ADVERTISEMENT

ಎಸ್‌ಎಸ್‌ಎಲ್‌ಸಿಯಿಂದ ಡಾಕ್ಟರೇಟ್‌ವರೆಗೆ

ಶಿರಾ ಕ್ಷೇತ್ರದಲ್ಲಿ ಒಂದೇ ಹೆಸರಿನ ಇಬ್ಬರು

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2013, 7:20 IST
Last Updated 23 ಏಪ್ರಿಲ್ 2013, 7:20 IST

ಶಿರಾ: ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರುವ 13 ಅಭ್ಯರ್ಥಿಗಳ ಪೈಕಿ ಬಹುತೇಕರು ಉತ್ತಮ ವಿದ್ಯಾವಂತರಾಗಿರುವುದು ವಿಶೇಷ.
ವಿಜ್ಞಾನ ಪದವಿ, ಎಂಜಿನಿಯರಿಂಗ್, ಕಾನೂನು ಪದವೀಧರರ ಜತೆಗೆ ಡಾಕ್ಟರೇಟ್ ಪಡೆದವರು ಹಾಗೂ ಆರ್‌ಎಂಪಿ ವೈದ್ಯರು ಕಣದಲ್ಲಿದ್ದಾರೆ.

ಕೆಜೆಪಿ ಅಭ್ಯರ್ಥಿ ಡಾ.ಇಂತಿಯಾಜ್ ಅಹಮ್ಮದ್ ಅಮೆರಿಕಾದ ಗೋಲ್ಡನ್ ಸ್ಟೇಟ್ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಮುಗಿಸಿ ಡಾಕ್ಟರೇಟ್ ಪಡೆದಿದ್ದಾರೆ. ಕರೈಕುಡಿಯ ಅಳಗಪ್ಪ ವಿಶ್ವವಿದ್ಯಾಲಯದಲ್ಲಿ ಎಂಫಿಲ್, ಮದರಾಸು ವಿಶ್ವ ವಿದ್ಯಾಲಯದಲ್ಲಿ ಎಂಬಿಎ ಪದವಿ ಪಡೆದಿದ್ದಾರೆ.

ಪಕ್ಷೇತರ ಅಭ್ಯರ್ಥಿ ಬಿ.ಎ.ಮಂಜುನಾಥ್ ಎಂಜಿನಿಯರ್ ಪದವೀಧರರಾದರೆ, ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿ ಕೆ.ಮೂಡಲಗಿರಿಯಪ್ಪ ಕೂಡ ಸಿವಿಲ್ ಎಂಜಿನಿಯರ್. ಜೆಡಿಯು ಅಭ್ಯರ್ಥಿ ಆರ್.ಜಯರಾಮಯ್ಯ ಸಿವಿಲ್ ಎಂಜಿನಿಯರಿಂಗ್ ಡಿಪ್ಲೊಮಾ ಮುಗಿಸಿ, ಕೊಲ್ಕತ್ತಾದ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್ ಮೂಲಕ 1972ರಲ್ಲಿ ಎಎಂಐಇ ಪದವಿ ಗಳಿಸಿದ್ದಾರೆ.

ಮಾಜಿ ಸಚಿವ ಬಿ.ಸತ್ಯನಾರಾಯಣ, ಹಾಲಿ ಶಾಸಕ ಟಿ.ಬಿ.ಜಯಚಂದ್ರ ಹಾಗೂ ಪಕ್ಷೇತರ ಅಭ್ಯರ್ಥಿ ಡಿ.ಎಂ. ಈರಣ್ಣ ಕೂಡ ಕಾನೂನು ಪದವಿಧರರು. ಬಹುಜನ ಸಮಾಜವಾದಿ ಪಾರ್ಟಿ ಅಭ್ಯರ್ಥಿ ಎನ್.ರಾಜಣ್ಣ ಆರ್‌ಎಂಪಿ ವೈದ್ಯ.

ಹಾಲಿ ಶಾಸಕ ಟಿ.ಬಿ.ಜಯಚಂದ್ರ ಹೆಸರಿಗೆ ತಳುಕು ಹಾಕಿ ಮತಗೊಂದಲ ಸೃಷ್ಟಿಯಾಗಲೆಂದು ಕಣಕ್ಕಿಳಿಸಿರುವ ಬಿ.ಕೆ.ಜಯಚಂದ್ರ ಕೂಡ ಬಿಎಸ್‌ಸಿ ಪದವೀದರ. ಬಿಜೆಪಿ ಅಭ್ಯರ್ಥಿ ಬಿ.ಕೆ.ಮಂಜುನಾಥ್, ಪಕ್ಷೇತರ ಅಭ್ಯರ್ಥಿಗಳಾದ ಮಾರುತಿ, ಆರ್.ಶಶಿಕುಮಾರ್ ಪಿಯುಸಿಗೆ ಗುಡ್‌ಬೈ ಹೇಳಿದ್ದರೆ, ಲೋಕ ಜನಶಕ್ತಿ ಪಾರ್ಟಿ ಜೆ.ಶ್ರೀನಿವಾಸ ಎಸ್‌ಎಸ್‌ಎಲ್‌ಸಿವರೆಗೆ ಓದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.