ತುಮಕೂರು: ಗಣೇಶೋತ್ಸವಗಳು ಭಾರತೀಯರ ವೈಶಿಷ್ಟ್ಯವನ್ನು ಸೂಚಿಸುತ್ತವೆ. ಅವುಗಳನ್ನು ಬೆಂಬಲಿಸಿ, ಪ್ರೋತ್ಸಾಹಿಸಬೇಕಾದ್ದು ಎಲ್ಲ ಭಾರತೀಯರ ಕರ್ತವ್ಯ ಎಂದು ಆರ್ಟ್ ಆಫ್ ಲೀವಿಂಗ್ನ ಶ್ರೀಶ್ರೀ ರವಿಶಂಕರ್ ಗುರೂಜಿ ಹೇಳಿದರು.
ನಗರದ ಸಿದ್ದಿ ವಿನಾಯಕ ಸೇವಾ ಮಂಡಳಿ ಆಯೋಜಿಸಿರುವ ಗಣೇಶೋತ್ಸವ ಸಮಾರಂಭದಲ್ಲಿ ಶುಕ್ರವಾರ ಪಾಲ್ಗೊಂಡು ಮಾತನಾಡಿದ ಅವರು, ವಿಶ್ವದಲ್ಲಿ ಭಾರತದ ಮೇಲ್ಮೆಯನ್ನು ಇಂಥ ಉತ್ಸವಗಳು ಸಾರಿ ಹೇಳುತ್ತವೆ ಎಂದು ಅಭಿಪ್ರಾಯಪಟ್ಟರು.
ಶಿಕ್ಷಕರು ಅಜ್ಞಾನವನ್ನು, ಅಧಿಕಾರಿಗಳು ಅನ್ಯಾಯವನ್ನು, ವ್ಯಾಪಾರಿಗಳು ಅಭಾವವನ್ನು ಮತ್ತು ಎಲ್ಲರೂ ಒಗ್ಗೂಡಿ ಅಶುಚಿಯನ್ನು ಸಮಾಜದಿಂದ ತೊಲಗಿಸಬೇಕು. ಗಣೇಶೋತ್ಸವ ಸಮಿತಿಗಳು ವಿಗ್ರಹ ವಿಸರ್ಜನೆಯ ನಂತರ ಕೆರೆಕಟ್ಟೆಗಳ ಶುಚಿತ್ವ ಕಾಪಾಡಲು ಯತ್ನಿಸಬೇಕು ಎಂದರು.
ಅಮರನಾಥ ಯಾತ್ರಾ ಸಮಿತಿಯ ಅಧ್ಯಕ್ಷನಾಗಿ ನನ್ನನ್ನು ನೇಮಿಸಲಾಗಿದೆ. ಹುರಿಯತ್ ಕಾನ್ಫರೆನ್ಸ್ ಸೇರಿದಂತೆ ಕಾಶ್ಮೀರದ ಪ್ರತ್ಯೇಕತಾವಾದಿಗಳೊಂದಿಗೆ ಮಾತುಕತೆ ನಡೆಸಿ, ಶಾಂತಿಯುತ ಅಮರನಾಥ ಯಾತ್ರೆ ನಡೆಸಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದೇನೆ. ಎಲ್ಲರೂ ಸಕಾರಾತ್ಮವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.
ಕಾಶ್ಮೀರಿ ಜನರ ಸಹಕಾರದೊಂದಿಗೆ ಅಮರನಾಥಕ್ಕೆ ಹೊಸ ರಸ್ತೆ ನಿರ್ಮಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 6 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಅಮರನಾಥ ಗುಹೆ ಸಂದರ್ಶಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಗುರೂಜಿ ಅವರನ್ನು ಕಾಲ್ಟೆಕ್ಸ್ ವೃತ್ತದಿಂದ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು. ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್, ಡಿವೈಎಸ್ಪಿ ಶಿವಶಂಕರ್, ಉದ್ಯಮಿ ಎನ್.ಆರ್.ಜಗದೀಶ್, ಟಿ.ಆರ್.ಸದಾಶಿವಯ್ಯ, ಪ್ರಸನ್ನಕುಮಾರ್ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.