ADVERTISEMENT

ಪಕ್ಷ ನೋಡಿ ಮತ ಹಾಕಬೇಡಿ

​ಪ್ರಜಾವಾಣಿ ವಾರ್ತೆ
Published 11 ಮೇ 2018, 7:17 IST
Last Updated 11 ಮೇ 2018, 7:17 IST

ತುಮಕೂರು: ವ್ಯಕ್ತಿ ನೋಡಿ ಮತ ಹಾಕಿ, ಪಕ್ಷ ನೋಡಿ ಮತ ಹಾಕಬೇಡಿ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಎನ್.ರಾಮಯ್ಯ ತಿಳಿಸಿದ್ದಾರೆ.

ನಗರದಲ್ಲಿ ನಡೆದ ದಲಿತ ಮತದಾರರ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು. ಸದಾಶಿವ ಆಯೋಗ ವರದಿ ಜಾರಿ ಮಾಡುವ ಬಗ್ಗೆ ಭರವಸೆ ನೀಡುವ, ದಲಿತರ ಶವಸಂಸ್ಕಾರಕ್ಕೆ ಜಮೀನು ನೀಡುವ, ಎಲ್ಲಾ ದೇವಾಲಯಗಳಿಗೆ ಹಾಗೂ ಸಾರ್ವಜನಿಕರ ಸ್ಥಳಗಳಿಗೆ ಮುಕ್ತ ಪ್ರವೇಶ ಕಲ್ಪಿಸುವ ಮನಸ್ಸುಳ್ಳ ವ್ಯಕ್ತಿಗೆ ಮತ ನೀಡಿ ಎಂದು ದಲಿತ ಮತದಾರರಲ್ಲಿ ಮನವಿ ಮಾಡಿದ್ದಾರೆ.

ಶವ ಸಂಸ್ಕಾರಕ್ಕೆ ಜಮೀನು ಮಂಜೂರು ಮಾಡಿದ ಸ್ಥಳಗಳಿಗೆ ದಲಿತರ ಶವಸಂಸ್ಕಾರಕ್ಕೆ ನೀಡಿರುವ ಜಾಗವೆಂದು ನಾಮಫಲಕವನ್ನು ಹಾಕಬೇಕು. ರಸ್ತೆ ಬದಿ, ಕೆರೆ ಕಟ್ಟೆಗಳಲ್ಲಿ ಶವಸಂಸ್ಕಾರ ಮಾಡುವುದನ್ನು ನಿಷೇದಿಸಬೇಕು. ಜಾತ್ರೆಗಳಲ್ಲಿ ಎಲ್ಲ ಸಮುದಾಯದ ಹೆಣ್ಣು ಮಕ್ಕಳ ಜೊತೆಯಲ್ಲಿ ದಲಿತ ಸಮುದಾಯ ಹೆಣ್ಣು ಮಕ್ಕಳಿಗೂ ಆರತಿ ತೆಗೆದುಕೊಂಡು ಹೋಗಲು ಅವಕಾಶ ನೀಡಬೇಕು. ಅಂತಹ ವ್ಯಕ್ತಿಗೆ ಮತ ನೀಡಿ ಎಂದರು.

ADVERTISEMENT

ದಲಿತ ಸಮುದಾಯ ವಿದ್ಯಾವಂತರು ಯೋಚಿಸಿ ಮತದಾನ ಮಾಡಬೇಕಾದ ಅನಿವಾರ್ಯತೆ ಇದೆ. ಸತತ 23 ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದರೂ ಸದಾಶಿವ ಆಯೋಗ ವರದಿಯನ್ನು ಯಾಕೆ ಜಾರಿಗೆ ಮಾಡಿಲ್ಲ ಎಂದು ಯೋಚನೆ ಮಾಡಬೇಕು. ಯಾಕೆಂದರೆ ಜಾರಿಗೆ ತಂದರೆ ರಾಜಕೀಯವಾಗಿ ಬಲಿಷ್ಠರಾಗಿ ಅಭಿವೃದ್ಧಿ ಪಥದಲ್ಲಿ ಸಾಗುವರು ಎಂಬ ಕಾರಣಕ್ಕೆ ತಂದಿಲ್ಲ ಎಂದು ತಿಳಿದುಕೊಳ್ಳಬೇಕು ಎಂದರು.

ದಲಿತರು ಮತದಾನ ಮಾಡುವ ಮುನ್ನ ದಲಿತರ ಬೇಡಿಕೆಗಳನ್ನು ಈಡೇರಿಸುವ ವ್ಯಕ್ತಿಗೆ ನಿಮ್ಮ ಮತ ನೀಡಿ ಎಂದು ರಾಮಯ್ಯ ಮನವಿ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.