ADVERTISEMENT

ನೀಡದ ಅಪಘಾತ ವಿಮೆ: ಜಪ್ತಿ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2011, 8:20 IST
Last Updated 23 ಸೆಪ್ಟೆಂಬರ್ 2011, 8:20 IST

ತುಮಕೂರು: ಅಪಘಾತ ವಿಮೆ ಪರಿಹಾರ ನೀಡಲು ಸತಾಯಿಸುತ್ತಿದ್ದ ವಿಮಾ ಕಂಪೆನಿಯೊಂದರ ಕಚೇರಿ ಜಪ್ತಿ ಮಾಡಿದ ಘಟನೆ ಗುರುವಾರ ನಗರದಲ್ಲಿ ನಡೆಯಿತು.

ನಗರದ ಬಿ.ಎಚ್.ರಸ್ತೆಯಲ್ಲಿರುವ ನ್ಯೂ ಇಂಡಿಯನ್ ಇನ್ಶೂರೆನ್ಸ್ ಕಂಪೆನಿಯ ಶಾಖಾ ಕಚೇರಿಯನ್ನು ಜಪ್ತಿ ಮಾಡಲಾಯಿತು. ಕಚೇರಿ ಜಪ್ತಿಮಾಡಿ ಅಪಘಾತ ವಿಮೆ ಹಣ ಸರಿದೂಗಿಸಿ ಕೊಳ್ಳುವಂತೆ ನ್ಯಾಯಾಲಯದ ಆದೇಶ ದಂತೆ ವಕೀಲ ಎ. ಗೋವಿಂದರಾಜು ನೇತೃತ್ವದ ತಂಡ ಕಚೇರಿ ಜಪ್ತಿಗೆ ಮುಂದಾಯಿತು.

ಮಧ್ಯಾಹ್ನ 12 ಗಂಟೆಗೆ ನ್ಯಾಯಾಲಯದ ಆದೇಶದೊಂದಿಗೆ ಸ್ಥಳಕ್ಕೆ ಬಂದ ಗೋವಿಂದರಾಜು ಅವರ ತಂಡ ಕಚೇರಿಯಲ್ಲಿ ಪೀಠೋಪಕರಣಗಳ ಸಹಿತ ಕಚೇರಿ ಜಪ್ತಿಗೆ ತೊಡಗಿತ್ತು. ಜಪ್ತಿ ಆರಂಭವಾದ ಒಂದು ಗಂಟೆ ಬಳಿಕ ಕಂಪೆನಿಯ ಬೆಂಗಳೂರಿನ ಪ್ರಧಾನ ಕಚೇರಿ ಅಧಿಕಾರಿಗಳು ಅಪಘಾತ ವಿಮೆ ಕೊಡುವ ಭರವಸೆಯನ್ನು ಲಿಖಿತವಾಗಿ ಇ-ಮೇಲ್ ಮೂಲಕ ನೀಡಿದ ಬಳಿಕ ಜಪ್ತಿ ನಿಲ್ಲಿಸಲಾಯಿತು.

ಘಟನೆ ವಿವರ: 2006ರಲ್ಲಿ ಗುಬ್ಬಿ ತಾಲ್ಲೂಕು ನರಸಿಂಹದೇವರಹಟ್ಟಿಯ ವಿಠಲಮೂರ್ತಿ ದ್ವಿಚಕ್ರ ವಾಹನದಲ್ಲಿ ತೆರಳುವಾಗ ಟೆಂಪೊ ಡಿಕ್ಕಿ ಹೊಡೆದು ಅವರ ಕೈ ಕಾಲು ಮುರಿದಿತ್ತು. ಅಪಘಾತ ವಿಮೆಯ ಪರಿಹಾರ ಕೋರಿ ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ವಿಮೆ ಪರಿಹಾರವಾಗಿ ರೂ. 5.10 ಲಕ್ಷವನ್ನು ವಿಠಲಮೂರ್ತಿಗೆ ನೀಡುವಂತೆ ಕಂಪೆನಿಗೆ 2009ರಲ್ಲಿ ಆದೇಶಿಸಿತ್ತು.

ನ್ಯಾಯಾಲಯದ ಆದೇಶವಿದ್ದರೂ ಕಂಪೆನಿ ಪರಿಹಾರ ಹಣ ನೀಡಿರಲಿಲ್ಲ. ಹೀಗಾಗಿ ಕಂಪೆನಿ ಆಸ್ತಿ ಜಪ್ತಿಗೆ ಕೋರಿ ವಿಠಲಮೂರ್ತಿ ಮತ್ತೇ ಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಪರಿಹಾರ ಹಣ ನೀಡದಿದ್ದರೆ ಕಚೇರಿ ಜಪ್ತಿ ಮಾಡಲು ಆದೇಶ ನೀಡಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.