ADVERTISEMENT

ತೆಂಗು ಉತ್ಪನ್ನಗಳಿಗೆ ‘ಸುಭಿಕ್ಷಾ’ ಮಾದರಿ

ಪ್ರಜಾವಾಣಿ ವಿಶೇಷ
Published 16 ಫೆಬ್ರುವರಿ 2014, 9:30 IST
Last Updated 16 ಫೆಬ್ರುವರಿ 2014, 9:30 IST
ಕೇರಳ ರಾಜ್ಯದ ಕ್ಯಾಲಿಕಟ್ ಬಳಿಯ ಪೆರಂಬ್ರಾ ಗ್ರಾಮದಲ್ಲಿರುವ ಸುಭಿಕ್ಷಾ ತೆಂಗು ಉತ್ಪನ್ನಗಳ ಮೌಲ್ಯವರ್ಧನೆ ಸಂಸ್ಥೆಗೆ ಭೇಟಿ ನೀಡಿದ್ದ ಚಿಕ್ಕನಾಯಕನಹಳ್ಳಿ ತಾಲ್ಲೂಕು ತೆಂಗು ಬೆಳೆಗಾರರು.
ಕೇರಳ ರಾಜ್ಯದ ಕ್ಯಾಲಿಕಟ್ ಬಳಿಯ ಪೆರಂಬ್ರಾ ಗ್ರಾಮದಲ್ಲಿರುವ ಸುಭಿಕ್ಷಾ ತೆಂಗು ಉತ್ಪನ್ನಗಳ ಮೌಲ್ಯವರ್ಧನೆ ಸಂಸ್ಥೆಗೆ ಭೇಟಿ ನೀಡಿದ್ದ ಚಿಕ್ಕನಾಯಕನಹಳ್ಳಿ ತಾಲ್ಲೂಕು ತೆಂಗು ಬೆಳೆಗಾರರು.   

ತೆಂಗು ಉತ್ಪನ್ನಗಳ ಮೌಲ್ಯ­ವರ್ಧನೆ ಮತ್ತು ಮಾರುಕಟ್ಟೆ ಸ್ಥಿರತೆ ಸಾಧಿಸಲು ನಮ್ಮ ಬೆಳೆಗಾರರು ಕೇರಳ ಮಾದರಿಯಲ್ಲಿ ಸಂಘಟಿತ­ರಾಗಬೇಕು. ಅದರಲ್ಲೂ ಕೇರಳದ ಕ್ಯಾಲಿಕಟ್ ಬಳಿ ಇರುವ ಪೆರಂಬ್ರಾ ಬ್ಲಾಕ್‌ನ ಏಳು ಗ್ರಾಮ ಪಂಚಾಯಿತಿಗಳಲ್ಲಿ ಸಕ್ರಿಯವಾಗಿರುವ ‘ಸುಭಿಕ್ಷಾ ತೆಂಗು ಉತ್ಪಾದಕರ ಕಂಪೆನಿ’ಯ ಕಾರ್ಯ ಚಟುವಟಿಕೆಯನ್ನು ತುಮಕೂರು ಜಿಲ್ಲೆಯ ಎಲ್ಲ ರೈತರು ಒಮ್ಮೆ ಕಣ್ಣಾರೆ ನೋಡಬೇಕು. ಇದು ನಮ್ಮ ತೆಂಗು ಬೆಳೆಗಾರರ ಹಲವು ಸಮಸ್ಯೆಗಳಿಗೆ ಉತ್ತರದಂತೆ ಕಾಣುತ್ತಿದೆ.

