ನಾಗವಲ್ಲಿ: ಹೋಬಳಿಯ ಸೋಪನಹಳ್ಳಿಯ ಗ್ರಾಮದಲ್ಲಿ ವ್ಯಕ್ತಿಯೊಬ್ಬ ದಾರಿಗೆ ಅಡ್ಡಲಾಗಿ ತಂತಿ ಬೇಲಿ ಹಾಕಿಕೊಂಡಿರುವುದರಿಂದ 70ಕ್ಕೂ ಅಧಿಕ ಮನೆಯವರು ರಸ್ತೆ ಇಲ್ಲದೆ ಪರದಾಡಬೇಕಾಗಿದೆ. ಈ ರಸ್ತೆಯು ನಾಗವಲ್ಲಿ, ದೊಮ್ಮನಕುಪ್ಪೆ, ಮುದಿಗೆರೆ ಪಾಳ್ಯ, ಮೇಣಸಂದ್ರ, ಪೊನ್ನ ಸಂದ್ರ, ಸಡುಪನಹಳ್ಳಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆ. ನೂರಾರು ವರ್ಷಗಳಿಂದ ಇದೇ ಹಾದಿಯನ್ನು ಈ ಎಲ್ಲ ಗ್ರಾಮಸ್ಥರು ಬಳಸುತ್ತಿದ್ದರು. ರೈತರು ಸಹ ಹೊಲಗಳಿಗೆ ಹೋಗಲು ಇದೇ ರಸ್ತೆಯನ್ನು ಬಳಸಬೇಕಾಗಿದೆ.
‘ಸಣ್ಣ ವಿಷಯವೊಂದಕ್ಕೆ ದಲಿತರೊಂದಿಗೆ ವೈಷಮ್ಯ ಬೆಳೆಸಿಕೊಂಡ ಗ್ರಾಮದ ಪಾಪಯ್ಯ ಅವರ ಮಗ ಕುಮಾರ್ ಎಂಬುವವರು ಏಕಾಏಕಿ ತಮ್ಮ ಜಮೀನಿಗೆ ಬೇಲಿ ಹಾಕಿಕೊಂಡಿದ್ದಾರೆ. ಈ ಜಮೀನ ಮೇಲೆಯೇ ರಸ್ತೆ ಹಾದು ಹೋಗುವುದರಿಂದ ಈಗ ಸಮಸ್ಯೆ ಎದುರಾಗಿದೆ’ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.
ಜಮೀನಿನಲ್ಲಿ ಖರಾಬು ಸಹ ಇಲ್ಲ. ಈಗ ಏಕಾಏಕಿ ಬೇಲಿ ಹಾಕಿರುವುದರಿಂದ ಊರಿನ ಜನರನ್ನು ದಿಗ್ಬಂಧನದಲ್ಲಿರಿಸಿದಂತೆ ಆಗಿದೆ. ದಲಿತರ ಮನೆಗಳೇ ಹೆಚ್ಚಿವೆ. ಈಗ ಇವರೆಲ್ಲರೂ ಸುತ್ತಿಬಳಿಸಿ ನಾಗವಲ್ಲಿಗೆ ಬರಬೇಕಾಗಿದೆ. ಶಾಲಾ–ಮಕ್ಕಳು, ಹಿರಿಯ ನಾಗರಿಕರು ಇದರಿಂದ ತುಂಬಾ ಸಮಸ್ಯೆಪಡಬೇಕಾಗಿದೆ ಎಂದು ಗ್ರಾಮಸ್ಥರು ಹೇಳಿದರು.
‘ ಅನಾರೋಗ್ಯಪೀಡಿತರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಾಧ್ಯವಿಲ್ಲವಾಗಿದೆ. ಸುತ್ತಿಬಳಸಿ ಹೊಲಗಳ ಕಾಲುದಾರಿಗಳ ಮೂಲಕ ನಾಗವಲ್ಲಿ ಸೇರುವಂತಾಗಿದೆ. ಬೇಲಿಯನ್ನು ತೆರವುಗೊಳಿಸಿ ಮೊದಲಿನಂತೆ ರಸ್ತೆ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು’ ಎಂದು ಗ್ರಾಮದ ದೇವರಾಜ್ ತಿಳಿಸಿದರು.
ರಸ್ತೆಗೆ ತಂತಿ ಬೇಲಿ ಹಾಕಿಕೊಳ್ಳಲು ಕಾನೂನು ರೀತಿ ಅವಕಾಶ ಇಲ್ಲ ಎಂದು ತಹಶೀಲ್ದಾರ್ ಹಿಂಬರಹದಲ್ಲಿ ತಿಳಿಸಿದ್ದರೂ ತಂತಿ ಬೇಲಿ ತೆರವು ಮಾಡಿಸುತ್ತಿಲ್ಲ. ಸ್ಥಳ ಪರಿಶೀಲನೆ ನಡೆಸಿದರೂ ಕ್ರಮ ಕೈಗೊಳ್ಳದೇ ಮೌನವಹಿಸಿದ್ದಾರೆ. ಗ್ರಾಮಕ್ಕೆ ಬದಲಿ ರಸ್ತೆ ವ್ಯವಸ್ಥೆ ಮಾಡುವವರೆಗೂ ತಂತಿ ಬೇಲಿ ತೆರವುಗೊಳಿಸಿ ಓಡಾಡಲು ಅನುವು ಮಾಡಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.