ADVERTISEMENT

ನ್ಯಾಯಾಲಯ ಕಟ್ಟಡ ಕಾಮಗಾರಿ ಕುಂಠಿತ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2011, 10:35 IST
Last Updated 20 ಆಗಸ್ಟ್ 2011, 10:35 IST
ನ್ಯಾಯಾಲಯ ಕಟ್ಟಡ ಕಾಮಗಾರಿ ಕುಂಠಿತ
ನ್ಯಾಯಾಲಯ ಕಟ್ಟಡ ಕಾಮಗಾರಿ ಕುಂಠಿತ   

ತುರುವೇಕೆರೆ: ದಬ್ಬೇಘಟ್ಟ ರಸ್ತೆಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ ನ್ಯಾಯಾಲಯ ಕಟ್ಟಡ ಕಾಮಗಾರಿ ಕುಂಟುತ್ತಾ ಸಾಗಿದ್ದು ಇನ್ನೂ ಸೇವೆಗೆ ಲಭ್ಯವಾಗದ ಬಗ್ಗೆ ಕಾನೂನು ಸಚಿವ ಸುರೇಶ್‌ಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಶುಕ್ರವಾರ ನ್ಯಾಯಾಲಯ ಕಟ್ಟಡದ ಕಾಮಗಾರಿ ಪರಿಶೀಲನೆ ನಡೆಸಿದ ಅವರು, ಕಟ್ಟಡದ ಕಾಮಗಾರಿಯ ಕಳಪೆ ಗುಣಮಟ್ಟದ ಬಗ್ಗೆ ದೂರು ಬಂದಿವೆ. ಸದರಿ ಕಟ್ಟಡದ ಮಿಕ್ಕ ಕೆಲಸವನ್ನು ತ್ವರಿತ ಗತಿಯಲ್ಲಿ ಮುಗಿಸಿ ಅ.2 ಗಾಂಧಿ ಜಯಂತಿಯಂದು ಉದ್ಘಾಟನೆಗೊಳ್ಳುವಂತೆ ಇಲಾಖೆಗೆ ಹಸ್ತಾಂತರಿಸಬೇಕು ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಟ್ಟಡದ ಮೊದಲ ಅಂತಸ್ತಿಗೆ ರೂ.2.5ಕೋಟಿ ಮಂಜೂರಾಗಿದೆ. ಕಾಮಗಾರಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಆದೇಶಿಸಲಾಗಿದೆ. ಸಾರ್ವಜನಿಕರಿಗೆ ಅನುಕೂಲವಾಗುವಂತೆ ನ್ಯಾಯಾಲಯ ಆವರಣದಲ್ಲಿ ತಂಗುದಾಣ ಸೇರಿದಂತೆ ಇತರೆ ಮೂಲ ಸೌಲಭ್ಯ ಕಲ್ಪಿಸುವ ಬಗ್ಗೆ ಯೋಚಿಸಲಾಗುತ್ತಿದೆ ಎಂದರು. 

ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಟಿ.ಎಸ್. ಬೋರೇಗೌಡ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ನಾರಾಯಣಸ್ವಾಮಿ, ಸಹಾಯಕ ಎಂಜಿನಿಯರ್ ಸುವರ್ಣ, ವಕೀಲ ಡಿ.ಟಿ.ರಾಜಶೇಖರ್, ತಹಶೀಲ್ದಾರ್ ಟಿ.ಆರ್.ಶೋಭಾ ಇತರರು ಹಾಜರಿದ್ದರು.

ದುರಾಸೆಯಿಂದ ಭ್ರಷ್ಟಾಚಾರ
ದುರಾಸೆ ಮತ್ತು ನೈತಿಕತೆಯ ಅಭಾವ ಭ್ರಷ್ಟಾಚಾರಕ್ಕೆ ಕಾರಣವಾಗಿದೆ. ಮತ್ತೊಬ್ಬರ ಹಕ್ಕನ್ನು ವಂಚಿಸಿ ಅರ್ಹತೆ ಇರುವುದಕ್ಕಿಂತ ಹೆಚ್ಚಿನದನ್ನು ಪಡೆದುಕೊಳ್ಳುವುದು ಸಾಮಾಜಿಕ ದ್ರೋಹ. ಅಂತಹ ಕೃತ್ಯಗಳನ್ನು ಸಾರ್ವಜನಿಕವಾಗಿ ಖಂಡಿಸಬೇಕಿದೆ ಎಂದು ಸಚಿವ ಸುರೇಶ್‌ಕುಮಾರ್ ಅಭಿಪ್ರಾಯಪಟ್ಟರು.

ಸುರಭಿ ಸಂಗಮ ಹಾಗೂ ಇತರೆ ಸಂಘ ಸಂಸ್ಥೆಗಳು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಡಿ.ರಾಮಸ್ವಾಮಿ ಸ್ಮಾರಕ ಚರ್ಚಾಸ್ಪರ್ಧೆಯಲ್ಲಿ ವಿಜೇತರಾದ ವರಿಗೆ ಬಹುಮಾನ ವಿತರಿಸಿ ಮಾತನಾಡಿದರು

ಆನೆಕೆರೆ ಗಂಗಾಧರೇಶ್ವರ ಗ್ರಾಮಾಂತರ ಪ್ರೌಢಶಾಲೆ ಹಾಗೂ ಜೆ.ಪಿ.ಆಂಗ್ಲಶಾಲೆ ವಿದ್ಯಾರ್ಥಿಗಳು ಕ್ರಮವಾಗಿ ಮೊದಲನೇ ಮತ್ತು ಎರಡನೇ ಪಾರಿತೋಷಕ ಪಡೆದರು. ವಿಜಯವಿಠ್ಠಲ, ಟಿ.ಪಿ.ಶರಧಿ, ಜಿ.ಕೆ.ಜಗದೀಶ್ ಕ್ರಮವಾಗಿ ಮೊದಲ ಮೂರು ಬಹುಮಾನ ಪಡೆದರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ನಿಮ್ಹಾನ್ಸ್‌ನ ನಿಕಟಪೂರ್ವ ನಿರ್ದೇಶಕ ಡಾ.ಡಿ.ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಮನೋವೈದ್ಯ ಡಾ.ಬಿ.ಎನ್.ಗಂಗಾಧರ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಆರ್.ಮಲ್ಲಿಕಾರ್ಜುನ್, ಉಪಪ್ರಾಂಶುಪಾಲ ಕೆ.ಎಸ್.ನಾಗರಾಜ್, ಅತೀತ್ ಚಂದ್ರ ರಭಾ, ತಹಶೀಲ್ದಾರ್ ಟಿ.ಆರ್.ಶೋಭಾ, ಪಟ್ಟಣ ಪಂಚಾಯಿತಿ ಸದಸ್ಯ ದಿವಾಕರ್, ಎಪಿಎಂಸಿ ಸದಸ್ಯ ಕೊಂಡಜ್ಜಿ ವಿಶ್ವನಾಥ್, ಡಾ.ಎ.ನಾಗರಾಜ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪ್ರಹ್ಲಾದ್ ಭಾಗವಹಿಸಿದ್ದರು.

ಡಾ.ಚೌದ್ರಿ ನಾಗೇಶ್ ಸ್ವಾಗತಿಸಿದರು. ಗಂಗಾಧರ್ ದೇವರಮನೆ ವಂದಿಸಿದರು. ಕೆ.ಎಸ್.ರಮೇಶ್ ಪ್ರಾಸ್ತಾವಿಕ ಭಾಷಣ ಮಾಡಿದರು. ಟಿ.ಎಲ್.ನಾಗರಾಜ್ ನಿರೂಪಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.