ADVERTISEMENT

ತುಮಕೂರು ಬಂದ್ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2011, 5:40 IST
Last Updated 24 ಆಗಸ್ಟ್ 2011, 5:40 IST
ತುಮಕೂರು ಬಂದ್ ಯಶಸ್ವಿ
ತುಮಕೂರು ಬಂದ್ ಯಶಸ್ವಿ   

ತುಮಕೂರು:  ಜನ ಲೋಕಪಾಲ ಮಸೂದೆ ಜಾರಿಗೆ ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿ ವಿವಿಧ ಸಂಘ ಸಂಸ್ಥೆಗಳು ಮಂಗಳವಾರ ಕರೆ ನೀಡಿದ್ದ ಬಂದ್ ಸಂಪೂರ್ಣವಾಗಿ ಯಶಸ್ವಿಯಾಯಿತು. ಯಾವುದೇ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ. ಎಡಪಕ್ಷಗಳು, ಜೆಡಿಎಸ್ ಕಾರ್ಯಕರ್ತರು ಜಂಟಿಯಾಗಿ ಧರಣಿ ನಡೆಸಿದರು.

ಬಂದ್ ಕರೆ ಹಿನ್ನೆಲೆಯಲ್ಲಿ  ಶಾಲಾ, ಕಾಲೇಜುಗಳು ಸ್ವಯಂ ಪ್ರೇರಿತವಾಗಿ ರಜೆ ಘೋಷಿಸಿದ್ದವು. ಸಾರಿಗೆ ಸಂಪರ್ಕ ಸಂಪೂರ್ಣ ಸ್ತಬ್ಧಗೊಂಡ ಹಿನ್ನೆಲೆಯಲ್ಲಿ ಇಡೀ ನಗರ ಬಿಕೋ ಎನ್ನುತ್ತಿತ್ತು. ಆಟೊ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಸದಾ ಜನಜಂಗುಳಿಯಿಂದ ಗಿಜಿಗಿಡುವ ನಗರ ಸರ್ಕಾರಿ, ಖಾಸಗಿ ಬಸ್ ನಿಲ್ದಾಣಗಳಲ್ಲಿ ಜನರು ಕಂಡುಬರಲಿಲ್ಲ. ನಗರ ಸಾರಿಗೆ ಸೇರಿದಂತೆ ಜಿಲ್ಲೆಯ ಹೊರಭಾಗಕ್ಕೆ ಸಂಚರಿಸುವ ಕೆಎಸ್‌ಆಆರ್‌ಟಿಸಿ, ಖಾಸಗಿ ಬಸ್‌ಗಳು ಸಂಚಾರ ನಿಲ್ಲಿಸಿದ್ದವು. ಕೆಲವು ಬಸ್‌ಗಳು ನಗರದ ಹೊರಭಾಗದಲ್ಲಿ ಸಂಚರಿಸಿದವು.

ಕೆಲವು ಕಡೆಗಳಲ್ಲಿ ವಿದ್ಯಾರ್ಥಿಗಳು ಸೈಕಲ್ ರ‌್ಯಾಲಿ ನಡೆಸುವ ಮೂಲಕ ಅಣ್ಣಾ ಹಜಾರೆಗೆ ಬೆಂಬಲ ವ್ಯಕ್ತಪಡಿಸಿದರೆ, 15ರಿಂದ 20 ಗೃಹಿಣಿಯರು ಯಾವುದೇ ಸಂಘಟನೆ, ಮುಖಂಡರ ನೇತೃತ್ವವಿಲ್ಲದೆ ಸ್ವಯಂಪ್ರೇರಿತರಾಗಿ ಕೆಲ ಸಮಯ ಜಿಲ್ಲಾಧಿಕಾರಿ ಕಚೇರಿ ಎದುರು ಅಣ್ಣಾ ಪರ ಘೋಷಣೆ ಕೂಗಿ ತಮ್ಮ ಬೆಂಬಲ ವ್ಯಕ್ತಪಡಿಸಿದ್ದು ವಿಶೇಷವಾಗಿತ್ತು.

ಕೆಲವು ಯುವಕರು ಬೈಕ್‌ಗಳಲ್ಲಿ ತೆರಳಿ ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸಿದರು. ಬ್ಯಾಂಕ್‌ಗಳು, ಬಿಎಸ್‌ಎನ್‌ಎಲ್, ಜಿಲ್ಲಾ ಪಂಚಾಯಿತಿ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಬಂದ್‌ಗೆ ಬೆಂಬಲ ಸೂಚಿಸದೆ ಕರ್ತವ್ಯದಲ್ಲಿ ನಿರತರಾಗಿದ್ದರು. ಆದರೆ ಹತ್ತಾರು ಬೈಕ್‌ಗಳಲ್ಲಿ ತಂಡತಂಡವಾಗಿ ಬಂದ ಯುವಕರು ಬಲವಂತವಾಗಿಕರ್ತವ್ಯ ನಿರ್ವಹಣೆ ಮಾಡದಂತೆ ಅಧಿಕಾರಿ, ಸಿಬ್ಬಂದಿಯನ್ನು ತಡೆದು ಕಚೇರಿಯಿಂದ ಆಚೆ ಕಳಿಸಿದ್ದು ಕಂಡುಬಂತು.

ಇಷ್ಟು ದಿನಗಳ ಕಾಲ ಧರಣಿ, ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಕಂಡುಬರುತ್ತಿದ್ದರು. ಆದರೆ ಇಂದಿನ ಬಂದ್ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕಂಡುಬರಲಿಲ್ಲ. ಕೋತಿತೋಪು ರಸ್ತೆ ಸೇರಿದಂತೆ ಅಲ್ಲಲ್ಲಿ ಅಂಗಡಿ ಮಾಲೀಕರು ಬಂದ್ ಬೆದರಿಕೆಗೆ ಬಗ್ಗದೆ ತಮ್ಮ ವ್ಯಾಪಾರ ವಹಿವಾಟು ನಡೆಸಿದರು.

ಮುಂಜಾನೆಯಿಂದ ಅಂಗಡಿಗಳನ್ನು ಕೆಲವರು ಸ್ವಯಂ ಪ್ರೇರಿತರಾಗಿ ಮಚ್ಚಿದರೆ, ಮತ್ತೇ ಕೆಲವರನ್ನು ಬಲವಂತವಾಗಿ ಮುಚ್ಚಿಸಲಾಯಿತು. ನಗರದ ಬಟವಾಡಿ ವೃತ್ತ, ಶಿವಕುಮಾರ ಸ್ವಾಮೀಜಿ ವೃತ್ತ, ಟೌನ್‌ಹಾಲ್, ಗುಬ್ಬಿಗೇಟ್, ಮುಂತಾದ ಕಡೆ ರಸ್ತೆತಡೆ ಮಾಡಲಾಗಿತ್ತು. ಹಲವು ಸಂಘಟನೆಗಳ  ಕಾರ್ಯಕರ್ತರು ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಬೆಂಬಲ: ಅಣ್ಣಾ ಹಜಾರೆ ಹೋರಾಟ ಬೆಂಬಲಿಸಿ ಮಂಗಳವಾರ ನಡೆದ ತುಮಕೂರು ಬಂದ್‌ಗೆ ಕರ್ನಾಟಕ ಆರ್ಯ ವೈಶ್ಯ ಯುವಜನ ಮಹಾಸಭಾದ ತುಮಕೂರು ಘಟಕ ಬೆಂಬಲ ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.