ಜಿಲ್ಲೆಯಂತೆ ಇಲ್ಲಿಯೂ ಬಡತನ ಮತ್ತು ತೆಂಗು ಬೆಳೆ ಸಹಬಾಳ್ವೆ ನಡೆಸುತ್ತಿವೆ. ಇಲ್ಲಿ ಒಟ್ಟು 522 ಮಹಿಳಾ ಸ್ವ–ಸಹಾಯ ಗುಂಪುಗಳಿವೆ. ೨೦೦೨ರಲ್ಲಿ ಇಂಡಿಯನ್‌ ಇನ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ ಸಹಯೋಗದಲ್ಲಿ ಪೆರಂಬ್ರಾ ಗ್ರಾಮ ಪಂಚಾಯಿತಿ ಬ್ಲಾಕ್ ‘ಸುಭಿಕ್ಷಾ ತೆಂಗು ಉತ್ಪಾದಕ ಕಂಪೆನಿ’ ಸ್ಥಾಪಿಸಿತು. ಸ್ಥಾಪನೆಯಾದ ೧೨ ವರ್ಷದಲ್ಲಿ ಈ ಕಂಪೆನಿ ೭ಸಾವಿರ ಬಡ ಕುಟುಂಬಗಳಿಗೆ ಆಧಾರ ಸ್ತಂಭವಾಗಿದೆ. ಕಂಪೆನಿ­ಗಾಗಿ ದಿನಕ್ಕೆ ೪ ಗಂಟೆ ದುಡಿಯುವ ಕುಟುಂಬ, ಸರಾಸರಿ ಪ್ರತಿ ದಿನ ₨ ೨೦೦ ಗಳಿಸುತ್ತಿದೆ.

ಇಂದು ಮಾರುಕಟ್ಟೆಯಲ್ಲಿ ಸುಭಿಕ್ಷಾ ಬ್ರಾಂಡ್‌­ನಡಿ ತೆಂತಾ ಎಣ್ಣೆ, ತೆಂಗಿನ ಉಪ್ಪಿನಕಾಯಿ, ಎಳನೀರು ಜಾಮ್, ಸ್ಕ್ವಾಶ್, ಚಟ್ನಿಪುಡಿ, ನೈಸರ್ಗಿಕ ವಿನೆಗರ್, ತೆಂಗಿನ ಸೋಪು, ಕೇಶ ವರ್ಧಿನಿ ತೈಲ, ಕೊಬ್ಬರಿ ಎಣ್ಣೆ, ಸೌಂದರ್ಯ ವರ್ಧಕಗಳು, ಸಿಹಿ ನೀರಾ, ನಾರಿನ ಉತ್ಪನ್ನಗಳು ಸೇರಿ­ದಂತೆ ಒಟ್ಟು ೨೨ ಬಗೆಯ ಉತ್ಪನ್ನಗಳು ಮಾರುಕಟ್ಟೆ­ಯಲ್ಲಿವೆ.

ಯಾವುದೇ ಡೀಲರ್‌ ಅಥವಾ ದಲ್ಲಾಳಿಗಳ ಮೊರೆ ಹೋಗದೆ ಗ್ರಾಹಕರೊಂದಿಗೆ ನೇರವಾಗಿ ಸಂಪರ್ಕ ಸಾಧಿಸಿರುವುದು ‘ಸುಭಿಕ್ಷಾ’ದ ಮತ್ತೊಂದು ಹೆಗ್ಗಳಿಕೆ. ಕರ್ನಾಟಕದ ನಂದಿನಿ ಪಾರ್ಲರ್ ಮಾದರಿ­ಯಲ್ಲಿ ಕೇರಳದಲ್ಲಿ ‘ಸುಭಿಕ್ಷಾ ಔಟ್‌ಲೆಟ್‌’ಗಳಿವೆ. ರಬ್ಬರ್ ಬೆಳೆ­ಗಾರರ ಸಂಘದ ಮೂಲಕ ಸುಭಿಕ್ಷಾ ಉತ್ಪನ್ನ­ಗಳನ್ನು ವಿದೇಶಕ್ಕೂ ರಫ್ತು ಮಾಡುತ್ತಾರೆ.

