ಚಿಕ್ಕನಾಯಕನಹಳ್ಳಿ: ಪಟ್ಟಣದ ಹೊರ ವಲಯ ದಬ್ಬೆಘಟ್ಟದ ಮರುಳಸಿದ್ದೇಶ್ವರ ಜಾತ್ರೆ ಪ್ರಯುಕ್ತ ಬುಧವಾರ ನಸುಕಿನಲ್ಲಿ ರಥೋತ್ಸವ ಜರುಗಿತು.
ಜಾತ್ರೆಯ ಪ್ರಮುಖ ಘಟ್ಟವಾದ ಅಗ್ನಿಕೊಂಡೋತ್ಸವ ಮಂಗಳವಾರ ವಿಜೃಂಭಣೆಯಿಂದ ಜರುಗಿತು.
ದಬ್ಬೆಘಟ್ಟ, ಕಲ್ಲೇನಹಳ್ಳಿ ಸೇರಿದಂತೆ 12 ಗ್ರಾಮಗಳ ಜನ ಒಗ್ಗೂಡಿ ಜಾತ್ರೆ ನಡೆಸಿದರು.
ಸಿದ್ಧಿ ಪುರುಷ ಮರಳುಸಿದ್ಧೇಶ್ವರ ಜನ ಕಲ್ಯಾಣಕ್ಕಾಗಿ ಲೋಕಸಂಚಾರ ಮಾಡುತ್ತಿದ್ದ ಸಂದರ್ಭದಲ್ಲಿ ದಬ್ಬೆಕಟ್ಟದ ಜನರಿಗೆ ಬಂದೊದಗಿದ್ದ ಮಾರಿ ಕಾಟವನ್ನು ನಿವಾರಿಸಿ ಕೆಂಡದುಂಡೆಗಳನ್ನು ನುಂಗಿದ ನೆನಪಿಗೆ ಅಗ್ನಿಕೊಂಡೋತ್ಸವ ನಡೆಸಲಾಗುತ್ತದೆ ಎಂದು ಊರ ಹಿರಿಯರು ಐತಿಹ್ಯ ಹೇಳುತ್ತಾರೆ.
ಕೆಂಡದುಂಡೆ ನುಂಗಿದ ಮರುಳಸಿದ್ಧರಿಗೆ ಕೆಂಡದಯ್ಯ ಎಂಬ ಬಿರುದು ಬಂತು. ಜಾತ್ರೆ ಸಂದರ್ಭದಲ್ಲಿ ಮರುಳ ಸಿದ್ಧೇಶ್ವರರಿಗೆ ಕೆಂಡದ ನೈವೇದ್ಯೆ ಮಾಡುವುದು ವಾಡಿಕೆ ಇಂದಿಗೂ ಸುತ್ತಮುತ್ತಲ ಭಕ್ತರು ಮಕ್ಕಳಿಗೆ ಕೆಂಡದಯ್ಯ ಎಂದು ಹೆಸರು ಇಡುತ್ತಾರೆ.
ದಬ್ಬೆಘಟ್ಟದ ಮರುಳಸಿದ್ದೇಶ್ವರ ಜಾತ್ರೆ ಶರಣ ಸಂಸ್ಕೃತಿಯ ಕಾಯಕ ಹಾಗೂ ದಾಸೋಹತತ್ವದ ಮೇಲೆ ನಡೆಯುತ್ತಿದ್ದು ಸಿದ್ಧಿ ಪುರುಷರಾದ ಅಲ್ಲಮಪ್ರಭು, ರೇವಣಸಿದ್ಧರು ಹಾಗೂ ಮರುಳಸಿದ್ಧರ ವಿಗ್ರಹಗಳನ್ನು ಒಟ್ಟಿಗೆ ಪ್ರತಿಷ್ಠಾಪಿಸಲಾಗಿದ್ದು ಪೂಜೆಗೊಳ್ಳುತ್ತಿವೆ. ಶರಣರ ಕಾಯಕ ತತ್ವವನ್ನು ಪ್ರತಿನಿಧಿಸುವ ಬಿರುದಾವಳಿಗಳನ್ನು ಹಿಡಿದು ಜನ ಕೆಂಡ ಹಾಯುವುದು ವಿಶೇಷ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.