ADVERTISEMENT

ನೆಲ-ಜಲ ಸಂರಕ್ಷಣೆಯಲ್ಲಿ ರಾಜಿ ಬೇಕಿಲ್ಲ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2012, 6:10 IST
Last Updated 3 ಅಕ್ಟೋಬರ್ 2012, 6:10 IST

ತುರುವೇಕೆರೆ: ನಾಡಿನ ನೆಲ, ಜಲ ಸಂರಕ್ಷಣೆ ವಿಷಯದಲ್ಲಿ ಯಾವುದೇ ರಾಜಿಗೂ ಸಿದ್ಧವಿಲ್ಲ. ಪ್ರಾಣ ಹೋದರೂ ಸರಿಯೇ, ತಮಿಳುನಾಡಿಗೆ ಕಾವೇರಿ ನೀರು ಬಿಡಲು ಒಪ್ಪುವುದಿಲ್ಲ ಎಂದು ಕನ್ನಡ ರಕ್ಷಣಾ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಆರ್.ವಿಜಯಕುಮಾರ್ ಘೋಷಿಸಿದರು.

ಪಟ್ಟಣದಲ್ಲಿ ಕನ್ನಡ ರಕ್ಷಣಾ ವೇದಿಕೆ ಹಮ್ಮಿಕೊಂಡಿದ್ದ  ಕಾರ್ಯಕರ್ತರ ಕಾವೇರಿ ಪಾದಯಾತ್ರೆಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿದ ಅವರು, ತಮಿಳುನಾಡು ಪದೇ ಪದೇ ಕಾವೇರಿ ನೀರಿನ ಬಗ್ಗೆ ತಕರಾರು ತೆಗೆದು ಭಾವನಾತ್ಮಕವಾಗಿ ಪ್ರಚೋದಿಸುತ್ತಿದೆ. ಎರಡೂ ರಾಜ್ಯದ ಜನರ ಐಕ್ಯತೆಗೆ ಭಂಗ ತಂದು ದ್ವೇಷದ ದಳ್ಳುರಿಗೆ ತಳ್ಳುತ್ತಿದೆ ಎಂದು ದೂರಿದರು.

ವೇದಿಕೆ ಮುಖಂಡ ಸ್ವರ್ಣಕುಮಾರ್ ಮಾತನಾಡಿ, ಕಾವೇರಿ ನೀರಿಗಾಗಿ ಹೋರಾಟ ಮಂಡ್ಯ, ಮೈಸೂರು ಜಿಲ್ಲೆಯ ರೈತರ ಹೋರಾಟವಲ್ಲ. ಅದು ಕನ್ನಡಿಗರೆಲ್ಲರ ಹೋರಾಟ. ಮಂಡ್ಯ ಜಿಲ್ಲೆಯ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಲು ಪಟ್ಟಣದಿಂದ ಮಂಡ್ಯದವರೆಗೆ ಕಾರ್ಯಕರ್ತರು ಪಾದಯಾತ್ರೆ ನಡೆಸಿ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಪಾದಯಾತ್ರೆಯಲ್ಲಿ ವೇದಿಕೆಯ ರಾಜ್ಯ ಸಂಚಾಲಕ ಮುಷೀರ್ ಅಹಮದ್, ಅಧ್ಯಕ್ಷ ಡೇನಿಯಲ್, ಗೌರವಾಧ್ಯಕ್ಷ ಅಸ್ಲಾಂ ಪಾಷ, ಟಿ.ಎಂ.ಕುಮಾರ ಜಗದೀಶ್, ಸುರೇಶ್, ಪುಟ್ಟ, ಬಾಳೆಕಾಯಿ ಬಸವರಾಜು, ಮೋಹನ್‌ರಾಜ್, ಭೈರೇಶ್, ಶಶಿಧರ್, ಅರುಣ್, ಕೃಷ್ಣಪ್ಪ, ಅಯೂಬ್, ರಂಗಸ್ವಾಮಿ, ಕಾಂತರಾಜು ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.