ಕೇರಳ ಸರ್ಕಾರ, ಕೃಷಿ– ತೋಟಗಾರಿಕೆ ಇಲಾಖೆ­ಗಳು, ಸಂಶೋಧನಾ ಸಂಸ್ಥೆಗಳು ಮತ್ತು ತೆಂಗು ಅಭಿವೃದ್ಧಿ ಮಂಡಳಿ ‘ಸುಭಿಕ್ಷಾ’ಗೆ ಬೆನ್ನೆಲು­ಬಾಗಿ ನಿಂತಿವೆ. ಇದೇ ಮಾದರಿಯಲ್ಲಿ ತುಮ­ಕೂರು ಜಿಲ್ಲೆಯಲ್ಲೂ ತೆಂಗು ಬೆಳೆಗಾರರ ಸಂಘ­ಗಳು ಸ್ಥಾಪನೆಯಾಗಿ ಸರ್ಕಾರ-----, ಇಲಾಖೆ­ಗಳು ಕ್ರಿಯಾಶೀಲವಾದರೆ ಮುಂದಿನ ದಿನ­ಗಳಲ್ಲಿ ಜಿಲ್ಲೆಯದೇ ಆದ ಪ್ರತ್ಯೇಕ ತೆಂಗು ಉತ್ಪನ್ನ­ಗಳ ಬ್ರಾಂಡ್ ಸ್ಥಾಪನೆಯಾಗಿ ಮಾರುಕಟ್ಟೆಯಲ್ಲಿ ಪಾರಮ್ಯ ಮೆರೆಯಬಹುದು. ಅದರಿಂದ ಲಕ್ಷಾಂತರ ರೈತರ ಬದುಕು ಹಸನಾಗಬಹುದು.

ತುರುವೇಕೆರೆಯಲ್ಲಿ ಇದೀಗ ಕರ್ನಾಟಕದ ಮೊದಲ ತೆಂಗು ಉತ್ಪಾದಕ ಕಂಪೆನಿ ಸ್ಥಾಪನೆಯಾ­ಗಿದೆ. ಗುಬ್ಬಿಯಲ್ಲಿ 2ನೇ ಕಂಪೆನಿ ಆರಂಭವಾಗಿದೆ. ಚಿಕ್ಕನಾಯಕನಳ್ಳಿಯಲ್ಲಿ 80ಕ್ಕೂ ಹೆಚ್ಚು ತೆಂಗು ಉತ್ಪಾದಕ ಸೊಸೈಟಿಗಳು ನೋಂದಣಿಯಾಗಿದ್ದು, ಶೀಘ್ರ ಕಂಪೆನಿ ಸ್ಥಾನಮಾನ ದೊರೆಯುವ ಸಾಧ್ಯತೆ ಇದೆ. ಶಿರಾ, ಕುಣಿಗಲ್, ತುಮಕೂರಿನಲ್ಲೂ ‘ಉತ್ಪಾ­ದನೆ– ಮಾರಾಟ– ಹೋರಾಟ’ ಎಂಬ ಧ್ಯೇಯ ವಾಕ್ಯದೊಂದಿಗೆ ಚೆದುರಿದಂತೆ ಸಂಘಗಳು ಅಸ್ತಿತ್ವಕ್ಕೆ ಬರುತ್ತಿವೆ. ಸುಭಿಕ್ಷಾ ಮಾದರಿಯನ್ನು ಮುಂದಿಟ್ಟುಕೊಂಡು ಸಂಘಟನೆ ಮುನ್ನಡೆ­ಯ­ದಿದ್ದರೆ ಬೆಳೆಗಾರರ ಚಳವಳಿ ದಿಕ್ಕು ತಪ್ಪುವ ಸಾಧ್ಯತೆಯಿದೆ.

ಈ ದೃಷ್ಟಿಯಿಂದ ಜಿಲ್ಲೆಯ ಎಲ್ಲ ತೆಂಗು ಬೆಳೆ­ಗಾರರೂ ಸುಭಿಕ್ಷಾ ನೋಡಬೇಕು ಎಂದು ನಾನು ಬಯಸುತ್ತೇನೆ. ಈಗಾಗಲೇ ಜಿಲ್ಲೆಯ ನೂರಾರು ರೈತರು ಸರ್ಕಾರದಿಂದ ಯಾವುದೇ ಹಣ ಸಹಾಯ ಪಡೆಯದೆ ಸ್ವಂತ ಹಣದಿಂದ ‘ಸುಭಿಕ್ಷಾ’ ನೋಡಿ ಬಂದಿದ್ದಾರೆ. ಒಂದು ವಾರದ ಕೇರಳ ಪ್ರವಾಸಕ್ಕೆ ಸುಮಾರು ₨ ೨೫೦೦ ಖರ್ಚಾಗುತ್ತದೆ.

(ಮಾಹಿತಿಗೆ ವೆಬ್‌ಸೈಟ್: www.subicsha.in, ಈಮೇಲ್ coconut.subhicsha@gmail.com, ಮೊಬೈಲ್ 09946209005– ಅಣೇಕಟ್ಟೆ ವಿಶ್ವನಾಥ)
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.