ADVERTISEMENT

ನೀರಿಗಾಗಿ ಬೆಂಕಿಯಾದ ಬೆಂಕಿಪುರದ ಜನ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2012, 10:22 IST
Last Updated 13 ಡಿಸೆಂಬರ್ 2012, 10:22 IST

ಮಧುಗಿರಿ: ಸಮರ್ಪಕ ಕುಡಿಯುವ ನೀರು, ಮೂಲ ಸೌಕರ್ಯಕ್ಕೆ ಒತ್ತಾಯಿಸಿ ಪಟ್ಟಣದ ಬೆಂಕಿಪುರ ಪ್ರದೇಶದ ನಿವಾಸಿಗಳು ಬುಧವಾರ ಪುರಸಭೆ ಎದುರು ಪ್ರತಿಭಟಿಸಿದರು.

8ನೇ ವಾರ್ಡ್‌ನ ಬೆಂಕಿಪುರ ಗುಟ್ಟೆಯ ಮೇಲೆ ವಾಸವಾಗಿರುವ ನಿವಾಸಿಗಳಿಗೆ ಕಳೆದ ಐದು ವರ್ಷಗಳಿಂದ ಸಮರ್ಪಕವಾಗಿ ಕುಡಿಯಲು ನೀರು ಪೂರೈಸುತ್ತಿಲ್ಲ. ಬೀದಿದೀಪಗಳ ವ್ಯವಸ್ಥೆಯಿಲ್ಲ, ರಸ್ತೆಯಿಲ್ಲ, ಗುಟ್ಟೆಯಲ್ಲಿ ವಿಷಪೂರಿತ ಹಾವುಗಳು ಹೆಚ್ಚಾಗಿವೆ ಎಂದು ದೂರಿದರು.

ಈ ಪ್ರದೇಶದಲ್ಲಿರುವ ಬಹುಸಂಖ್ಯೆಯ ಜನರು ಕೂಲಿ ಕಾರ್ಮಿಕರು. ನೀರಿಗಾಗಿ ಕಾದರೆ ಕೂಲಿ ಇಲ್ಲದಂತಾಗುತ್ತದೆ. ಜನಪ್ರತಿನಿಧಿಗಳು ಶೀಘ್ರ ಮೂಲ ಸೌಕರ್ಯ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ನೇತ್ರಾವತಿ ಮಾತನಾಡಿ, ಕುಡಿಯುವ ನೀರಿಗಾಗಿ ಪುರಸಭೆ ಮುಂದೆ ಹಲವು ಬಾರಿ ಪ್ರತಿಭಟನೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ.

ಪ್ರತಿಭಟನೆ  ಸಮಯದಲ್ಲಿ ತಾತ್ಕಾಲಿಕವಾಗಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಿ ಅಧಿಕಾರಿಗಳು ಸುಮ್ಮನಾಗುತ್ತಾರೆ. ತಕ್ಷಣ ಕುಡಿಯುವ ನೀರು ಪೂರೈಕೆ ಹಾಗೂ ಬೀದಿದೀಪದ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿದರು. 

ಪ್ರತಿಭಟನಾ ನಿರತರೊಂದಿಗೆ ಮಾತನಾಡಿದ ಕಚೇರಿ ವ್ಯವಸ್ಥಾಪಕ ಮಂಜುನಾಥ್, ಈ ಕುರಿತು ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು. ನಿವಾಸಿಗಳಾದ ರತ್ನಮ್ಮ, ಕಾಂತಮ್ಮ, ತಿಮ್ಮಕ್ಕ, ಶಿವಮ್ಮ, ಮಣಿ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.