ADVERTISEMENT

ಕೃಷ್ಣಮೃಗ ಸಂರಕ್ಷಣಾ ತಾಣದ ಮಾನ್ಯತೆ ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2012, 7:25 IST
Last Updated 14 ಅಕ್ಟೋಬರ್ 2012, 7:25 IST
ಕೃಷ್ಣಮೃಗ ಸಂರಕ್ಷಣಾ ತಾಣದ ಮಾನ್ಯತೆ ನೀಡಲು ಆಗ್ರಹ
ಕೃಷ್ಣಮೃಗ ಸಂರಕ್ಷಣಾ ತಾಣದ ಮಾನ್ಯತೆ ನೀಡಲು ಆಗ್ರಹ   

ತಿಪಟೂರು: ತಾಲ್ಲೂಕಿನ ಬಿದಿರಮ್ಮನಗುಡಿ ಕಾವಲನ್ನು ಅಮೃತಮಹಲ್ ರಾಷ್ಟ್ರೀಯ ಹುಲ್ಲುಗಾವಲು ಮತ್ತು ಕೃಷ್ಣಮೃಗ ಸಂರಕ್ಷಣಾ ತಾಣ ಎಂದು ಘೋಷಿಸಲು ಪರಿಸರಪರ ಮತ್ತು ರೈತ ಸಂಘಟನೆಗಳು ಒತ್ತಾಯಿಸಿವೆ.

ದಕ್ಷಿಣ ಭಾರತದ ಹೆಗ್ಗಳಿಕೆಯಾದ ಅಮೃತಮಹಲ್ ತಳಿ ಸಂಶೋಧನೆ ಹಾಗೂ ಕೃಷಿ ವಿಜ್ಞಾನ ಕೇಂದ್ರ ಒಳಗೊಂಡ ಬಿದಿರಮ್ಮನಗುಡಿ ಅಮೃತ್‌ಮಹಲ್ ಹುಲ್ಲುಗಾವಲು ಪೂರ್ವಿಕರು ಉಳಿಸಿದ ಮಹತ್ವದ ಪಾರಂಪರಿಕ ಪ್ರದೇಶ. ಪಶುಸಂಗೋಪನೆ ಮತ್ತು ಕೃಷಿ ಸಂಸ್ಕೃತಿ ದ್ಯೋತಕವಾದ ಈ ಹುಲ್ಲುಗಾವಲು ವಿನಾಶದ ಅಂಚಿನಲ್ಲಿರುವ ಕೃಷ್ಣಮೃಗಗಳನ್ನೂ ಉಳಿಸಿ ಬೆಳೆಸುತ್ತಿದೆ.
 
ಅಪಾರ ಸಸ್ಯ ವೈವಿಧ್ಯದ ಜತೆಗೆ ಹತ್ತಾರು ಜಾತಿಯ ಕಾಡುಪ್ರಾಣಿ, 40ಕ್ಕೂ ಹೆಚ್ಚು ಬಗೆಯ ಚಿಟ್ಟೆ, 70ಕ್ಕೂ ಹೆಚ್ಚು ವಿವಿಧ ಪಕ್ಷಿ, ಔಷಧ ಸಸ್ಯ ಪ್ರಭೇದ, ಕೀಟ ಸಂಕುಲ ಸಾಕಿಕೊಂಡಿದೆ.

ಗ್ರೇಟ್ ಇಂಡಿಯನ್ ಬಸ್ಟರ್ಡ್, ಲೆಸ್ಸರ್ ಪ್ಲೊರಿಕಾಗಳಿಗೂ ನೆಮ್ಮದಿ ನೆಲೆಯಾಗಿದೆ. ಶೇ 8ರಷ್ಟಕ್ಕೂ ಕಡಿಮೆ ಅರಣ್ಯ ಪ್ರದೇಶ ಹೊಂದಿರುವ ತಿಪಟೂರು ತಾಲ್ಲೂಕಿನ ಈ ಕಾವಲು ಒಂದಷ್ಟು ಕೊರತೆ ನೀಗಿಸಿದೆ.

ಕೃಷ್ಣಾ ನದಿ ಪಾತ್ರಕ್ಕೆ ಸೇರಿರುವ ಇದು ಸುತ್ತಮುತ್ತ ಜಲವೃದ್ಧಿ ಕೊಡುಗೆ ನೀಡುತ್ತಿದೆ. ಪ್ರತಿ ವರ್ಷ ಅಮೃತ ಮಹಲ್ ತಳಿ ಕರುಗಳ ರಾಜ್ಯ ಮಟ್ಟದ ಹರಾಜು ಇದೇ ಕಾವಲಿನಲ್ಲಿ ನಡೆಯುವುದು ವಿಶೇಷ.

ಇಂಥ ಅತ್ಯಂತ ಪ್ರಮುಖ ಜೀವತಾಣವಾದ ಈ ಕಾವಲು ಅಭಿವೃದ್ಧಿ ನೆಪದ ಯೋಜನೆಗಳಿಗೆ ಬಲಿಯಾಗುವ ಮೊದಲು ರಕ್ಷಿಸಬೇಕಾದ ತುರ್ತು ಎದುರಾಗಿದೆ.

ಇದನ್ನು ರಾಷ್ಟ್ರೀಯ ಹುಲ್ಲುಗಾವಲು ಮತ್ತು ಕೃಷ್ಣಮೃಗ ಸಂರಕ್ಷಣಾ ತಾಣವೆಂದು ಘೋಷಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮೈತ್ರಯ ಬಳಗ, ಬಿದಿರಮ್ಮನಗುಡಿ ಅಮೃತಮಹಲ್ ಕಾವಲು ಹಿತರಕ್ಷಣಾ ವೇದಿಕೆ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ಕನ್ನಡ ರಕ್ಷಣಾ ವೇದಿಕೆ, ಡ್ರೀಮ್ಸ ಫೌಂಡೇಶನ್, ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆ, ಕ್ರಿಯಾಶೀಲ ಜಾತಿಗಳ ಒಕ್ಕೂಟ, ಜಿಲ್ಲಾ ವಿಜ್ಞಾನ ಕೇಂದ್ರ ಮತ್ತಿತರ ಸಂಘಟನೆಗಳ ಪ್ರಮುಖರು ಹೇಳಿಕೆ ಮೂಲಕ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.