
ತುಮಕೂರು: ಟಿಕೆಟ್ ಸಿಗದೇ ನಿರಾಶರಾಗಿದ್ದ ಮಾಜಿ ಸಚಿವ ಸಿ.ಚೆನ್ನಿಗಪ್ಪ, ಬಿ.ಸಿ.ಗೌರಿಶಂಕರ್ ಅವರು ಪಕ್ಷದ ಅಭ್ಯರ್ಥಿ, ರಾಜ್ಯ ಘಟಕದ ಅಧ್ಯಕ್ಷ ಎ.ಕೃಷ್ಣಪ್ಪ ಅವರಿಗೆ ಬೆಂಬಲ ಘೋಷಿಸುವ ಮೂಲಕ ಜೆಡಿಎಸ್ ಮಂಗಳವಾರ ಒಗ್ಗಟ್ಟಿನ ಮಂತ್ರ ಜಪಿಸಿತು.
ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್ ನೇತೃತ್ವದಲ್ಲಿ ಸೇರಿದ್ದ ಜೆಡಿಎಸ್ ಶಾಸಕರು, ಮುಖಂಡರು ಚುನಾವಣೆ ಕುರಿತು ಚರ್ಚೆ ನಡೆಸಿದರು.
‘ನಾನು ಮತ್ತು ನನ್ನ ಪುತ್ರ ಗೌರಿಶಂಕರ್ ಟಿಕೆಟ್ ಆಕಾಂಕ್ಷಿಯಾಗಿದ್ದೆವು. ಆದರೆ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರು ಎ.ಕೃಷ್ಣಪ್ಪ ಅವರನ್ನು ಕಣಕ್ಕೆ ಇಳಿಸಿದ್ದಾರೆ. ಅವರ ಗೆಲುವಿಗೆ ಶ್ರಮಿಸಲಾಗುವುದು’ ಎಂದು ಇದೇ ವೇಳೆ ಸಿ.ಚೆನ್ನಿಗಪ್ಪ ಹೇಳಿದರು.
ಪಕ್ಷದ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಬೇಕು ಹಾಗೂ ಒಗ್ಗಟ್ಟಿನಿಂದ ಕೆಲಸ ಮಾಡಲು ಶಾಸಕರು ಒಪ್ಪಿಗೆ ಸೂಚಿಸಿದರು.
ಸಭೆಯಲ್ಲಿ ಅಭ್ಯರ್ಥಿ ಎ.ಕೃಷ್ಣಪ್ಪ, ಶಾಸಕರಾದ ಎಸ್.ಆರ್.ಶ್ರೀನಿವಾಸ್, ಎಂ.ಟಿ.ಕೃಷ್ಣಪ್ಪ, ಸುರೇಶ್ ಬಾಬು, ಸುಧಾಕರ್ಲಾಲ್, ಮಾಜಿ ಶಾಸಕ ಗೌರಿಶಂಕರ್, ಮುಖಂಡರಾದ ವೀರಭದ್ರಯ್ಯ, ಮೈಲಾರಿ ಇತರರು ಇದ್ದರು.
ಮಾರ್ಚ್ 20ರಂದು ಮಧುಗಿರಿ, ಕೊರಟಗೆರೆಗಳಲ್ಲಿ ಪಕ್ಷದ ಪರವಾಗಿ ಎ.ಕೃಷ್ಣಪ್ಪ ಮತಯಾಚನೆ ನಡೆಸಲು ನಿರ್ಧರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.