ಗುಬ್ಬಿ: ಗುಬ್ಬಿ ವಿಧಾನ ಸಭಾ ಚುನಾವಣೆಗೆ ಇಬ್ಬರು ಅಭ್ಯರ್ಥಿಗಳು ಬಾಜಾ ಬಜಂತ್ರಿ ಇಲ್ಲದೆ ಗುರುವಾರ ನಾಮಪತ್ರ ಸಲ್ಲಿಸಿದರು.
ಆಮ್ ಆದ್ಮಿ ಪಕ್ಷದಿಂದ ಕಡಬ ಹೋಬಳಿ ಬಾಡೇನಹಳ್ಳಿಯ ಬಿ.ಎಸ್.ಪ್ರಭುಪ್ರಸಾದ್ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಕಾಂಗ್ರೆಸ್ ಟಿಕೇಟ್ ವಂಚಿತ ಕಡಬ ಹೋಬಳಿಯ ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಟಿ.ಕೃಷ್ಣಪ್ಪ ತಮ್ಮ ಪತ್ನಿಯೊಟ್ಟಿಗೆ ನಾಮಪತ್ರ ಸಲ್ಲಿಸಿದರು.
ಆಮ್ ಆದ್ಮಿ ಪಕ್ಷದಿಂದ ನಾಮಪತ್ರ ಸಲ್ಲಿಸಿರುವ ಬಿ.ಎಸ್.ಪ್ರಭುಪ್ರಸಾದ್ ಬಳಿ ನಗದು, ಶೇರು ವಹಿವಾಟು, ಅಂಚೆಕಚೇರಿ, ವಾಹನ, ಒಡವೆ ಸೇರಿ ₹ 12.21 ಲಕ್ಷ ಹಾಗೂ ಪತ್ನಿ ಆಶಾ ಬಳಿ ₹ 7.1 ಲಕ್ಷ ಚರಾಸ್ತಿ ಇದೆ. ನಿವೇಶನ, ಮನೆ, ಜಮೀನು ಒಳಗೊಂಡಂತೆ ಒಟ್ಟು 1.8 ಕೋಟಿ ಮೌಲ್ಯದ ಸ್ಥಿರಾಸ್ತಿ ಘೋಷಣೆ ಮಾಡಿಕೊಡ್ಡಿದ್ದಾರೆ. ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಬಿಎಸ್ಸಿ ಪದವಿ ಪಡೆದಿದ್ದು, ಇಬ್ಬರು ಮಕ್ಕಳಿದ್ದಾರೆ.
ಇದೇ ದಿನ ಪಕ್ಷೇತರ ಅಭ್ಯರ್ಥಿಯಾಗಿ ಕಡಬ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯ ಎಚ್.ಟಿ.ಕೃಷ್ಣಪ್ಪ ನಾಮಪತ್ರ ಸಲ್ಲಿಸಿದರು. ಇಲ್ಲಿ ಅಭ್ಯರ್ಥಿಗಿಂತ ಪತ್ನಿ ಎಸ್.ಸಿ.ಮಂಜುಳ ಹೆಚ್ಚು ಸ್ಥಿರಾಸ್ತಿ ಹಾಗೂ ಚರಾಸ್ತಿ ಹೊಂದಿದ್ದು, 3 ಕೋಟಿಗೂ ಅಧಿಕ ಆದಾಯ ತೋರಿಸಿಕೊಂಡಿದ್ದಾರೆ.
ಅಭ್ಯರ್ಥಿ ಎಚ್.ಟಿ.ಕೃಷ್ಣಪ್ಪ ಹೊನ್ನಶೆಟ್ಟಿಹಳ್ಳಿ ಹಾಗೂ ಯಡವನಹಳ್ಳಿಯಲ್ಲಿ 5.9ಎಕರೆ ಕೃಷಿ ಭೂಮಿ ಹೊಂದಿದ್ದರೆ, ಪತ್ನಿ ಪತ್ನಿ ಹೆಸರಲ್ಲಿ 23.4ಎಕರೆ ಕೃಷಿ ಭೂಮಿ ಇದೆ. ಇವರು 3.53ಕೋಟಿಗೂ ಅಧಿಕ ಸ್ಥಿರಾಸ್ತಿ ಹೊಂದಿದ್ದು, ವಿವಿಧ ಬ್ಯಾಂಕುಗಳಲ್ಲಿ 1ಕೋಟಿಗೂ ಅಧಿಕ ಸಾಲ ಪಡೆದಿದ್ದಾರೆ.
ಬೆಂಗಳೂರಿನ ಅರ್ಕಾವತಿ ಬಡಾವಣೆ, ನಾಗೇನಹಳ್ಳಿ, ವಡ್ಡರಪಾಳ್ಯ ಸೇರಿದಂತೆ ಇತರೆಡೆ 8ಕ್ಕೂ ಹೆಚ್ಚು ಅಧಿಕ ನಿವೇಶನ ಹಾಗೂ ವಸತಿ ಕಟ್ಟಡಗಳು ಇವೆ. ಅಲ್ಲದೆ ಅಭ್ಯರ್ಥಿ ಎಚ್.ಟಿ.ಕೃಷ್ಣಪ್ಪ ತಮ್ಮ ಎರಡು ಪಾನ್ ಸಂಖ್ಯೆಗಳನ್ನು ಅಫಿಡವಿಟ್ನಲ್ಲಿ ತೋರಿಸಿಕೊಂಡಿದ್ದಾರೆ. ವಾಹನಗಳು, ಒಡವೆ ಸೇರಿದಂತೆ ಒಟ್ಟು 39ಲಕ್ಷ ಬೆಲೆಬಾಳುವ ಚರಾಸ್ತಿ ಇದೆ. ಇಲ್ಲಿ ಮಗನ ಹೆಸರಲ್ಲಿ ₹ 83 ಲಕ್ಷ ಮೌಲ್ಯದ ಸ್ಥಿರಾಸ್ತಿ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.