ತುಮಕೂರು: ಇಲ್ಲಿನ ರೈಲು ನಿಲ್ದಾಣದಲ್ಲಿ ಆಭರಣ, ₹ 7000 ನಗದು ಸೇರಿ 80 ಸಾವಿರ ಮೊತ್ತದ ವಸ್ತುಗಳಿದ್ದ ವ್ಯಾನಿಟಿ ಬ್ಯಾಗ್ ಬಿಟ್ಟು ಹೋಗಿದ್ದ ಮಹಿಳೆಗೆ ರೈಲ್ವೆ ಪೊಲೀಸರು ಮಂಗಳವಾರ ಮರಳಿ ನೀಡಿದ್ದಾರೆ.
ನಗರದ ಹೊರವಲಯದ ಬಡೇಸಾಬ್ ಪಾಳ್ಯದ ಟಿ.ಸಬೀನಾ ಟಿ ಅವರು ಬೆಳಿಗ್ಗೆ 8ಕ್ಕೆ ಬೆಂಗಳೂರು–ಶಿವಮೊಗ್ಗ ರೈಲಿನಲ್ಲಿ ಶಿವಮೊಗ್ಗಕ್ಕೆ ಹೋಗಲು ಬಂದಿದ್ದರು. ನಿಲ್ದಾಣದಲ್ಲಿ ಕುಳಿತಿದ್ದಾಗ ರೈಲು ಹತ್ತುವ ಅವಸರದಲ್ಲಿ ವ್ಯಾನಿಟಿ ಬ್ಯಾಗ್ಅನ್ನು ನಿಲ್ದಾಣದಲ್ಲಿನ ಆಸನದ ಮೇಲೆಯೆ ಬಿಟ್ಟು ಹೋಗಿದ್ದರು.
ರೈಲ್ವೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಕುಬೇರಪ್ಪ ಮತ್ತು ಸಿಬ್ಬಂದಿ ಬೆಂಚ್ ಮೇಲಿದ್ದ ಈ ಬ್ಯಾಗ್ ಪರಿಶೀಲನೆ ನಡೆಸಿ ವಶಕ್ಕೆ ಪಡೆದಿದ್ದರು.
ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಬೀನಾ ಅವರಿಗೆ ಸ್ವಲ್ಪ ಹೊತ್ತಿನ ಬಳಿಕ ವ್ಯಾನಿಟಿ ಬ್ಯಾಗ್ ಬಿಟ್ಟು ರೈಲು ಹತ್ತಿರುವುದು ತಿಳಿದಿದೆ. ಗುಬ್ಬಿ ರೈಲುನಿಲ್ದಾಣದಲ್ಲಿ ಇಳಿದು ಹಿಂದಿರುಗಿ ರೈಲ್ವೆನಿಲ್ದಾಣ ಪೊಲೀಸರಿಗೆ ದೂರು ನೀಡಲು ಹೋದಾಗ ಬ್ಯಾಗ್ ಪೊಲೀಸರ ವಶದಲ್ಲಿದ್ದುದು ಗೊತ್ತಾಗಿದೆ.
‘ನೆಕ್ಲೆಸ್, ಒಂದು ಜೊತೆ ಓಲೆ, ₹ 7,000 ನಗದು, ವಾಚ್ ಸೇರಿ ₹ 80 ಸಾವಿರ ಮೊತ್ತದ ವಸ್ತುಗಳು ಬ್ಯಾಗಿನಲ್ಲಿದ್ದವು. ಬ್ಯಾಗ್ ಕಳೆದುಕೊಂಡ ಸಬೀನಾ ನಗರದಲ್ಲಿರುವ ಅವರ ಸಂಬಂಧಿಕರಿಗೆ ಮೊಬೈಲ್ನಲ್ಲಿ ಕರೆ ಮಾಡಿ ಬ್ಯಾಗ್ ಕಳೆದುಕೊಂಡಿರುವ ಬಗ್ಗೆ ಮಾಹಿತಿ ನೀಡಿದ್ದರು. ಅವರೂ ಠಾಣೆಗೆ ದೂರು ಕೊಡಲು ಬಂದಿದ್ದರು ಎಂದು ರೈಲ್ವೆ ಇನ್ಸ್ಪೆಕ್ಟರ್ ಕುಬೇರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.
ಬಳಿಕ ಸಬೀನಾ ಅವರೂ ಠಾಣೆಗೆ ಬಂದು ತಾವು ಕಳೆದುಕೊಂಡ ಬ್ಯಾಗ್ ಬಣ್ಣ, ಅದರಲ್ಲಿದ್ದ ವಸ್ತುಗಳ ಬಗ್ಗೆ ವಿವರಣೆ ನೀಡಿದರು. ಬಳಿಕ ಅವರಿಗೆ ಬ್ಯಾಗ್ ಹಸ್ತಾಂತರಿಸಲಾಗಿದೆ.
ಬ್ಯಾಗ್ ಹಸ್ತಾಂತರ ಸಂದರ್ಭದಲ್ಲಿ ರೈಲ್ವೆ ಪೊಲೀಸ್ ಸಿಬ್ಬಂದಿ ಸತ್ಯನಾರಾಯಣ್, ರಾಮಲಿಂಗೇಗೌಡ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.