ಶಿಕ್ಷಣ ಇಲಾಖೆ ಯೋಜನೆಗಳ ಯಶಸ್ವಿ ಅನುಷ್ಠಾನಕ್ಕೆ ಒತ್ತು. ಚರಂಡಿ, ರಸ್ತೆ, ಕುಡಿಯುವ ನೀರು, ಪ್ರತಿ ಮನೆಗೆ ಶೌಚಾಲಯ, ಗ್ರಂಥಾಲಯ ಇನ್ನಿತರ ವ್ಯವಸ್ಥೆಗೆ ಹೆಚ್ಚಿನ ಗಮನ ನೀಡಲಾಗುವುದು. ಮೂರು ತಿಂಗಳಿಗೊಮ್ಮೆ ವೈಯಕ್ತಿಕವಾಗಿ ಆರೋಗ್ಯ ಶಿಬಿರ ನಡೆಸುತ್ತೇನೆ. ಸ್ತ್ರೀಶಕ್ತಿ ಸಂಘಗಳ ಸಬಲೀಕರಣ, ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ  ಹೊಲಿಗೆ ಯಂತ್ರ, ಕಂಪ್ಯೂಟರ್ ದೊರಕಿಸುವ ಉದ್ದೇಶ ಇದೆ.

* ಹೆದ್ದಾರಿ ಮಾರ್ಗದ ಗ್ರಾಮಗಳಿಗೆ ಕಾಯಕಲ್ಪ?
ನಿಟ್ಟೂರು ಕ್ಷೇತ್ರದಲ್ಲಿ ಸುಮಾರು 15 ಕಿ.ಮೀ.ನಷ್ಟು ರಾಷ್ಟ್ರೀಯ ಹೆದ್ದಾರಿ ಹಾದು ಹೋಗುತ್ತದೆ. ಬಹುತೇಕ ಗ್ರಾಮಗಳ ಸಂಪರ್ಕ ರಸ್ತೆ ಹೆದ್ದಾರಿ ಮಾರ್ಗವನ್ನೇ ಅವಲಂಬಿಸಿದೆ. ಈ ರಸ್ತೆಗಳಿಗೆ ಡಾಂಬರೀಕರಣ ಅಗತ್ಯವಾಗಿ ಆಗಬೇಕಿದೆ. ಜತೆಗೆ ಸರ್ಕಾರಿ ಬಸ್‌ಗಳ ವ್ಯವಸ್ಥೆ ಕಲ್ಪಿಸಲು ಶ್ರಮಿಸಲಾಗುವುದು.

* ಕುಗ್ರಾಮಗಳ ಪ್ರಗತಿ?
ಸರ್ಕಾರದ ಯಾವುದೇ ಸೌಲಭ್ಯ ಸಿಗದ ಗ್ರಾಮಗಳ ಪಟ್ಟಿ ತಯಾರಿಸಲಾಗುತ್ತಿದೆ. ಮೊದಲು ಮೂಲಭೂತ ಸವಲತ್ತು ಒದಗಿಸಿ ನಂತರ ವಿಶೇಷ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಮಾದರಿ ಗ್ರಾಮಗಳಾಗಿ ಮಾರ್ಪಡಿಸಲು ಶಕ್ತಿ ಮೀರಿ ಪ್ರಯತ್ನಿಸುವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.