ADVERTISEMENT

ಜಾನಪದ ಪೋಷಣೆ: ಕನ್ನಡಿಗರ ಹೊಣೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2011, 9:30 IST
Last Updated 13 ಫೆಬ್ರುವರಿ 2011, 9:30 IST

ತುಮಕೂರು: ಆಧುನಿಕ ಜಗತ್ತಿನಲ್ಲಿ ಕನ್ನಡದ ಜಾನಪದ ಕಲೆ ಎಲ್ಲಿ ಮಿಂಚಿ ಮಾಯವಾಗುತ್ತದೆಯೋ ಎಂಬ ಕೊರಗು ಕಾಡುತ್ತಿದೆ ಎಂದು ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್ ವಿಷಾದಿಸಿದರು.

ಜಿಲ್ಲಾಡಳಿತ ಹಮ್ಮಿಕೊಂಡಿರುವ ಜಿಲ್ಲಾ ಉತ್ಸವದ ಅಂಗವಾಗಿ ಶನಿವಾರ ನಗರದ ಸಿದ್ದಗಂಗಾ ಫಾರ್ಮಸಿ ಕಾಲೇಜಿನ ಪದ್ಮಶ್ರೀ ಶಿವಮೂರ್ತಿ ಶಾಸ್ತ್ರಿ ವೇದಿಕೆಯಲ್ಲಿ ನಡೆದ ‘ಕನ್ನಡ ಜಾನಪದ ವೈವಿಧ್ಯತೆಗಳ ಗೋಷ್ಠಿ’ಯಲ್ಲಿ ಮಾತನಾಡಿದರು.

ಮನುಕುಲದ ಪ್ರಕಾಶಮಾನ ಬದುಕಿಗೆ ಜಾನಪದ ಕಲೆ ಆಧಾರವಾಗಿದೆ. ಈ ಕಲೆಯನ್ನು ಉಳಿಸಿ, ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗರ ಕರ್ತವ್ಯ. ಇಂತಹ ಕನ್ನಡ ಜಾನಪದ ವೈವಿಧ್ಯತೆ ಬಗ್ಗೆ ಚರ್ಚಿಸುವ ಗೋಷ್ಠಿಗಳು ಎಲ್ಲೆಡೆ ನಡೆಯಬೇಕು ಎಂದು ಆಶಿಸಿದರು.

ಮನಸಿನಲ್ಲಿ ಹುದುಗಿರುವ ಭಾವನೆಗಳನ್ನು ವ್ಯಕ್ತಪಡಿಸುವ ಹಾಡುಗಳೇ ಜಾನಪದ ಗೀತೆಗಳು. ಜಾನಪದ ಕಲೆ ಸ್ವಾವಲಂಬನೆಯ ಪರಿಕಲ್ಪನೆಯಾಗಿದೆ. ಹಳ್ಳಿಯ ಹೆಣ್ಣು ಮಕ್ಕಳು ಜಾನಪದ ಕಲೆಯ ಬೀಜಿ ಬಿತ್ತಿಹೋದರು. ಪೈರು ನಾಟಿ, ಕಳೆ ಕೀಳುವಾಗ, ಬತ್ತದ ಕೊಯ್ಲಿನಲ್ಲಿ, ರಾಗಿ ಬೀಸುವಾಗ, ಬತ್ತ ಕುಟ್ಟುವಾಗ ಈಗಲೂ ಹಳ್ಳಿಯ ಹೆಣ್ಣುಮಕ್ಕಳು ಜಾನಪದ ಗೀತೆ ಹಾಡುತ್ತಿದ್ದರು. ಈಗಿನ ಹೆಣ್ಣುಮಕ್ಕಳಿಗೆ ಜಾನಪದ ಪರಿಕರಗಳ ಹಿನ್ನೆಲೆಯ ಅರಿವು ಇಲ್ಲದಾಗಿದೆ ಎಂದು ವಿಷಾದಿಸಿದರು.

ಜಾನಪದ ಕಲೆ ಉಳಿಸಿ, ಬೆಳೆಸುವ ಉದ್ದೇಶದಿಂದಲೇ ಗೊ.ರು.ಚನ್ನಬಸಪ್ಪ ಜಾನಪದ ಅಕಾಡೆಮಿ ವಿಶ್ವವಿದ್ಯಾಲಯ ಸ್ಥಾಪಿಸಿದರು. ಇದುಇಡೀಏಷ್ಯಾಖಂಡದಲ್ಲೇಪ್ರಥಮವೆನಿಸಿಕೊಂಡಿದೆ ಎಂದರು.

ಜಾನಪದ ವಿದ್ವಾಂಸರಾದ ಡಾ.ಚಿಕ್ಕಣ್ಣ ಯಣ್ಣೆಕಟ್ಟೆ ಗೋಷ್ಠಿ ಉದ್ಘಾಟಿಸಿದರು. ಜಾನಪದ ಕಲಾವಿದ ಕಂಟಲಗೆರೆ ಸಣ್ಣಹೊನ್ನಯ್ಯ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ.ರಂಗಾರೆಡ್ಡಿ ಜಾನಪದ ಸಾಹಿತ್ಯ ಕುರಿತು ವಿಚಾರ ಮಂಡಿಸಿದರು.

ಇದೇ ಸಂದರ್ಭದಲ್ಲಿ ಲೀಲಾದೇವಿ ಆರ್.ಪ್ರಸಾದ್, ರೇಣುಕಾ ಪ್ರಸಾದ್, ಡಾ.ಚಿಕ್ಕಣ್ಣ ಯಣ್ಣೆಕಟ್ಟೆ, ಕಂಟಲಗೆರೆ ಸಣ್ಣಹೊನ್ನಯ್ಯ, ಡಾ.ರಂಗಾರೆಡ್ಡಿ, ಸಣ್ಣನಾಗಪ್ಪ ಅವರನ್ನು ಜಿಲ್ಲಾಧಿಕಾರಿ ಸನ್ಮಾನಿಸಿದರು. ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ಉಪಸ್ಥಿತರಿದ್ದರು.

ನಂತರ ನಡೆದ ಸಮಾರಂಭದಲ್ಲಿ ಜಗನ್ಮಾಥ ವಿದ್ಯಾಪೀಠ ಶಾಲೆ ಚಿಣ್ಣರು ಆಕರ್ಷಕ ಜಾನಪದ ನೃತ್ಯ ಪ್ರದರ್ಶಿಸಿದರು. ಸ್ಥಳೀಯ ಕಲಾವಿದರು ಜಾನಪದ ನೃತ್ಯ ಪ್ರಸ್ತುತಪಡಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲೆಯ ಜಾನಪದ ಕಲಾವಿದರನ್ನು ಜಿಲ್ಲಾಡಳಿತದಿಂದ ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.